ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 31 December 2018

ಬೀರು ದೇವರ ಮನಿ ಅವರ ಬೆಳಕಿನ ಒಂಟಿ ನಡಿಗೆ

ಕಾವ್ಯ ಬೆಳಕಿನತ್ತ "ಬೆಳಕಿನ ಒಂಟಿ  ನಡಿಗೆ

ಸಾಹಿತ್ಯ ಸನ್ಮಿತ್ರ ಬೀರು ದೇವರಮನಿಯವರ ಮೊದಲ ಪ್ರಯತ್ನದಲ್ಲೇ ಕಾವ್ಯ ಬೆಳಕಿನ ಜಾಡು ಹಿಡಿದು ಪಯಣಿಸಿದ್ದಾರೆ.ಅವರ ಬೆಳಕಿನ ಒಂಟಿ ನಡಿಗೆ ಕವನ ಸಂಕಲನ ಇತ್ತೀಚೆಗೆ ಬಿಡುಗಡೆ ಆಗಿದೆ.ನಮ್ಮ ರಾಯಚೂರಿನ ಮತ್ತೊಬ್ಬ ಭರವಸೆಯ ಕವಿಯಾಗಿ ಸಾಹಿತ್ಯ ಕೃಷಿಗೆ ಇಳಿದಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನವನ್ನು ಪಡೆದುಕೊಂಡಿರುವ ಈ ಕೃತಿ ಹಲವು ವೈವಿಧ್ಯಮಯ ಕವಿತೆಗಳನ್ನು ಒಳಗೊಂಡಿದೆ .ಸದಾ  ಕ್ರಿಯಾಶೀಲವಾಗಿರುವ ದೇವರಮನಿ ಅವರು  ತಮ್ಮ ಕವಿತೆಗಳಲ್ಲಿ ಅವ್ವ ಅಣ್ಣ ಮತ್ತಿತರ ಸಂಬಂಧಗಳು ಕುರಿತು ಭಾವನಾತ್ಮಕ ನುಡಿಗಳಲ್ಲಿ ಕವಿತೆಯನ್ನು ಕಟ್ಟಿದ್ದಾರೆ .ಹಲವು ಕವಿತೆಗಳು ಮನುಷ್ಯ ಸಂಬಂಧ ಕುರಿತು ಹೇಳುತ್ತವೆ .ಬದುಕಿನ ವಿವಿಧ ಮಜಲುಗಳು ಅವರ ಕವಿತೆಯ ವಸ್ತುವಾಗಿದೆ . ಕಳೆದುಕೊಂಡ ಬಾಲ್ಯ ಕವಿತೆಯಲ್ಲಿ  ಬಾಲ್ಯಕ್ಕೆ ೆ ಬಾಲ್ಯಕ್ಕೆ ಹೊರಳಿದ್ದಾರೆ. ಬಿಸಿಲು ನಾಡು ರಾಯಚೂರು ನಿಂದ ಬೆಂಗಳೂರು ಸೇರಿರುವ ಅವರು ತಮ್ಮ ಕವಿತೆಯಲ್ಲಿ ತಮ್ಮ ಭಾಷೆಯನ್ನು ಕೆಲವು ಕವಿತೆಗಳಿಗೆ ಬಳಸಿದ್ದರೆ ಅವರ ಕವಿತೆಗೆ ಇನ್ನಷ್ಟು ಕಾವ್ಯಲಯ ಬರುತಿತ್ತು ಎನಿಸಿತು. ಅದನ್ನು ನನ್ನವ್ವ ಕವಿತೆಯಲ್ಲಿ ಗುರುತಿಸಬಹುದು.ನನ್ನಾಕೆ ಕವಿತೆ ಕಾಡುವಂತಿದೆ. ಆಕೆ ಸುಗಂಧ ಭರಣಿಯ ಸಂಮ್ಮೋಹಿತೆ ಎಂದೇ ಅವರೇ ಹೇಳಿದ್ದಾರೆ.

ಹೊಸ ಭರವಸೆ ಹೊತ್ತ ಅವರ ಕವಿತೆಗಳಲ್ಲಿ ಅವರು ಸಾಹಿತ್ಯ ಕೃಷಿಗೆ ಭರವಸೆಯ ಬೆಳೆಗಾರಾಗಿ ಕಾಣಿಸುತ್ತಾರೆ. ಹೊಸ ಬರಹಗಾರರನ್ನು ಸ್ವಾಗತಿಸಿ ಪ್ರೊತ್ಸಾಹಿಸುವ
ಕಾರ್ಯ ನಮ್ಮದಾಗಬೇಕಾಷ್ಠೆ .  ಕವಿತೆ ಗಳು ಅತ್ಯಂತ ಉತ್ತಮ ಎಂದು ಪಂಡಿತರು ಹೇಳಿದ ಪುಸ್ತಕ ಮಾತ್ರ ಬೆಂಬಲಿಸುವ ಅತ್ವಾ ಹೊಸತನ್ನು ಅಸಡ್ಡೆಯಿಂದ ನೋಡದೆ ಒಂದಿಷ್ಟು ಮುಕ್ತವಾಗಿ ವಿಶಾಲವಾಗಿ ಯೋಚಿಸಿ ಕೈಹಿಡಿದು ನಡೆಸಿ.  ಒಂದು ಕೃತಿ ಹೇಗೆ ಇರಲಿ ಒಂದಿಷ್ಟು ಧನಾತ್ಮಕವಾಗಿ ಪ್ರೋತ್ಸಾಹಿಸಿದರೆ ಯಾರು ಏನನ್ನು ಕಳೆದುಕೊಳ್ಳುವುದಿಲ್ಲ.. ಅತ್ವಾ ಕೇವಲ ಪ್ರಸಿದ್ದರ ಪುಸ್ತಕದ ಬಗ್ಗೆ ಮಾತ್ರ ಬರೆದು ಬೀಗಿದರೆ ಸಾಲದು.ಹೊಸಬರನ್ನು ಸ್ವಾಗತಿಸೋಣ.  ಬೀರು
ಅವರ ಪುಸ್ತಕ  ದೇವರ ಮನಿ ಪ್ರಕಾಶನದಲ್ಲಿ ಲಭ್ಯ.ಅವರೊಂದಿಗೆ ಕರೆ ಮಾಡಿ ಮಾತಾಡಿ.8105788751.
ನಿಮ್ಮ ರವಿರಾಜ್ ಸಾಗರ್.

Sunday 16 December 2018

ಉದ್ಯೋಗ ಖಾತ್ರಿ ಯೋಜನೆಯ ಮಹತ್ವದ ಮಾಹಿತಿಗಳು

ಎಲ್ಲಾ ಸಮಸ್ತ ನಾಗರೀಕ ಬಾಂಧವರಲ್ಲಿ ತಿಳಿಸುವುದೇನೆಂದರೆ,
ನಮ್ಮ ಭಾರತ ದೇಶದಲ್ಲಿ ಅತೀ ಮುಂಚೂಣಿಯಲ್ಲಿರುವ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

ಇದರ ಅಡಿಯಲ್ಲಿ ತಮ್ಮ ಹತ್ತಿರದ  ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ ಉದ್ಯೋಗ ಚೀಟಿ (job card) ಮಾಡಿಸಿ ಕೊಳ್ಳಲು ವಿನಂತಿ. 

ಒಂದು ಕುಟುಂಬಕ್ಕೆ 150 ದಿನಗಳ ಉದ್ಯೋಗ ಖಾತರಿ,ಒಂದು ದಿನಕ್ಕೆ 249/-ಕೂಲಿ ದರವನ್ನಾಗಿ ನಿಗದಿ ಪಡಿಸಲಾಗಿದೆ.

ಇದರ ಮುಖ್ಯ ಉದ್ದೇಶ ಗ್ರಾಮೀಣ ಬಡ ಜನರಿಗೆ ಆಧಾರವಾಗಿ ನೈಸಗ೯ಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥಿ೯ಕ ಭದ್ರತೆ ಒದಗಿಸುವುದು ಮತ್ತು ಆಸ್ತಿ ಸೃಜನೆ ಮಾಡುವುದಾಗಿದೆ.

