ಉತ್ತರ ಕರ್ನಾಟಕದ ಕಾರ ಹುಣ್ಣಿಮೆಯ ವಿಶೇಷ
ಹೊಲದಲ್ಲಿ ವರ್ಷ ಪೂರ್ತಿ ರೈತನೊಂದಿಗೆ ದುಡಿಯುವ ಎತ್ತುಗಳಿಗಾಗಿಯೆ ಇರುವಂತಹ ಹಬ್ಬ ಕಾರ ಹುಣ್ಣಿಮೆ. ಈ ಹುಣ್ಣಿಮೆಯಂದು ರೈತರು ತಮ್ಮ ಹಸು,ಕರು,ಎತ್ತುಗಳನ್ನು ಊರ ಹೊರಗಿನ ಹಳ್ಳ,ಕೆರೆ ಅಥವಾ ಬಾವಿಯ ಹತ್ತಿರ ಕರೆದುಕೊಂಡು ಹೋಗಿ ಅವುಗಳಿಗೆ ನೀರಿನಿಂದ ಸ್ನಾನ ಮಾಡಿಸಿ ವಿವಿಧ ರೀತಿಯ ಅಲಂಕಾರಿಕ ವಸ್ತುಗಳಿಂದ ಅಲಂಕರಿಸುತ್ತಾರೆ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಈ ಅಲಂಕಾರ ರೂಪು ಪಡೆಯುತ್ತದೆ.ಕೊರಳಲ್ಲಿ ವಿವಿಧ ರೀತಿಯ ಸರಪಳಿ (ಜಂಗು) ,ಸರ ಗಂಟೆ ಹಾಗೂ ಕೊಂಬು ಗಳಿಗೆ ಹಿತ್ತಾಳೆ ಯಿಂದ ತಯಾರಿಸಿದ ಮುಚ್ಚಳ ಜೊತೆಗೆ ಬಣ್ಣ ಬಣ್ಣದ ದಾರಗಳಿಂದ ತಯಾರಿಸಿದ ಗೊಂಡೆಗಳು,ಕಾಲುಗಳಿಗೂ ಕೂಡ ಹಿತ್ತಾಳೆಯ ಗೆಜ್ಜೆ ಗಳು, ಎತ್ತಿನ ಸೊಂಟಕ್ಕೆ (ಬೆನ್ನಿಗೆ) ವಿಷೇಶ ರೀತಿಯ ಬಣ್ಣ ಬಣ್ಣದ ದಾರದಿಂದ ತಯಾರಿಸಿದ ಪಟ್ಟಿಗಳು ಬೆನ್ನ ಮೇಲೆ ವಿವಿಧ ರೀತಿಯ ಕುಸುರಿಯ ಕಸೂತಿ ಹಾಕಿರುವ ಬಟ್ಟೆಗಳು ಹೀಗೆ ಹಲವಾರು ರೀತಿಯ ಅಲಂಕಾರ ಮುಗಿಸಿ ಎತ್ತಿಗೆ ಗೊಟ್ಟ ಹಾಕುತ್ತಾರೆ.
ಗೊಟ್ಟ ಎಂದರೆ ಒಂದು ಮೊಳದಷ್ಟು ಬಿದಿರಿನ ಕೊಳವೆಯಲ್ಲಿ ಮೊಟ್ಟೆಯೊಡೆದು ಹಾಕುತ್ತಾರೆ ಅದರಲ್ಲಿ ಕಾರಿಂಗ ಎನ್ನುವ ಗಿಡಮೂಲಿಕೆಯ ಪುಡಿ ಸೇರಿಸಿ ಎತ್ತಿನ ಬಾಯಿಯೊಳಗೆ ಸುರಿಯುತ್ತಾರೆ.
