ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಶೈಕ್ಷಣಿಕ ಲೇಖನಗಳು

ವಿದ್ಯಾಗಮ  ಕಲಿಕಾ ವಿಧಾನದ ವಾಠಾರ ಶಾಲೆಯ ಸವಾಲುಗಳು ಮತ್ತು ಸಾಧ್ಯತೆಗಳು

ಸರ್ಕಾರಿ ಶಾಲಾ ಸಬಲಿಕರಣಕ್ಕೆ ಸಕಾಲವಾಗಿದ್ದ ಈ ಸಮಯದಲ್ಲಿ ಎಡವಿದ್ದು ಎಲ್ಲಿ....?

ವಠಾರ ಶಾಲೆಯ ಮೂಲ ತತ್ವವೇ 'ಕಲಿಯಲು ಕಲಿಯುವುದು' ಆಗಿತ್ತು. ಮಕ್ಕಳನ್ನು ಜ್ಞಾನ ಸಂರಚನೆಯ ಮಾರ್ಗದತ್ತ ತೊಡಗಿಸುವುದು ಆಗಿತ್ತು.ಆದರೆ ಅದನ್ನು ಕ್ರಿಯಾತ್ಮಕವಾಗಿ ಅನುಷ್ಠಾನ ಮಾಡುವಾಗ ಈ ತಾತ್ವಿಕ ಅಂಶವನ್ನು ಅರಿಯುವ ಗೋಜಿಗೆ ಹೋಗಲಿಲ್ಲ. ಈಗಾಗಲೇ ವ್ಯಾಪಕವಾಗಿ ಹಬ್ಬಿರುವ ಕೊರೋನಾದ ಎದುರು ಆರೊಗ್ಯ  ಜಾಗೃತಿಯತ್ತ ಗಮನಹರಿಸಿದ್ದು ಸಹ ಅತೀ ಕಡಿಮೆ. ಈಗಾಗಲೇ ಸಿದ್ಧ ಮಾದರಿಯಲ್ಲಿ ಕಲಿತು ಕಲಿಸಿದ ಗುಂಪು ಕಲಿಕೆಗೆ ಮತ್ತೆ ಮರಳಿದೆವು. ಸಿದ್ಧಮಾದರಿಯ ದಾಖಲೆಗಳನ್ನೆ ನೋಡಿ ಕಲಿಕೆ ಅಳೆಯುವ, ಅದಕ್ಕೆ ಅಂಟಿಕೊಳ್ಳುವ  ಕೆಲವು ಅಧಿಕಾರಿ ವರ್ಗ, ಹಳೆಯದೇ ಚೆನ್ನಾಗಿತ್ತು ಎನ್ನುವ ನಮ್ಮ ಶಿಕ್ಷಕ ಬಳಗಕ್ಕೆ ,ಹಿಂದಿನ ಪದ್ಧತಿಯನ್ನು ಮರೆತು  ಹೊಸತನಕ್ಕೆ ಹೊಂದಿಕೊಳ್ಳಲು  ಸುಲಭವೂ ಆಗಿರಲಿಲ್ಲ. ಅಧಿಕ ಸಂಖ್ಯೆಯ ಮಕ್ಕಳು ಕಡಿಮೆ ಸಂಖ್ಯೆಯ ಶಿಕ್ಷಕರು ಇರುವ ಭಾಗದಲ್ಲೀ ಗ್ರಾಮೀಣ ಮಕ್ಕಳನ್ನು ಕಲಿಕೆಗೆ ತೊಡಗಿಸುವುದು ಸವಾಲಿನದು ಆಗಿತ್ತು. ಈ ನಡುವೆ ಕೋರೋನಾದಿಂದ ರಕ್ಷಿಸಿಕೊಳ್ಳುವುದನ್ನು ಮರೆತೆ ಬಿಟ್ಟಂತಾಗಿತ್ತು. ಬಹುತೇಕ ನಗರವಾಸಿಗಳಾಗಿರುವ ಶಿಕ್ಷಕ ವರ್ಗ ವಾರವಿಡೀ ಬಸ್ಸುಗಳ ಮೂಲಕ, ಉತ್ತರ ಕರ್ನಾಟಕ ಭಾಗದಲ್ಲಂತೂ ಆಟೋ, ಜೀಪುಗಳ ಮೂಲಕ, ಶಾಲೆಗೆ  ಬಂದು ಹೋಗುವಾಗ ಸಲೀಸಾಗಿ ಕೊರೋನಕ್ಕೆ ಆಹ್ವಾನ ನೀಡಿದಂತೆಯೇ ಆಗುತ್ತಿತ್ತು. ಇನ್ನೂ ತರಬೇತಿ, ಆಡಳಿತಾತ್ಮಕ ಕಾರಣಕ್ಕೆ ನಗರ ಜಿಲ್ಲಾ ಕೇಂದ್ರಕ್ಕೆ ಓಡಾಟ , ಸ್ವಂತ ಜಿಲ್ಲೆಗಳಿಗೆ ಓಡಾಟ ಮತ್ತಿತರ ಸಮಯದಲ್ಲಿ ಸೂಕ್ತ ಜಾಗ್ರತೆ ವಹಿಸದೆ ಕೋರೋನಾಕ್ಕೆ   ತುತ್ತಾಗಿದ್ದಾರೆ.ಹಾಗೆಂದು ವಿದ್ಯಾಗಮ ನಿಲ್ಲಿಸಿದ ಮಾತ್ರಕ್ಕೆ ಶಿಕ್ಷಕರಿಗೆ ಮಕ್ಕಳಿಗೆ ಬರುವುದಿಲ್ಲ ಎಂದು ಹೇಳಲಾಗದು. ಕೊರೋನಾ ಈಗ ಕೈ ಮೀರಿ ಬೆಳೆದಿದೆ. ಎಲ್ಲರೂ ತಮ್ಮೆಲ್ಲಾ ಕೆಲಸ ನಿಲ್ಲಿಸಿ ನಿಷ್ಕ್ರಿಯವಾದ ಮಾತ್ರಕ್ಕೆ ಕೋರೋನಾ ತೊಲಗುವುದಿಲ್ಲ. ನಮ್ಮ ಸರ್ಕಾರಗಳು ಮತ್ತು ಪ್ರಜೆಗಳೆಲ್ಲರ ಅಜಾಗೃತ ನಡೆ ಈಗಿನ ದುಸ್ಥಿತಿಗೆ ಕಾರಣ.