ಇದರಿಂದಾಗುವ ಪ್ರಯೋಜನಗಳು:-

1.ಸಕಾ೯ರದಿಂದ ವಸತಿ ಮಂಜೂರಾದರೆ ಈ ಯೋಜನೆಯ ಅಡಿಯಲ್ಲಿ ಕೂಲಿ ಹಣ 22,410 ರೂ/- ದೊರೆಯುತ್ತದೆ.

2.ದನದ ಕೊಟ್ಟಿಗೆ ,ಕುರಿ ಶೆಡ್,ಮೇಕೆ ಶೆಡ್,ಕೋಳಿ ಶೆಡ್,ಹಂದಿ ಶೆಡ್ ನಿಮಾ೯ಣಕ್ಕೆ 43,000/- ದೊರೆಯುತ್ತದೆ.

3. ಜಮೀನು ಸಮತಟ್ಟು ಮಾಡಲು 10,000/- ದೊರೆಯುತ್ತದೆ.

4. ಜಮೀನಿನಲ್ಲಿ ತಡೆ ಗೋಡೆ( ರಿವೀಟ್ ಮೆಂಟ್ ) ಕಟ್ಟಲು ಪ್ರತೀ ರೈತರಿಗೆ 1 ಲಕ್ಷ ರೂ/- ವರೆಗೆ ದೊರೆಯುತ್ತದೆ.

5.ಜಮೀನಿನಲ್ಲಿ ಕೃಷಿ ಹೊಂಡ ನಿಮಾ೯ಣ ಮಾಡಲು 43.000/- ದೊರೆಯುತ್ತದೆ.

6.ಜಮೀನಿನಲ್ಲಿ ಕೊಳವೆ ಬಾವಿಗೆ ಹಿಂಗು ಗುಂಡಿ ನಿಮಾ೯ಣ ಮಾಡಲು 19.000/- ದೊರೆಯುತ್ತದೆ.

7. ಮನೆಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗೆ 30.000/- ದೊರೆಯುತ್ತದೆ.

8. ತಮ್ಮ ಜಮೀನುಗಳಲ್ಲಿ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳು

   ಬೆಳೆ         ಹೆಕ್ಟೇರ್ ಗೆ

a. ತೆಂಗು   - 62.496/-
b. ಗೇರು    - 72.048/-
c. ಮಾವು,ಸಪೋಟ  - 101957
d. ದಾಳಿಂಬೆ - 59879/-
e. ಸೀಬೆ  -  94704/-
f.  ಸಿಟ್ರಸ್ - 71316/-
g. ಹುಣಸೆ - 94704/-
h.ಸೀತಾಫಲ  -  53330/-
i. ನುಗ್ಗೆ     -    116996/-
j. ಬಾಳೆ   -    211656/-
k. ಪಪ್ಪಾಯ - 205498/-

9. ತೇಗ, ವನ್ನೆ, ಬೀಟೆ, ಶ್ರೀಗಂಧ,ಅಕೇಶಿ, ರಕ್ತಚಂಧನ, ಸಿಲ್ವರ್, ಟೇಕ್ ಇತರೆ ಜಾತಿಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಲು MGNREGA  ಯೋಜನೆಯಲ್ಲಿ ಸಹಾಯ ಧನ  ದೊರೆಯುತ್ತದೆ.

10. ಹಿಪ್ಪುನೇರಳೆ ಹೊಸ ನಾಟಿ ಮತ್ತು ಹಿಪ್ಪುನೇರಳೆ ಮರದ ಕಡ್ಡಿ ನೆಡಲು ಸಹಾಯ ಧನ ದೊರೆಯುತ್ತದೆ.

11. ಮೀನು ಸಾಕಾಣಿಕೆ ತೊಟ್ಟಿ ನಿಮಿ೯ಸಲು ಸಹಾಯ ಧನ ದೊರೆಯುತ್ತದೆ.

12. ಎರೆ ಹುಳು ಗೊಬ್ಬರ ತಯಾರಿಸುವ ತೊಟ್ಟಿ ನಿಮಾ೯ಣಕ್ಕೆ ಸಹಾಯ ಧನ  ದೊರೆಯುತ್ತದೆ.

ಇನ್ನೂ ಆನೇಕ ಅನುಕೂಲಗಳು MGNREGA ಯೋಜನೆಯಲ್ಲಿ ನೆರವಾಗುತ್ತಿವೆ.

ಹೆಚ್ಚಿನ ಮಾಹಿತಿಗಾಗಿ :-
ನಿಮ್ಮ ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ.

Wednesday 5 December 2018

ನೌಕರರ ರಜೆಗಳ ಬಗ್ಗೆ .ಹಾಗೂ ಸೌಲಭ್ಯಗಳ ಮಹತ್ವದ ಸಂಗತಿ ಅರಿಯಿರಿ.

ನಾಮನಿರ್ದೇಶನದ  ಪ್ರಾಮುಖ್ಯತೆ
------------------------------------
  ಸರ್ಕಾರಿ  ನೌಕರ  GPF , KGID , LIC , FBF , KGIS , DCRG  , Family pension , ಅಲ್ಲದೆ   SB a/c , ಮತ್ತು  FD a/c ಇತ್ಯಾದಿಗಳಿಗೆ ಎಲ್ಲದಕ್ಕೂ  ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ .
ಕೇವಲ ನಾಮನಿರ್ದೇಶನ  ಮಾಡಿದರೆ  ಸಾಲದು , ಅದನ್ನು  ಸಂದರ್ಭಾನುಸಾರ  Update  ಮಾಡುತ್ತಾ ಇರಬೇಕು .
  ನಾಮನಿರ್ದೇಶನಗಳನ್ನು  ಒಬ್ಬರ  ಹೆಸರಿನಲ್ಲಿಯೇ  ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ  ಹೆಚ್ಚಿನ ವ್ಯಕ್ತಿಗಳನ್ನು  ನಾಮನಿರ್ದೇಶಿತರನ್ನಾಗಿ
ಮಾಡಬಹುದು . ಹೆಚ್ಚಿನ  ವ್ಯಕ್ತಿಗಳನ್ನು ಮಾಡುವಾಗ  ತಾನು  ಮೃತಪಟ್ಟಲ್ಲಿ
ಯಾವ ವ್ಯಕ್ತಿಗಳಿಗೆ  ಎಷ್ಟೆಷ್ಟು  ಪಾಲು ಹಣ ಕೊಡಬೇಕು  ಎಂಬುದನ್ನು ಕೂಡ  ದಾಖಲಿಸಬೇಕು. ನೌಕರನ  ಕೇಂದ್ರಸ್ಥಾನ
_____________________
KCSR ನಿಯಮ 513 ರ  ಪ್ರಕಾರ  ಕೇಂದ್ರ ಸ್ಥಾನ   ಎಂದರೆ   ತಾನು  ಕರ್ತವ್ಯ  ನಿರ್ವಹಿಸುವ  ಕಾರ್ಯಸ್ಥಳದಿಂದ  8 ಕಿ.ಮೀ. ದೂರವನ್ನು   ಕೇಂದ್ರ ಸ್ಥಾನ ವೆಂದು   ಕರೆಯುವರು .
8 ಕಿ. ಮೀ . ಮೀರಿ  ಬೆಳೆಸಿದ  ಪ್ರಯಾಣಕ್ಕೆ  ಪ್ರಯಾಣ ಭತ್ಯೆ  ಪಡೆಯಬಹುದು .
ಪ್ರವಾಸದ  ಕಾಲದಲ್ಲಿ  ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ  ತಂಗುವುದನ್ನು  ಕೇಂದ್ರಸ್ಥಾನದಲ್ಲಿ   ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ  ಸರ್ಕಾರಿ ನೌಕರ *

-------------------------------
K C S R ನಿಯಮಾವಳಿಯ  ನಿಯಮ  26( ಎ ) ಪ್ರಕಾರ  ಸರ್ಕಾರಿ ನೌಕರನು  ದಿನವಿಡಿ  ಅಂದರೆ 24 ಗಂಟೆಯೂ ಆತನಿಗೆ  ಸಂಬಳ ನೀಡುತ್ತಿರುವ  ಸರ್ಕಾರದ  ಕರ್ತವ್ಯಕ್ಕಾಗಿಯೇ  ಇರಬೇಕಾಗುತ್ತದೆ .