ಊರ ಅಗಸಿಯೊಳಗೆ ಪ್ರವೇಶ (ಊರಿನ ಮುಖ್ಯ ದ್ವಾರ )
ಊರಿನ ಪ್ರಮುಖ ಗೌಡರ ಎತ್ತುಗಳು ಮೊದಲು ಅಗಸಿಯ ಬಾಗಿಲು ಪ್ರವೇಶಿಸುತ್ತವೆ. ನಂತರ ಅವುಗಳ ಹಿಂದೆ ಬೇರೆ ಬೇರೆಯ ಎತ್ತುಗಳೂ ಪ್ರವೇಶ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ.
ಹುಣ್ಣಿಮೆಯ ನಂತರ ಕರಿ ಹರಿಯುವ ಕಾರ್ಯಕ್ರಮ .ಈ ದಿನ ಸಾಯಂಕಾಲ ಊರ ಅಗಸಿ ಬಾಗಿಲಿಗೆ ಮಾವಿನ ತೋರಣದಿಂದ ಸುಣ್ಣ,ಜಾಜಿ (ಹುರಮಂಜು)ದಿಂದ ಅಲಂಕರಿಸಿ ಒಂದು ಉದ್ದನೆಯ ಹಗ್ಗದಲ್ಲಿ ಮಾವಿನ ತೋರಣ, ಬಾಳೆ ಹಣ್ಣು,ಕೊಡ ಬೆಳೆ ,ಹೀಗೆ ಹಲವಾರು ವಸ್ತುಗಳನ್ನು ಪೋಣಿಸಿ ಅಗಸಿಯ ಬಾಗಿಲಿಗೆ ಆಚಿಚೆಗೆ ಕಟ್ಟಿ ಎತ್ತುಗಳನ್ನು ಓಡಿಸುತ್ತಾರೆ .ಆ ಹಗ್ಗವನ್ನು ಹರಿದುಕೊಂಡು ಎತ್ತುಗಳು ಊರನ್ನು ಪ್ರವೇಶಿಸಿದಾಗ ಕರಿ ಹರಿಯುವ ಕಾರ್ಯ ಪೂರ್ಣಗೊಳ್ಳುತ್ತದೆ.
ಸಸಿ ಆಡೋ ಹಬ್ಬ..
ಉತ್ತರ ಕರ್ನಾಟಕದ ಭಾಗದಲ್ಲಿ ಕಾರಹುಣ್ಣಮಿಯಂದು ಎತ್ತುಗಳನ್ನು ಅಲಂಕರಿಸಿ ಪೂಜಿಸುವ ರೈತಾಪಿ ಜನರಿಗೆ ಇದು ಸಂಭ್ರಮದ ಹಬ್ಬ. ಅಷ್ಟೇ ಅಲ್ಲ ಮುಂಗಾರು ಆರಂಭ ಆಗುವ ಈ ಕಾರ ಹುಣ್ಣಿಮೆಯ ಅವಧಿಯ ನಂತರ ಮುಂದಿನ ಬಿತ್ತನೆ ಕಾರ್ಯಕ್ಕೆ ಪೂರ್ವ ಸಿದ್ಧತೆಯಾಗಿಯೂ ಪರಂಪರೆಯಿಂದ ಆಚರಣೆಯಲ್ಲಿ ಬಂದಿದೆ.
ಅಲ್ಲದೆ ಮರುದಿನ
ಮಕ್ಕಳೆ ಲ್ಲ ಸೇರಿ ಸಸಿ ಆಡುವ ಆಟ ಆಡುತ್ತಾರೆ ಇದು ಈ ಹಬ್ಬದ ಮತ್ತೊಂದು ವಿಶಿಷ್ಟತೆ.