   ವಿದ್ಯಾಗಮ ದಿಂದಲೇ ಮಕ್ಕಳಿಗೆ , ಶಿಕ್ಷಕರಿಗೆ ಕೊರೋನಾ ಹಬ್ಬಿದೆ ಅನ್ನುವುದು ಸಮಂಜಸವಲ್ಲ.ಕೆಲವೆಡೆ ಮಕ್ಕಳು ಕೋರೋನಾಕ್ಕೆ ತುತ್ತಾಗಿರುವುದು ಸಹ ಪಾಠ ಮಾಡಲು ಬಂದ ಶಿಕ್ಷಕರಿಂದ ಅಲ್ಲ. ಕಡಿಮೆ ಪ್ರಮಾಣದಲ್ಲಿ  ಕೆಲವು ಶಿಕ್ಷಕರಿಂದ ಅಥವಾ ಮಕ್ಕಳಿಂದ ಹಬ್ಬಿರಲೂಬಹುದು.
ಆದರೆ ಇದಕ್ಕೆ ವಿದ್ಯಾಗಮ ಹೊಣೆಯಲ್ಲ.ವಿದ್ಯಾಗಮ ಕಲಿಕೆಯ ವಿಧಾನದಲ್ಲಿ ಹಲವು ಮಾರ್ಗಗಳು ಇದ್ದವು. ಆದರೆ ಬಹುತೇಕರು ಹಿಂದಿನ ಸಿದ್ಧ ಮಾದರಿಗೆ ಮರಳಿದರು. ಹಾದಿಬೀದಿ ಬದಿಯಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಮರದಡಿಗಳಲ್ಲಿ,ಗುಂಪುಗುಂಪಾಗಿ ಕಲಿಸಿದರು.ಅಧಿಕಾರಿ ವರ್ಗವು ಸಹ ಹಳೆಯ ಸಿದ್ಧ ಮಾದರಿಗೆ , ದಾಖಲೆ ನಿರ್ವಹಣೆಗಾಗಿ ಹಿಂದಿನ ಮಾದರಿಗೆ ಮರಳುವಂತೆ ಮಾಡಿತು. ವಾರಪೂರ್ತಿ ಶಾಲೆಗೆ ಹೋಗುವಂತೆ ಮಾಡಿ  ಕೋರೊನ ಹರಡಲು 
ವಿದ್ಯಾಗಮನವೇ ಕಾರಣ ಎನ್ನುವಂತೆ ವಿಶ್ಲೇಷಿಸಲು ಆರಂಭಿಸಿರುವುದು ವಾಸ್ತವದಲ್ಲಿ ಸಮಂಜಸವಲ್ಲ.