ಸರ್ಕಾರ  ರಜಾ ದಿನದಂದು  ಕರ್ತವ್ಯ ನಿರ್ವಹಿಸಲು  ಆದೇಶಿಸಿದರೆ
ಅದನ್ನು  ತಿರಸ್ಕರಿಸಲು  ಬರುವುದಿಲ್ಲ . ಉದಾಹರಣೆಗೆ  ಒಬ್ಬ  ವ್ಯಕ್ತಿಯು ಸಂಜೆ 5-30 ಕ್ಕೆ  ವಯೋ ನಿವೃತ್ತಿ  ಹೊಂದಿ ,  ಅದೇ ದಿನ ರಾತ್ರಿ   11-30ಕ್ಕೆ
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ  ನಿಯಮ 8 ( 14 )ರ ಪ್ರಕಾರ  ದಿನ ಎಂದರೆ  ಮಧ್ಯರಾತ್ರಿಯಲ್ಲಿ   ಆರಂಭಗೊಳ್ಳುತ್ತದೆ
ಮತ್ತು  ಕೊನೆಗೊಳ್ಳುತ್ತದೆ .
ಏಕೆಂದರೆ , X  ಎಂಬ ನೌಕರ  ದಿನಾಂಕ 30- 09 - 1993 ರಂದು   ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ  10-30 ಕ್ಕೆ ನಿಧನರಾದರು . ಈ
KAT ಯು  ಅರ್ಜಿ ಸಂಖ್ಯೆ  : 3452 ,98 ರ  ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ     ಮೃತಪಟ್ಟಿರುವುದರಿಂದ
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ  ನಿಯಮಗಳು
1981 ರ ನಿಯಮ  21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ
ಸಮೂಹ ವಿಮಾ ಹಣವನ್ನು ಪಾವತಿಸಲು  ಆದೇಶಿಸಿದೆ . Exemption on professional  Tax
ವೃತ್ತಿ  ತೆರಿಗೆಯಿಂದ  ವಿನಾಯತಿ
~~~~~~~~~~~~~
ಸರ್ಕಾರದ   ಅಧಿಸೂಚನೆ  ಸಂಖ್ಯೆ  ಎಫ್.ಡಿ. 12
ಸಿ.ಪಿ.ಟಿ.94( ¡¡¡ )ದಿನಾಂಕ  30 - 2 - 1994 ರ  ಪ್ರಕಾರ
ಒಂದೇ  ಮಗುವಿದ್ದು  ಸಂತಾನಹರಣ   ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ   ( ದಂಪತಿಗಳ  ಪೈಕಿ  ಒಬ್ಬರಲ್ಲಿ )  ದಿನಾಂಕ  01 - 04 - 1994  ರಿಂದ  ವೃತ್ತಿ  ತೆರಿಗೆ  ವಿನಾಯತಿ ನೀಡಲಾಗಿದೆ .
ಮಹಿಳಾ  ನೌಕರರಿಗೆ  *
------------------------------------
  ಮಹಿಳಾ ನೌಕರರು   ಮದುವೆಯಾಗಿ   ಗಂಡನ ಮನೆಯಲ್ಲಿ 
ವಾಸವಾಗಿದ್ದರೂ  ಸಹ  ಮಹಿಳಾ  ನೌಕರರ  ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ  ಸರ್ಕಾರದ  ಅಧಿಸೂಚನೆ  ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ  ಮಾಸಿಕ  ಆದಾಯ 6000/- ರೂ  ಮೀರದಿದ್ದರೆ  ಅಂತವರು ವೈದ್ಯಕೀಯ ಮರುವೆಚ್ಛ  ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
ಅಸಾಧಾರಣ ರಜೆ ( Extraordinary Leave )
_________________

ಸರ್ಕಾರಿ  ನೌಕರನು ಅವನ  ಹಕ್ಕಿನಲ್ಲಿ  ಯಾವುದೇ  ವಿಧವಾದ  ರಜೆ  ಇಲ್ಲದಿದ್ದಾಗ , ಅಥವಾ  ವಿಶೇಷ ಸನ್ನಿವೇಶಗಳಲ್ಲಿ  KCSR  ನಿಯಮ  117 ( ಎ ) ರ ಪ್ರಕಾರ  ಅಸಾಧಾರಣ  ರಜೆಯನ್ನು  ಪಡೆಯಬಹುದಾಗಿರುತ್ತದೆ .
        ಆದರೆ  ಈ  ಅಸಾಧಾರಣ  ರಜೆಯ  ಅವಧಿಗೆ  ಯಾವುದೇ  ವೇತನ  ಭತ್ಯೆಗಳು  ಲಭ್ಯವಾಗುವುದಿಲ್ಲ .

   ಯಾವುದೇ  ರಜೆ  ಇಲ್ಲದ  ನೌಕರರು  ಕ್ಯಾನ್ಸರ್  ,  ಕುಷ್ಠ  ,  ಕ್ಷಯ ,  ಮಾನಸಿಕ  ಅಸ್ವಸ್ಥತೆ   ಇತ್ಯಾದಿ  ಮಾರಕ  ಖಾಯಿಲೆಗಳಿಗೆ   ತುತ್ತಾದಲ್ಲಿ   ವೈದ್ಯಕೀಯ
ಪ್ರಮಾಣಪತ್ರದ  ಆಧಾರದ  ಮೇಲೆ  18 ತಿಂಗಳ  ಅವಧಿಗೆ  ಅಸಾಧಾರಣ  ರಜೆ  ಮಂಜೂರು ಮಾಡಲು ಅವಕಾಶವಿದೆ .
KCSR  ನಿಯಮ 117 ( ಬಿ )( ¡¡¡ ) ರ  ಪ್ರಕಾರ  ಸತತ ಮೂರು  ವರ್ಷ  ಸೇವೆ  ಸಲ್ಲಿಸಿದ  ನೌಕರರಿಗೆ  ಉನ್ನತ ವ್ಯಾಸಂಗಕ್ಕೆ  2 ವರ್ಷ , ಡಾಕ್ಟರೇಟ್  ಕೋರ್ಸ್ ಗಾಗಿ 3 ವರ್ಷಅಸಾಧಾರಣ  ರಜೆ  ಪಡೆಯಲು ಅವಕಾಶವಿದೆ .ರಿಮೂವಲ್ -  ಡಿಸ್ಮಿಸಲ್ ಗೂ  ಇರುವ  ವ್ಯತ್ಯಾಸ  ? ?
_____________________
ರಿಮೂವಲ್ ( ಕೆಲಸದಿಂದ  ತೆಗೆದುಹಾಕುವುದು).  ಯಾವುದೇ  ಆರ್ಥಿಕ ಸೌಲಭ್ಯವೂ  ದೊರೆಯುವುದಿಲ್ಲ , ಆದರೆ  ಮತ್ತೊಂದು  ಹುದ್ದೆಗೆ
ಆಯ್ಕೆಯಾಗಬಹುದು .
ಆದರೆ  ಡಿಸ್ಮಿಸಲ್ ( ಕೆಲಸದಿಂದ  ವಜಾ ಮಾಡುವುದು ) . ಈ ಆದೇಶವಾದಾಗ  ಆರ್ಥಿಕ  ಸೌಲಭ್ಯವೂ  ಸಿಗುವುದಿಲ್ಲ , ಹಾಗು  ಬೇರೆ ಹುದ್ದೆಗೆ
