ಜೋಗದಸಿರಿಯ ಉಳಿಸುವ ಬನ್ನಿ..
ಮಲೆನಾಡು ನಮ್ಮದು ಹಸಿರು ಸೀಮೆ ನಮ್ಮದು
ಈ ಹಸಿರಿಗೆ ನೀರುಣಿಸುವ ಶರಾವತಿ ನಮ್ಮದು
ರಕ್ಕಸ ಬಾಯಿಯ ಬೆಂಗಳೂರಿಗೆ
ಕಾವೇರಿ ಕಬಿನಿ ಇಂಗಿಹೋದವು
ಕನ್ನಡ ಕಲಿಯದ ಐಟಿ ಬೀಟಿಗಳು
ಕೇಕೆ ಹಾಕುತ್ತಾ ತಣ್ಣಗೆ ಬೆಳೆದರು
ಕಾವೇರಿ ಕಣಿವೆಯ ರೈತಾಪಿ ಜನಗಳು
ಐಟಿ ಬೀಟಿ ಕಂಪೆನಿಗಳಲ್ಲಿ ಕೂಲಿಗಿಳಿದರು
ಧಣಿಗಳ ದುಡ್ಡಿಗೆ ಹೊಲವನೆ ಮಾರಿ
ಮಹಾನಗರದಿ ಕಳೆದು ಹೋದರು.
ನಮಗೆ ಆ ಗತಿ ಬೇಡ ಸ್ವಾಮಿ
ನಿತ್ಯೋತ್ಸವ ನಾಡನು ಉಳಿಸೋಣ
ಜೋಗದ ಸಿರಿಯ ಉಳಿಸೋಣ..
ದುಡ್ಡಿನ ಅಮಲಲಿ ಕುಣಿಯುವ ಜನಕೆ
ನೆಲ ನೀರಿನ ಅರಿವೇ ಇಲ್ಲದೇ
ಕೆರೆ ನದಿಗಳ ನಾಶ ಮಾಡಿ..
ರಿಯಲ್ ಎಸ್ಟೇಟ್ಗೆ ಬಲಿ ಕೊಟ್ಟರಲ್ಲ...
ನೀರಿನ ಮೂಲ ನಾಶ ಮಾಡಿ
ಇಲ್ಲಿಗೆ ಬರುವುದು ನ್ಯಾಯವೇ ಹೇಳಿ ?
ಉತ್ತರಿಸಿ ...ಬೆಂಗಳೂರಿಗರೆ ಉತ್ತರಿಸಿ..?
ನೆಲ ಜಲ ಕಾಳಜಿ ಮರೆತು ಆಳುತಿಹ
ಮಂತ್ರಿಗಳೇ ನೀವ್ ಉತ್ತರಿಸಿ...
ಶರಾವತಿ ನೆಲದ ಹಸಿರು ಸೀಮೆಯ
ನೀರನು ಎಲ್ಲಿಗೂ ನೀಡುವುದಿಲ್ಲ..
ನಿಸರ್ಗದ ಸ್ವತ್ತದು ನಿಸರ್ಗಕೆ ಉಳಿಯಲಿ
ಮಳೆನಾಡನು ಬರಿದು ಮಾಡದಿರಿ
ನಿತ್ಯೋತ್ಸವ ಬೀಡನು ಉಳಿಸುವ ಬನ್ನಿ
ಸಹ್ಯಾದ್ರಿ ಸೀಮೆಯ ಉಳಿಸುವ ಬನ್ನಿ..
ಜೋಗದ ಸಿರಿಯ ಉಳಿಸುವ ಬನ್ನಿ..
ರವಿರಾಜ್ ಸಾಗರ್ .ಮಂಡಗಳಲೇ.
No comments:
Post a Comment