ಮುಂದಿನ ಮಾರ್ಗ .

 ಏನೇ ಇರಲಿ ವಿದ್ಯಾಗಮ ಕಲಿಕಾ ವಿಧಾನ  ನಿಲ್ಲದೆ ಮಕ್ಕಳನ್ನು ವಾರಕ್ಕೆ ಒಂದೆರಡು  ಬಾರಿ ಮಾತ್ರವಾರರು ಸರದಿ ತರಗತಿಗಳಂತೆ ಸಂಪರ್ಕಿಸುವಂತೆ  ಬೇರೆಬೇರೆ ರೂಪದ ನಿರಂತರ ಕಲಿಕಾ ಸಾಧ್ಯತೆ ಇರುವ ಕಲಿಕಾ ಮಾರ್ಗಗಳ ಮೂಲಕವಾದರೂ ಮಕ್ಕಳನ್ನು ತಲುಪಬೇಕಿದೆ. ಜ್ಞಾನ ಸಂರಚನಾ ಮಾರ್ಗಗಳತ್ತ ಮಕ್ಕಳು ತಮ್ಮನ್ನು ತಾವೇ ತೊಡಗಿಕೊಳ್ಳುವಂತೆ ಮಾಡುವ ಚಟುವಟಿಕೆಗಳ ಕಲಿಕಾ ಮಾದರಿಗಳನ್ನು ಕಂಡುಕೊಳ್ಳಬೇಕಿದೆ.


ಅಷ್ಟು ವರ್ಷಗಳಿಂದ ನಾವೆಲ್ಲರೂ ಒಂದು ಸಿದ್ಧ ಮಾದರಿಯಲ್ಲಿ ಕಲಿತು, ಒಂದು ಸಿದ್ಧ ಮಾದರಿಯಲ್ಲಿ ಕಲಿಸಿದ ನಾವು  ಸೇರಿದಂತೆ ಇಡೀ ಶೈಕ್ಷಣಿಕ ವ್ಯವಸ್ಥೆಯಲ್ಲಿ, ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆ ತರುವುದು ಅಷ್ಟು ಸುಲಭವೇನಲ್ಲವಲ್ಲ?
ಈಗಾಗಲೇ ಒಗ್ಗಿಕೊಂಡ ಸಿದ್ಧ ಮಾದರಿಯನ್ನು ಮರೆಯುವುದು  ಹೊಸ ಮಾರ್ಗದತ್ತ ಸಾಗುವುದಕ್ಕಿಂತ  ಕಷ್ಟಕರವೇ ಅಲ್ಲವೇ?  ಇದು ನಿಧಾನ ಪ್ರಕ್ರಿಯೆ.