ಒಂದು ವಾರ ಮೊದಲೇ ಬತ್ತ , ಜೋಳ ಮತ್ತಿತರೆ ಬಿತ್ತನೆ ಬೀಜಗಳನ್ನು ಮೊದಲೇ ಸಣ್ಣ ಸಣ್ಣ ತೆಂಗಿನ ಚಿಪ್ಪು ಅತ್ವ ಮತ್ತಿ ತರೆ ಬಾಕ್ಸ್ ಗಳಲ್ಲಿ ಮಣ್ಣು ತುಂಬಿ ಮಡಿ ಮಾಡಿ ಮೊಳಕೆ ಬರಿಸಿಟ್ಟುಕೊಂಡು ಬಿತ್ತಿ ಸಸಿಯಾಗುವಂತೆ ನೋಡಿಕೊಳ್ಳುತ್ತಾರೆ.ಸಸಿಗಳನ್ನು ತಂದು ಸಣ್ಣ ಸಣ್ಣ ಹೆಣ್ಣು ಮಕ್ಕಳನ್ನು ಮದುವೆ ಗಂಡುಗಳಂತೆ ಅಲಂಕರಿಸಿ ,ಚಪ್ಪರ ಹಾಕಿ , ಹಾರ ತಾಳಿಯನ್ನು ಸಿದ್ಧವಿಟ್ಟು ಕೊಂಡು ಮಕ್ಕಳ ಆಟದ ಓಲಗ,ಡೊಳ್ಳು ಸಹಿತ ಹಾಡುತ್ತಾ ಕುಣಿಯುತ್ತ ಮದುವೆ ಮಾಡಿ ಸಸಿ, ಹಾಗೂ ಆರತಿಯೊಂದಿಗೆ ಬೆಳಗುತ್ತ ಹಾಡುತ್ತಾರೆ.ಮನೆಯಿಂದಲೇ ಸಿದ್ಧಪಡಿಸಿಕೊಂಡು ಬುತ್ತಿ ಕಟ್ಟಿಕೊಂಡು ಹೋಗಿರುತ್ತಾರೆ.. ಎಲ್ಲ ಮಕ್ಕಳೂ ಸೇರಿ ಮದುವೆ ಊಟದಂತೆ ಸಂಭ್ರಮಿಸುತ್ತ ಆಡುವ ಸಾಂಪ್ರದಾಯಿಕ ಆಟವಾಗಿ ಸಸಿ ಆಡುವ ಆಟ ಈಗಲೂ ಉತ್ತರ ಕರ್ನಾಟಕದ ಭಾಗದಲ್ಲಿ ಚಾಲ್ತಿಯಲ್ಲಿದೆ. ಈ ಆಟವನ್ನು ಮಕ್ಕಳು ಕಾರಹುಣ್ಣಿಮೆಯ ಮರುದಿನ ಮಾತ್ರ ಆಡುತ್ತಾರೆ..
ಮುಂಗಾರು ಆರಂಭದ ಈ ಕಾರಹುಣ್ಣಿಮೆಯ ಅವಧಿಯಲ್ಲಿ ಇನ್ನೇನು ಮುಂಗಾರು ಆರಂಭವಾಗುವ ಕಾಲವಾದರಿಂದ ಮುಂಗಾರನ್ನು ಸಂಭ್ರಮಿಸುವ ಬಿತ್ತನೆ ಕಾರ್ಯಕ್ಕೆ ಎತ್ತುಗಳನ್ನು ಸಜ್ಜುಗೊಲಿಸುತ್ತ ರೈತಾಪಿ ಜನ ಸಂಬ್ರಮದಿಂದ ಸಜ್ಜಾಗುವ ಹಬ್ಬವಾಗಿ ಪರಂಪರೆಯಿಂದ ಚಾಲ್ತಿಯಲ್ಲಿದ್ದು ಈ ಹಬ್ಬಕ್ಕೆಂದೇ ಹಾಡುವ ಜಾನಪದ ಹಾಡುಗಳು ಸಹ ಚಾಲ್ತಿಯಲ್ಲಿದೆ.
ರವಿರಾಜ್ ಸಾಗರ್.
No comments:
Post a Comment