ನೇಮಕಾತಿಯು  ಸಿಗುವುದಿಲ್ಲ .ಅಮಾನತ್ತು  ( Suspension )
____________________
1)ಒಬ್ಬ ನೌಕರರನ್ನು  ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ  ಕೊಡಬೇಕು .
3) ಅಮಾನತ್ತನ್ನು  ಗರಿಷ್ಠ 6 ತಿಂಗಳೊಳಗಾಗಿ  ಅಂತಿಮ  ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು .
4) ಯಾವುದಾದರೂ  ಕಾರಣದಿಂದ 48 ಗಂಟೆ ಮೀರಿದ  ಅವಧಿಯವರಿಗೆ ಅಭಿರಕ್ಷೆಯಲ್ಲಿ  ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ  ಸ್ವಯಂಚಾಲಿತವಾಗಿ  ಅಮಾನತ್ತು ಜಾರಿಯಾಗುತ್ತದೆ .
5)  ವಿಚಾರಣೆ  ಬಾಕಿ ಇರುವಾಗ ನೌಕರರನನ್ನು  ಅಮಾನತ್ತುಗೊಳಿಸಬಹುದು. ಆದರೆ,  ಅಮಾನತ್ತು ದಂಡನೆ  ಅಲ್ಲ.
6) ತಿಂಗಳಿಗೂ  ಮೀರಿದ ಅವಧಿಗೆ  ಅಮಾನತ್ತು ಮುಂದುವರಿದ ಪ್ರಕರಣಕ್ಕೆ ಶೇಕಡಾ 75% ,  ಹಾಗು ವರ್ಷಕ್ಕೂ  ಮೀರಿದ ಅವಧಿಗೆ  ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ  ನೌಕರ  ವಿಚಾರಣೆಯಿಂದ  ಆರೋಪ ಮುಕ್ತನಾದಲ್ಲಿ  ಪೂರ್ಣ  ವೇತನ  ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ  ನಡೆಸದಿದ್ದಲ್ಲಿ  ಅದು  ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ  ವಿಧಿಸುವುದೊಂದಿಗೆ  ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ  ಪೂರ್ಣ ವೇತನ  ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ  ಅಧಿಕಾರಿಗಳನ್ನು  ಅಮಾನತ್ತುಗೊಳಿಸುವ  ಅಧಿಕಾರ - ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ  ಅಧಿಕಾರ ಇರುವುದಿಲ್ಲ .

Monday 12 November 2018

ಕನ್ನಡದ ಮೊದಲುಗಳು

ಕನ್ನಡದ ಮೊದಲ ಕಾದಂಬರಿ- ಇಂದಿರಾಬಾಯಿ (ರ: ಗುಲ್ವಾಡಿ ವೆಂಕಟರಾವ್)

ಕನ್ನಡದ ಮೊದಲ ಪತ್ರಿಕೆ- ಮಂಗಳೂರು ಸಮಾಚಾರ

ಕನ್ನಡದ ಮೊದಲ ರಾಷ್ಟ್ರಕವಿ- ಮಂಜೇಶ್ವರ ಗೋವಿಂದ ಪೈ

ಕನ್ನಡದ ಮೊದಲ ಕವಯತ್ರಿ- ಅಕ್ಕಮಹಾದೇವಿ

ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ- ರಣಧೀರ ಕಂಠೀರವ

ಪಂಪ ಪ್ರಶಸ್ತಿ ಪುರಸ್ಕೃತ ಮೊದಲ ಕವಿ- ಕುವೆಂಪು

ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ವಿ.ಶಾಂತಾರಾಮ್

ಕರ್ನಾಟಕದ ಮೊದಲ ಅಣೆಕಟ್ಟು- ಕೆಆರ್‌ಎಸ್ (1932)

ಕರ್ನಾಟಕದ ಮೊದಲ ರಾಜ್ಯಪಾಲ- ಜಯಚಾಮರಾಜ ಒಡೆಯರ್

ಅಚ್ಚ ಕನ್ನಡದ ಮೊದಲ ದೊರೆ - ಮಯೂರವರ್ಮ

ಕನ್ನಡದ ಮೊದಲ ಕವಿ - ಪಂಪ

ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ

ತ್ರಿಪದಿ ಛಂದಸ್ಸಿನ ಮೊದಲ ಬಳಕೆ - ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ

ಕನ್ನಡದ ಮೊದಲ ಲಕ್ಷಣ ಗ್ರಂಥ - ಕವಿರಾಜಮಾರ್ಗ

ಕನ್ನಡದ ಮೊದಲ ನಾಟಕ - ಮಿತ್ರವಿಂದ ಗೋವಿಂದ (ಸಿಂಗರಾರ್ಯ)

ಕನ್ನಡದ ಮೊದಲ ಮಹಮದೀಯ ಕವಿ - ಶಿಶುನಾಳ ಷರೀಪ

ಕನ್ನಡದ ಮೊದಲ ಕವಯಿತ್ರಿ - ಅಕ್ಕಮಹಾದೇವಿ

ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಕನ್ನಡದ ಮೊದಲ ಛಂದೋಗ್ರಂಥ - ಛಂದೋಂಬುಧಿ (ನಾಗವರ್ಮ)

ಕನ್ನಡದ ಮೊದಲ ಸಾಮಾಜಿಕ ನಾಟಕ - ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ (ಶ್ರೀಧರಚಾರ್ಯ)

ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ - ವ್ಯವಹಾರ ಗಣಿತ (ರಾಜಾದಿತ್ಯ)

ಕನ್ನಡದ ಮೊದಲ ಕಾವ್ಯ - ಆದಿಪುರಾಣ

ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ

ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ - ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)

ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು - ಚಂದ್ರರಾಜ

ಕನ್ನಡದಲ್ಲಿ ಮೊದಲು ಕಥೆ ಬರೆದವರು - ಪಂಜೆಮಂಗೇಶರಾಯರು

ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ - ಒಲುಮೆ (ತೀನಂಶ್ರೀ)

ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು - ಹೆಚ್.ವಿ.ನಂಜುಂಡಯ್ಯ

ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ - ಆರ್.ನರಸಿಂಹಾಚಾರ್

ಕನ್ನಡದ ಮೊದಲ ವಚನಕಾರ - ದೇವರದಾಸಿಮಯ್ಯ

ಹೊಸಗನ್ನಡದ ಮೊದಲ ಮಹಾಕಾವ್ಯ - ಶ್ರೀರಾಮಾಯಣ ದರ್ಶನಂ

ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು

ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
- ಆರ್.ಎಫ್.ಕಿಟೆಲ್

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ - ಸೂಕ್ತಿ ಸುಧಾರ್ಣವ

ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಂಗಳೂರು (1915)

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ - ಕುವೆಂಪು

ಕನ್ನಡದ ಮೊದಲ ವಿಶ್ವಕೋಶ - ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)

ಕನ್ನಡದ ಮೊದಲ ವೈದ್ಯಗ್ರಂಥ - ಗೋವೈದ್ಯ (ಕೀರ್ತಿವರ್ಮ)

ಕನ್ನಡದ ಮೊದಲ ಪ್ರಾಧ್ಯಾಪಕರು - ಟಿ.ಎಸ್.ವೆಂಕಣ್ಣಯ್ಯ

ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ - ಮಂದಾನಿಲ ರಗಳೆ

ಕನ್ನಡದ ಮೊದಲ ಹಾಸ್ಯ ಪತ್ರಿಕೆ - ವಿಕಟ ಪ್ರತಾಪ (ಸಂ:ಚನ್ನಕೇಶವಅಯ್ಯಂಗಾರ್)

ಕನ್ನಡದ ಮೊದಲ ವೀರಗಲ್ಲು - ತಮ್ಮಟಗಲ್ಲು ಶಾಸನ

ಕನ್ನಡದ ಮೊದಲ ಹಾಸ್ಯ ಲೇಖಕಿ - ಟಿ.ಸುನಂದಮ್ಮ

Wednesday 7 November 2018

ನಮ್ಮೂರ ದೀಪಾವಳಿ

*ನಮ್ಮ ದೀಪಾವಳಿ ಆಚರಣೆ..*                                                                          ಬೂದಿ ನೀರು ಮೀಯುವುದು , ಹಿಂದಿನ ದಿನ ನೀರು ಒಲೆಗೆ ,ಹರಿಗೆ ಸೇಡಿಯ ಗೆರೆ ,ಬಿಂದುಗಳನ್ನಿಟ್ಟು , ಹರಿಗೆ ಹೀರೆ ,ಕುಂಬಳಬಳ್ಳಿ ಗೊಂಡೆ ಹೂವಿನ ಸರ ಹಾಕಿ ಶಂಖ ಜಾಗಟೆ (ಜಾಗಟೆ ಬದಲು ಬಟ್ಟಲು ಬಡಿಯುತಾತಿದ್ದದ್ದೂ ಇದೆ) ಸದ್ದುಗಳೊಂದಿಗೆ ಅಮ್ಮ ನೀರು ತುಂಬುವುದು , ಬೆಳಿಗ್ಗೆ ಹೊತ್ತು ಮೂಡುವ ಮೊದಲು ತೆಂಗಿನೆಣ್ಣೆ ಅರಸಿನ ಜಜ್ಜಿದ ಚಗಟೆ ಕೋಡಿನ ಮಿಶ್ರಣ ಹಚ್ಚಿಕೊಂಡು ಮೀಯುವುದು.
ಅಮಾಸೆಯ ರಾತ್ರಿ ಗದ್ದೆ ಹಿಟ್ಟು , ಅರಸಿನ ಎಲೆಯಲ್ಲಿ ಬೇಯಿಸಿದ ಸಪ್ಪೆ ಕಡುಬು , ಜಂಗಮನ ಸೊಪ್ಪು ಕರಿಬೀಳು ಸಟ್ಟುಗದ ಎಲೆ ,ಕಿಸಗಾರ ಹೂವು , ಕೋಳಿಬೀಳು -ಇವುಗಳ ಕೊಚ್ಚಲು ಬೆಂಡೆ ಗಿಡದ ಕಾಂಡಕ್ಕೆ ನೆಣೆ ಸುತ್ತಿ ಮಾಡಿದ ದೊಂದಿ , ಅವಲಕ್ಕಿ ,ಬಾಳೆಹಣ್ಣು ,ಅರಸಿನ ಎಲೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ,ಸೂಟೆ ಬೀಸಿಕೊಂಡು ಗದ್ದೆಗೆ ಹೋಗುವುದು.ಅಲ್ಲಿ ಕೊಯ್ಲು ಆದ ಗದ್ದೆಗಳಿಗೆ ಅರಸಿನ ಎಲೆಯ ಮೇಲೆ ಸೊಪ್ಪು ,ಕಡುಬು ಹಾಕಿ ನೆಣೆ ಇಟ್ಟು ದೀಪ ಹಚ್ಚಿ , ಹೊಲಿ ಕೊಟ್ರೊ ,ಬಲಿ ತಗೊಂಡ್ರೊ ,ಬಲೀಂದ್ರ ದೇವರು ತಮ್ ರಾಜ್ಯಕ್ಕೆ ತಾವೇ ಬಂದ್ರೊ ಕೂ ಕೂ ಕೂ ಎಂದು ಮೂರು ಸರತಿ ಹೇಳುವುದು.

ಅಗೇಡಿಗೆ ಅವಲಕ್ಕಿ ಬಾಳೆಹಣ್ಣು ಇಟ್ಟು ಪೂಜೆ ಮಾಡುವುದು..

ನಂತರ , ಹುಲ್ಲು ಕುತ್ರೆ ,ಮೇಟಿ ಕಂಬ , ಗೊಬ್ಬರಗುಂಡಿಗಳಿಗೂ ಹೀಗೇ  ಮಾಡಲುಂಟು.

ನಂತರ ಹೊಲಿರಾಶಿಗೆ ಬೂದಿ ಗೆರೆ ,ದೂಪ ದೀಪ ಹಿಡಿಯುವುದು.

ಮರುದಿನ ಗೋಪೂಜೆ , ಎತ್ತು ಓಡಿಸುವುದು..
ತೋಡಿನಲ್ಲಿ ಸಿಗುವ ಜಾಜಿಕಲ್ಲು ಎಂದು ಕರೆಯಲ್ಪಡುವ ತಿಳಿಗೆಂಪು.ಬಣ್ಣದ ಕಲ್ಲನ್ನು ತೇದಿ , ಗರಟೆಗೆ ಗುಣಾಕಾರದ ರೀತಿಯಲ್ಲಿ ಹಗ್ಗ ಬಿಗಿದು , ಆ ಗರಟೆ ಬಾಯಿಯನ್ನು ತೇದಿದ ಕಲ್ಲಿನ ಬಣ್ಣದಲ್ಲಿ ಅದ್ದಿ ದನ ,ಎತ್ತುಗಳ ಮೈಗೆ ಹಚ್ಚುವುದು ,ಕೋಳೆ ಹೂವಿನ್ನು ತೊಡಿಸುವುದು ,ಅಕ್ಕಿ ಹಿಟ್ಟಿ ನ ಚಪ್ಪೆ ರೊಟ್ಟಿಗಳ ಮಾಲೆಯನ್ನು  ಅವುಗಳ ಕೊರಳಿಗೆ ತೊಡಿಸುವುದು ,ಪೂಜೃಯ ನಂತರ ಅವುಗಳನ್ನು ಬಿಟ್ಟು ಬಿಡುವುದು , ಆಗ ಮಕ್ಕಳು ಅವುಗಳ ಕುತ್ತಿಗೆಯಿಂದ ರೊಟ್ಟಿಗಳನ್ನು ಹರಿದು ತಿನ್ನುವುದು ,ಹಾಗೆ ಮಾಡಿದರೆ ಚರ್ಮದ ಕಾಯಿಲೆ ಬರೋದಿಲ್ಲ ಅಂತ ನಂಬುವುದು....ರಾತ್ರಿ ಹಬ್ಬ ಹಾಡುವುದು..ಮೂರು ದಿನ ಸಂಭ್ರಮ... ಆಚರಣೆ..