ಈ ವರ್ಷದ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ವಠಾರ ಶಾಲೆಯ ಮೂಲಕ  ನಮಗೆ ಸಿಕ್ಕದ್ದು ಜ್ಞಾನ ಸಂರಚನೆಯ ಮಾರ್ಗಗಳನ್ನು ಕಂಡುಕೊಳ್ಳಲು ಅವಕಾಶ ಒದಗಿ ಬಂದದ್ದು. ಮಕ್ಕಳ ಜ್ಞಾನವನ್ನು ಅವರೇ ಕಟ್ಟಿಕೊಳ್ಳಲು ಸೂಕ್ತ ಮಾರ್ಗ ನಿರ್ಮಾಣ ಮಾಡಬೇಕು ಅಷ್ಟೇ. ಈ ಬದಲಾವಣೆಯ ಕುರಿತು ಚಿಂತಿಸುವ ಅವಕಾಶವನ್ನು ಸರ್ಕಾರಿ ಶಾಲಾ ಸಬಲೀಕರಣಕ್ಕೆ ಶಕ್ತವಾಗಿ ಬಳಸಿಕೊಳ್ಳಬೇಕಿದೆ.

ಈಗ ನಮ್ಮ ಮುಂದಿರುವುದು ನಾವು ಸಾಗಲಾರಂಭಿಸಿದ ಈ ದಾರಿಯಲ್ಲಿ ಇನ್ನೂ ಕೆಲವು ಹೆಜ್ಜೆ ಮುನ್ನಡೆದು ಮಕ್ಕಳ ಜ್ಞಾನವನ್ನು ಅವರೇ ಮರು ಕಟ್ಟಿಕೊಳ್ಳುವ ಜ್ಞಾನ ಸಂರಚನಾ ಮಾರ್ಗಗಳನ್ನು ರೂಪಿಸುವುದು ನಮ್ಮೆಲ್ಲರ ಸವಾಲು. ಸಾಧ್ಯತೆಗಳನ್ನು ನಮ್ಮ ನಮ್ಮ ಕಲಿಕಾ ಪರಿಸರಕ್ಕೆ ತಕ್ಕಂತೆ ಕಂಡುಕೊಳ್ಳಲು ಸ್ವಾತಂತ್ರ ನೀಡಿದರೆ ನಮ್ಮ ಶಿಕ್ಷಕ ವರ್ಗ ಖಂಡಿತವಾಗಿ ಆ ನಿಟ್ಟಿನಲ್ಲಿ ಶ್ರಮಿಸುತ್ತದೆ. ಕನ್ನಡಿಗರ ಗ್ರಾಮೀಣ ಭಾಗದ ಶಾಲೆಗಳಾಗಿ ಆರ್ಥಿಕ ದುರ್ಬಲರ ಶಾಲೆಗಳಾಗಿ ಉಳಿದಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ನಾವಲ್ಲದೆ ಮತ್ತಿನ್ಯಾರು ಶ್ರಮಿಸಬೇಕು.

 ಸಿದ್ಧಮಾದರಿಯ ಆಚೆ ಜ್ಞಾನ ಸಂರಚನೆಯ ಮಾರ್ಗಗಳತ್ತ  ನಮ್ಮ ದಿಟ್ಟ ಹೆಜ್ಜೆ ಆರೋಗ್ಯ ಅರಿವಿನ ಜೊತೆಗೆ ಸಾಗಬೇಕು.  ಮೊದಲು ಆರೋಗ್ಯ. ಆನಂತರ ಶಿಕ್ಷಣ ನಿಜ. ನಮ್ಮ ನಮ್ಮ ಕಲಿಕಾ ಪರಿಸರದಲ್ಲಿ ಸಾಧ್ಯವಿರುವಷ್ಟಾದರೂ ಜ್ಞಾನ ಸಂರಚನಾ ಮಾರ್ಗಗಳತ್ತ ಪಯಣಿಸಬೇಕೇ ಹೊರತು ಪಯಣವನ್ನೇ ನಿಲ್ಲಿಸುವುದಲ್ಲ. ವಿದ್ಯಾಗಮ ಕಲಿಕಾ ಪಯಣ ಸೂಕ್ತ ಆರೋಗ್ಯಕರ  ಮಾದರಿಯೊಂದಿಗೆ ಮುಂದುವರಿಯಬೇಕು.

#ರವಿಚಂದ್ರ / ರವಿರಾಜ್ ಸಾಗರ್.
ಸಿ.ಹಿ. ಪ್ರಾಥಮಿಕ ಶಾಲೆ ಮಲ್ಕಾಪುರ. ಮಾನ್ವಿ.ರಾಯಚೂರು.
9980952630.

No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...