ಒಲವಿನ ಜೀವನದಿ
.
ಉಕ್ಕುವ ಕಡಲಂಚಲ್ಲಿ
ಅಂಗಾತ ಮಲಗಿ ಬಂದೆ.
ಓಡುವ ನದಿ ತೀರದಲ್ಲಿ
ಧ್ಯಾನ ಮಾಡಿ ಬಂದೆ
ನಿನ್ನೆ ಬಿದ್ದ ಕನಸು
ನಿಜವಾಗಬಾರದೆಂದು ಯತ್ನಿಸಿದೆ.
ಕನಸೇನೆಂದು ಕೇಳಬೇಡಿ.....
ನನ್ನೊಲವ ಜೀವನದಿ ಬತ್ತಲೇಬಾರದು ...
ಸಪ್ತಕಡಲು ಬತ್ತಿದರೂ .....!!
ದಿನಪೂರ ಧಣಿವಳು ನನ್ನ ಮನೆಯೊಳಗೆ ಪ್ರೀತಿ ಸಹಬಾಳ್ವೆಯ ಸಿಹಿಪಾಕದ ಆಲಯದೊಳಗೆ;
ಬೇಕೆಂದೇ ಬೈದರೂ ಮುನಿಯದ ಹಸನ್ಮುಖಿ
ಖಾಲಿಜೇಬು ತೋರಿಸಿದರೆ
ತನ್ನ ಬೇಡಿಕೆಗಳನ್ನೆಲ್ಲ ತ್ಯಜಿಸುವ ಸಹನಶೀಲ
ತ್ಯಾಗ ಗುಣಸಂಪನ್ನೆ......
ಆಳ ಕಡಲು
ನೀಲ ಗಗನ
ಯಾವ ರಾಜ್ಯದವರೂ ಕಣ್ಣು ಹಾಕದ
ಯಾರಿಗೂ ಸೋಲದ
ನನ್ನ ಸ್ವಂತ ಕನಸಿನ ಕಾವೇರಿ
ನನ್ನೊಲವಿನ ಜೀವನದಿ ಆಕೆ.
Raviraj sagar.
No comments:
Post a Comment