ಇದು ನಮ್ಮ ಕಡೆಯ ದಿವಾಳಿ ಹಬ್ಬ , ಶುದ್ದ ಕೃಷಿ ಸಂಸ್ಕೃತಿ.ಬೆಳೆದ ಗದ್ದೆಯನ್ನು ಮರೆಯದಿರುವುದು...

ಕನ್ನಡದಲ್ಲಿ ಷಟ್ಪದಿ ಕಾವ್ಯಗಳು

ಕನ್ನಡದಲ್ಲಿ ಷಟ್ಪದಿ ಕಾವ್ಯಗಳು : - ಷಟ್ಪದಿ ಎನ್ನುವುದು ಆರು ಸಾಲಿನ ಪದ್ಯಜಾತಿಯೊಂದನ್ನು ನಿರ್ದೇಶಿಸುತ್ತದೆ. ಅದರಲ್ಲಿ 1, 2, 4, 5ನೆಯ ಪಾದಗಳು ಒಂದು ರೀತಿಯಾಗಿಯೂ 3, 6ನೆಯ ಪಾದಗಳು ಒಂದು ರೀತಿಯಾಗಿಯೂ ಇರುತ್ತವೆ. ಷಟ್ಪದಿ ಆರು ಬಗೆಯಾಗಿದೆ. ಶರ, ಕುಸುಮ, ಭೋಗ, ಭಾಮಿನಿ, ಪರಿವರ್ದಿನಿ ಮತ್ತು ವಾರ್ಧಕ. ಈ ಷಟ್ಪದಿಗಳು ಮಾತ್ರಾಗಣಗಳಿಂದ ಕೂಡಿದುವಾಗಿರುವುದರಿಂದ ಇವನ್ನು ಮಾತ್ರಾಷಟ್ಪದಿಗಳೆಂದು ಕರೆಯಬಹುದು. ಈ ಎಲ್ಲ ಮಾತ್ರಾಷಟ್ಪದಿಗಳಿಗೆ ಮೂಲವಾಗಿ ಒಂದು ಷಟ್ಪದಿಯಿತ್ತು. ಅದನ್ನು ಮೂಲಷಟ್ಪದಿ ಎಂದೋ ಅಂಶಷಟ್ಪದಿ ಎಂದೋ ಅಥವಾ ತೀ.ನಂ.ಶ್ರೀಕಂಠಯ್ಯನವರನ್ನನುಸರಿಸಿ ಷಟ್ಪದ ಎಂದೋ ನಿರ್ದೇಶಿಸಬಹುದು. ಈ ಮೂಲಷಟ್ಪದಿ ಅಥವಾ ಷಟ್ಪದ ಅಂಶಗಣಗಳಿಂದ ಕೂಡಿದ್ದು, ಈ ಲಕ್ಷಣವನ್ನು ಪಡೆದಿದ್ದಿತು (ವಿ- ವಿಷ್ಣುಗಣ : ರು- ರುದ್ರಗಣ). ವಿ | ವಿ | ವಿ | ವಿ | ವಿ | ವಿ | ರು || ವಿ | ವಿ | ವಿ | ವಿ | ವಿ | ವಿ | ರು || ನಾಗವರ್ಮ, ಜಯಕೀರ್ತಿಗಳು ತಮ್ಮ ಲಕ್ಷಣಗ್ರಂಥಗಳಲ್ಲಿ ಷಟ್ಪದಿಯ ಗುಣ ಲಕ್ಷಣಗಳನ್ನು ವರ್ಣಿಸಿರುವರಲ್ಲದೆ ಅದು ಅನೇಕ ಶಾಸನಗಳಲ್ಲೂ (ಉದಾ: ಅಮ್ಮಿನಬಾವಿ ಶಾಸನ) ಅನೇಕ ಚಂಪು ಕಾವ್ಯಗಳಲ್ಲಿಯೂ (ಉದಾ: ಸುಕುಮಾರ ಚರಿತೆ) ಕಾಣಿಸಿಕೊಂಡಿದೆ. ಚಾಳುಕ್ಯ ಚಕ್ರವರ್ತಿ 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿಯೂ (ಸು.1129) ಅಂಶಗಣ ಘಟಿತವಾದ ಷಟ್ಪದ ಕಾಣಿಸಿಕೊಳ್ಳುತ್ತದೆ. ಆ ಕಾಲಕ್ಕಾಗಲೇ ಷಟ್ಪದರೂಪವಾದ ಕಥೆಗಳು ಹುಟ್ಟಿದ್ದುವೆಂಬುದಕ್ಕೆ ಆ ಕೃತಿಯಲ್ಲಿಯೇ ಆಧಾರವಿರುವುದಾದರೂ ನಮಗೆ ಷಟ್ಪದರೂಪದ ಯಾವ ಕಾವ್ಯವ ದೊರಕಿಲ್ಲ. ಎಂದರೆ 12ನೆಯ ಶತಮಾನದ ಮಧ್ಯದವರೆಗೆ ದೊರಕಿರುವ ಷಟ್ಪದಗಳೆಲ್ಲವ ಶಾಸನಗಳಲ್ಲಿ, ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಬಿಡಿಪದ್ಯಗಳಾಗಿವೆ.
12ನೆಯ ಶತಮಾನದ ಮಧ್ಯಭಾಗದಲ್ಲಿ ಅಂಶಗಣಗಳ ಸ್ಥಾನದಲ್ಲಿ ಮಾತ್ರಾಗಣ ಗಳನ್ನು ತರುವ ರೂಢಿ ಪ್ರಬಲವಾದ ಮೇಲೆ ಮೂಲಷಟ್ಪದಿ ಅಥವಾ ಷಟ್ಪದ ಆರು ರೀತಿಯ ಮಾತ್ರಾಷಟ್ಪದಿಗಳಾಗಿ ವಿಕಾಸ ಹೊಂದಿತು. ಅವನ್ನೇ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನೀ ಮತ್ತು ವಾರ್ಧಕಗಳೆಂದು ಕರೆದಿರುವುದು. ಆಯಾ ಷಟ್ಪದಿಗಳ ಮೊದಲ ಪಾದದ ಲಕ್ಷಣ ಹೀಗಿರುತ್ತದೆ (ಮೂರನೆಯ ಪಾದ ಅದರ ಒಂದೂವರೆಯಷ್ಟು + 1 ಗುರು ಆಗಿರುತ್ತದೆ).
ಶರ (4 + 4) = 8 ಮಾತ್ರೆಗಳು ಕುಸುಮ (5 + 5) = 10 ಮಾತ್ರೆಗಳು ಭೋಗ (3 + 3 + 3 + 3) = 12 ಮಾತ್ರೆಗಳು ಭಾಮಿನಿ (3 + 4 + 3 + 4) = 14 ಮಾತ್ರೆಗಳು ಪರಿವರ್ಧಿನೀ(4 + 4 + 4 + 4) = 16 ಮಾತ್ರೆಗಳು ವಾರ್ಧಕ (5 + 5 + 5 + 5) = 20 ಮಾತ್ರೆಗಳು ಇವುಗಳಲ್ಲಿ ಭಾಮಿನಿ, ವಾರ್ಧಕಗಳು ಹೆಚ್ಚು ಪ್ರಚಾರದಲ್ಲಿದ್ದು, ಕನ್ನಡದ ಕೆಲವು ಅತ್ಯಂತ ಶ್ರೇಷ್ಠ ಕಾವ್ಯಗಳು ರಚಿತವಾಗಿವೆ. ಷಟ್ಪದಿ ಕಾವ್ಯಗಳ ಸಮಗ್ರ ಇತಿಹಾಸವನ್ನು ಕೊಡುವುದು ಇಲ್ಲಿ ಸಾಧ್ಯವಿಲ್ಲವಾದುದರಿಂದ ಕೆಲವು ಪ್ರಮುಖ ಕಾವ್ಯಗಳ ಪರಿಚಯವನ್ನು ಮಾತ್ರ ಕಾಲಾನುಕ್ರಮದಲ್ಲಿ ಕೊಡಲು ಪ್ರಯತ್ನಿಸಿದೆ.
1224ರ ಹರಿಹರದ ಶಾಸನದಲ್ಲಿ ಪೋಲಾಳ್ವದಂಡನಾಥನೆಂಬಾತ ಹರಿಚಾರಿತ್ರವೆಂಬ ಕಾವ್ಯವನ್ನು ಷಟ್ಪದಿರೂಪವಾಗಿ ರಚಿಸಿದನೆಂದು ಹೇಳಿದೆ. ಆ ಕಾವ್ಯ ದೊರೆತಿಲ್ಲವಾದ್ದರಿಂದ ಅದರ ಬಗ್ಗೆ ಇನ್ನೇನೂ ಹೇಳಲು ಸಾಧ್ಯವಿಲ್ಲ. ಆದಕಾರಣ ಅವನ ಸಮಕಾಲೀನನಾದ ರಾಘವಾಂಕನಿಂದ (ಸು.1230) ಷಟ್ಪದಿಕಾವ್ಯಗಳ ಇತಿಹಾಸವನ್ನು ಆರಂಬಿಸಬಹುದು.
ರಾಘವಾಂಕನ ಒಟ್ಟು ನಾಲ್ಕು ಕಾವ್ಯಗಳು ದೊರಕಿವೆ. ಹರಿಶ್ಚಂದ್ರಕಾವ್ಯ, ಸಿದ್ಧರಾಮಪುರಾಣ, ಸೋಮನಾಥ ಚಾರಿತ್ರ ಮತ್ತು ವೀರೇಶಚರಿತೆ (ಅವನ ಶರಭಚಾರಿತ್ರ ಮತ್ತು ಹರಿಹರ ಮಹತ್ತ್ವಗಳು ಅಲಭ್ಯ). ಇವುಗಳಲ್ಲಿ ಮೊದಲ ಮೂರು ವಾರ್ಧಕಷಟ್ಪದಿಯಲ್ಲಿದ್ದರೆ (5+5+5+5) ವೀರೇಶಚರಿತೆ ಉದ್ದಂಡ ಷಟ್ಪದಿಯಲ್ಲಿದೆ (4+4+4+4) ತನ್ನ ಬಹು ಶ್ರೇಷ್ಠ ಕೃತಿಗಳಿಂದಲೂ ನಮಗೆ ತಿಳಿದಮಟ್ಟಿಗೆ ಮೊದಲ ಷಟ್ಪದಿ ಕಾವ್ಯಗಳನ್ನು ಬರೆದ ಕವಿ ಆಗಿರುವುದರಿಂದಲೂ ರಾಘವಾಂಕ ಷಟ್ಪದಿ ಸಂಪ್ರದಾಯದ ಪ್ರವರ್ತಕನೆಂದು ಹೇಳಬಹುದು. ರಾಘವಾಂಕನ ಅನಂತರ ಷಟ್ಪದಿ ಕಾವ್ಯಗಳು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳ ಲಾರಂಬಿಸುತ್ತವೆ. ಸು.1250-60ರಲ್ಲಿದ್ದ ಕುಮಾರಪದ್ಮರಸ ರಾಘವಾಂಕನ ಸಮಕಾಲೀನನೂ ತನ್ನ ತಂದೆಯೂ ಆದ ಕೆರೆಯಪದ್ಮರಸನ ಸಂಸ್ಕೃತ ಕೃತಿ ಸಾನಂದಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ಇದರಲ್ಲಿ ಅನೇಕ ಬಗೆಯ ಷಟ್ಪದಿಗಳಿದ್ದರೂ ಕುಸುಮಷಟ್ಪದಿಯ ಬಾಹುಳ್ಯವನ್ನು ಇಲ್ಲಿ ಕಾಣಬಹುದು. ಸು.1275ರಲ್ಲಿದ್ದ ಕುಮುದೇಂದುವಿನ ಕುಮುದೇಂದು ರಾಮಾಯಣದಲ್ಲಿ ಶರ, ಭೋಗಗಳನ್ನು ಬಿಟ್ಟರೆ ಉಳಿದೆಲ್ಲ ಷಟ್ಪದಿಗಳೂ ಬಳಕೆಯಾಗಿವೆ. ಜೈನ ಸಂಪ್ರದಾಯದ ರಾಮಾಯಣದ ಕಥೆ ಇಲ್ಲಿ ಬಂದಿದೆ. ಕವಿ ತನಗಿಂತ ಹಿಂದಿದ್ದ ನಾಗಚಂದ್ರನನ್ನು ಯಥೇಷ್ಟವಾಗಿ ಅನುಕರಿಸಿರುವುದು ಕಂಡುಬರುತ್ತದೆ. ಸು.1369ರಲ್ಲಿದ್ದ ಕವಿಯ ಬಸವಪುರಾಣ ಒಂದು ಪ್ರಮುಖ ಕೃತಿ. ಬಸವಣ್ಣನವರನ್ನು ಕುರಿತಾದ ಕನ್ನಡ ಕಾವ್ಯಗಳಲ್ಲಿ ಇದು ಅತ್ಯಂತ ಜನಪ್ರಿಯವಾದುದು. ವಾಸ್ತವವಾಗಿ ಇದು ಸ್ವತಂತ್ರ ಕೃತಿಯಲ್ಲ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದ ಪ್ರಾಮಾಣಿಕವಾದ ಕನ್ನಡ ಅನುವಾದವಷ್ಟೆ. ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಮೊಟ್ಟಮೊದಲ ಸಮಗ್ರ ಗ್ರಂಥ. ಸು.1400ರಲ್ಲಿದ್ದ ಪದ್ಮಣಾಂಕನ ಪದ್ಮರಾಜ ಪುರಾಣವೂ ಒಂದು ಗಮನಾರ್ಹ ಕೃತಿ. ವಾರ್ಧಕಷಟ್ಪದಿಯ ಈ ಕಾವ್ಯಕ್ಕೆ ಕೆರೆಯಪದ್ಮರಸನೇ ಕಥಾವಸ್ತು. ಹೀಗೆ ತಮಗಿಂತ ಹಿಂದೆ ಮನುಷ್ಯರಂತೆಯೇ ಬದುಕಿ, ಶಿವನ ಕೃಪೆಯನ್ನು ಪಡೆದ ಭಕ್ತರ ಕಥೆಗಳನ್ನು ಆರಿಸಿಕೊಂಡು ಕಾವ್ಯಗಳನ್ನು ರಚಿಸುವ ಹರಿಹರನ ಸಂಪ್ರದಾಯ ವಿಶೇಷವಾಗಿ ವೀರಶೈವಕವಿಗಳಲ್ಲಿ ಬೆಳೆದುಕೊಂಡು ಬಂದಿರುವುದು ಒಂದು ಮುಖ್ಯ ಸಂಗತಿಯಾಗಿದೆ. ಕುಮಾರವ್ಯಾಸ (ಸು.1400) ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬ. ಇವನ ಕನ್ನಡ ಭಾರತ ಕನ್ನಡದ ಅತಿ ಜನಪ್ರಿಯ ಕಾವ್ಯಗಳಲ್ಲೊಂದು. ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡಕ್ಕೆ ಭಾಮಿನಿ ಷಟ್ಪದಿಗಳಲ್ಲಿ ಈತ ಯಶಸ್ವಿಯಾಗಿ ತಂದಿದ್ದಾನೆ. ಕುಮಾರವ್ಯಾಸನ ಪ್ರಭಾವ ಮುಂದಿನ ಕವಿಗಳ ಮೇಲೆ ಅಪರಿಮಿತವಾಗಿದೆ. ಉದಾಹರಣೆಗೆ 1424ರಲ್ಲಿದ್ದ ಭಾಸ್ಕರ ಎಂಬ ಜೈನಕವಿ ತನ್ನ ಜೀವಂಧರಚರಿತೆಯೆಂಬ ಭಾಮಿನಿ ಷಟ್ಪದಿ ಕಾವ್ಯದಲ್ಲಿ ಕುಮಾರವ್ಯಾಸನನ್ನು ಅನೇಕ ಕಡೆಗಳಲ್ಲಿ ಅನುಕರಿಸಿರುವುದು ಸುಸ್ಪಷ್ಟವಾಗಿದೆ.
ಚಾಮರಸನ (ಸು.1430) ಪ್ರಭುಲಿಂಗಲೀಲೆ ಅಲ್ಲಮಪ್ರಭುವನ್ನು ವಸ್ತುವಾಗಿ ಉಳ್ಳ ಶ್ರೇಷ್ಠ ಕಾವ್ಯ. ಇವನು ಭಾಮಿನಿಷಟ್ಪದಿಗಳನ್ನು ಬಳಸುವುದರಲ್ಲಿ, ಸೊಗಸಾದ ರೂಪಕಗಳನ್ನು ನಿರ್ಮಿಸುವುದರಲ್ಲಿ ಕುಮಾರವ್ಯಾಸನನ್ನು ಹೋಲುತ್ತಾನೆ. ಇವನ ಸಮಕಾಲೀನನಾಗಿದ್ದ ಲಕ್ಕಣ್ಣದಂಡೇಶ ಪ್ರೌಢದೇವರಾಯನ ಮಂತ್ರಿಯಾಗಿದ್ದು ಶಿವತತ್ತ್ವ ಚಿಂತಾಮಣಿಯೆಂಬ ವಾರ್ಧಕ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಅನೇಕ ಪುರಾತನ ಹಾಗೂ ನೂತನ ಶಿವಭಕ್ತರ ಕಥೆಗಳು ದೊರೆಯುತ್ತವೆ. ಇದೇ ಕಾಲದ ಗುರುಬಸವನ ಏಳುಕಾವ್ಯಗಳು ಸಪ್ತಕಾವ್ಯಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಶಿವಯೋಗಾಂಗಭೂಷಣ ಪರಿವದಿರ್ನಿ ಯಲ್ಲಿಯೂ ವೃಷಭಗೀತೆ ಭೋಗಷಟ್ಪದಿಯಲ್ಲಿಯೂ ಮನೋವಿಜಯಕಾವ್ಯ ಕುಸುಮಷಟ್ಪದಿ ಯಲ್ಲಿಯೂ ರಚಿತವಾಗಿವೆ. ಅದೇ ಕಾಲದ ಬತ್ತಲೇಶ್ವರ ಎಂಬ ವೀರಶೈವ ಕವಿ ಬತ್ತಲೇಶ್ವರ ರಾಮಾಯಣವನ್ನು ಬರೆದಿದ್ದಾನೆ. ಷಟ್ಪದಿ ಕಾವ್ಯಗಳನ್ನು ಬರೆದ ಈ ಶತಮಾನದ ಇತರ ವೀರಶೈವ ಕವಿಗಳು - ಬೊಮ್ಮರಸ (ಸು.1450, ಸೌಂದರ ಪುರಾಣ); ನೀಲಕಂಠಾಚಾರ್ಯ (ಸು.1485, ಆರಾಧ್ಯ ಚಾರಿತ್ರ); ಚತುರ್ಮುಖ ಬೊಮ್ಮರಸ (ಸು.1500, ರೇವಣಸಿದ್ಧೇಶ್ವರ ಕಾವ್ಯ); ಸಿಂಗಿರಾಜ (ಸು.1500, ಅಮಲಬಸವಚಾರಿತ್ರ ಅಥವಾ ಸಿಂಗಿರಾಜ ಪುರಾಣ. ಇದರಲ್ಲಿ ಬಸವಣ್ಣನವರ ಕತೆ ನಿರೂಪಿತವಾಗಿದೆ. ಇದು ಬಸವಣ್ಣನವರ ಪವಾಡಗಳ ಬಗ್ಗೆ ಹೆಚ್ಚು ಒಲವನ್ನು ತೋರಿರುವ ಕೃತಿಯಾಗಿದೆ).
15ನೆಯ ಶತಮಾನದ ಜೈನಕವಿಗಳಲ್ಲಿ ಕಲ್ಯಾಣಕೀರ್ತಿ (1439) ಮತ್ತು ತೆರಕಣಾಂಬಿ ಬೊಮ್ಮರಸ (ಸು.1485) ಉಲ್ಲೇಖಾರ್ಹರು. ಬೊಮ್ಮರಸನ ಸನತ್ಕುಮಾರಚರಿತೆ ಭಾಮಿನಿ ಷಟ್ಪದಿಯ ಕಾವ್ಯ. ವಡ್ಡಾರಾಧನೆಯಲ್ಲಿ ಗದ್ಯರೂಪವಾಗಿ ಕಾಣಿಸಿಕೊಂಡಿದ್ದ ಸನತ್ಕುಮಾರನ ಕಥೆಯನ್ನು ಇಲ್ಲಿ ಕಾವ್ಯರೂಪದಲ್ಲಿ ಸೊಗಸಾಗಿ ನಿರೂಪಿಸಲಾಗಿದೆ.
ಕುಮಾರವ್ಯಾಸನ ಸಂಪ್ರದಾಯದಲ್ಲಿ ರಾಮಾಯಣವನ್ನು ವಸ್ತುವನ್ನಾಗಿ ಮಾಡಿಕೊಂಡು ಕಾವ್ಯರಚನೆ ಮಾಡಿದ ನರಹರಿ ಅಥವಾ ಕುಮಾರವಾಲ್ಮೀಕಿಯ (ಸು.1500) ತೊರವೆ ರಾಮಾಯಣ ಅಂಥ ಉತ್ತಮ ಕಾವ್ಯವಲ್ಲದಿದ್ದರೂ ಕಥಾವಸ್ತುವಿನಿಂದಾಗಿ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದಾಗಿದ್ದಿತು.
ಮೂರನೆಯ ಮಂಗರಸನ (1508) ಜಯನೃಪಕಾವ್ಯ ಪರಿವದಿರ್ನಿಯಲ್ಲಿದೆ. ಗುಬ್ಬಿಮಲ್ಲಣಾರ್ಯನ (1513) ಭಾವಚಿಂತಾರತ್ನ ಚಮತ್ಕಾರಗಳಿಂದ ಕೂಡಿದ ಪ್ರೌಢರಚನೆಯ ಕಾವ್ಯ. ಪಂಚಾಕ್ಷರೀ ಮಂತ್ರದ ಮಹಿಮೆಯನ್ನು ಸಾರುವ ಸುಪ್ರಸಿದ್ಧ ಸತ್ಯೇಂದ್ರಚೋಳನ ಕಥೆ ಇದರ ವಸ್ತು. ಇವನ ವೀರಶೈವಾಮೃತ ಮಹಾಪುರಾಣ ದೊಡ್ಡ ಗಾತ್ರದ ವಾರ್ಧಕ ಷಟ್ಪದಿ ಕಾವ್ಯ. ಸು.1550ರಲ್ಲಿದ್ದ ಗುರುಲಿಂಗವಿಭುವಿನ ಭಿಕ್ಷಾಟನ ಚರಿತೆಯಲ್ಲಿನ ಶಿವನ ಅದೇ ಹೆಸರಿನ ಲೀಲೆಯೊಂದನ್ನು ನಿರೂಪಿಸಿದೆ. ಅವನ ಸಮಕಾಲೀನನಾದ ಚನ್ನಬಸವಾಂಕನ ಮಹಾದೇವಿಯಕ್ಕನ ಪುರಾಣದಲ್ಲಿ ಅಕ್ಕಮಹಾದೇವಿಯ ಕಥೆ ಹಲವು ಬಗೆಯ ಷಟ್ಪದಿಗಳಲ್ಲಿ ವರ್ಣಿತವಾಗಿದೆ.
ಈ ಶತಮಾನದ ಪ್ರಮುಖ ಷಟ್ಪದಿ ಕವಿಗಳೆಂದರೆ ಲಕ್ಷ್ಮೀಶ (ಸು.1550), ಕನಕದಾಸ (ಸು.1550) ಮತ್ತು ವಿರೂಪಾಕ್ಷಪಂಡಿತ (1584). ಕುಮಾರವ್ಯಾಸ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದರೆ, ತಿಮ್ಮಣ್ಣ (ಸು.1510) ಅದರ ಮುಂದಿನ ಎಂಟು ಪರ್ವಗಳನ್ನು ಕನ್ನಡದಲ್ಲಿ ನಿರೂಪಿಸಿದ. ಲಕ್ಷ್ಮೀಶನ ಜೈಮಿನಿಭಾರತ ಕೌರವನ ಸಾವಿನ ಬಳಿಕ ಪಾಂಡವರು ರಾಜ್ಯದಲ್ಲಿ ಪ್ರತಿಷ್ಠಿತರಾದ ಮೇಲಿನ ಕಥೆಯನ್ನು ವಸ್ತುವಾಗಿ ಪಡೆದ ಒಂದು ಅತ್ಯಂತ ಜನಪ್ರಿಯ ಕಾವ್ಯ. ಕನಕದಾಸ ಮನೋಹರವಾದ ಕೀರ್ತನೆಗಳನ್ನು ರಚಿಸಿದ ಭಕ್ತಶ್ರೇಷ್ಠ. ಇವನ ರಾಮಧಾನ್ಯಚರಿತೆ ರಾಗಿಯ ಶ್ರೇಷ್ಠತೆಯನ್ನು ಸ್ಥಾಪಿಸಲಿಕ್ಕಾಗಿ ಹುಟ್ಟಿದ ಕಾಲ್ಪನಿಕ ಕಥೆಯೊಂದನ್ನು ಹೇಳುತ್ತದೆ. ಇವನ ನಳಚರಿತ್ರೆ ಕನ್ನಡದ ಜನಪ್ರಿಯ ಕಾವ್ಯಗಳಲ್ಲೊಂದು. ವಾರ್ಧಕ ಷಟ್ಪದಿಗಳನ್ನು ಬರೆಯುವುದರಲ್ಲಿ ಲಕ್ಷ್ಮೀಶನಿಗೆ ಹೆಗಲೆಣೆಯಾದ ಕವಿ ವಿರೂಪಾಕ್ಷಪಂಡಿತ. ಇವನ ಚನ್ನಬಸವಪುರಾಣ ನೆಪಕ್ಕೆ ಮಾತ್ರ ಚನ್ನಬಸವಣ್ಣನ ಕಥೆಯನ್ನು ಆಶ್ರಯಿಸಿದೆ. ಆದರೆ ಅದರ ತುಂಬ ಶಿವನ ಅನೇಕ ಲೀಲೆಗಳು, ವೀರಶೈವ ಧರ್ಮದ ತತ್ತ್ವಗಳು, ಕಾಲಜ್ಞಾನಗಳು ಸೇರಿಕೊಂಡು ಕಾವ್ಯವನ್ನು ಹಿಗ್ಗಿಲವೆ. ಇದೇ ಶತಮಾನದ ಇನ್ನೊಬ್ಬ ಉಲ್ಲೇಖಾರ್ಹನಾದ ಕವಿಯಂದರೆ ಕನ್ನಡ ಭಾಗವತವನ್ನು ಬರೆದ ಚಾಟುವಿಠ್ಠಲನಾಥ (ಸು.1530). ಈ ಕೃತಿ ತೊರವೆ ರಾಮಾಯಣದಂತೆಯೇ ಕೇವಲ ಕಥಾವಸ್ತುವಿನ ಕಾರಣದಿಂದಾಗಿ ಜನಪ್ರಿಯತ್ವವನ್ನು ಪಡೆದಿದ್ದ ಇನ್ನೊಂದು ಕಾವ್ಯ.
16ನೆಯ ಶತಮಾನಕ್ಕೆ ಉತ್ತಮ ಷಟ್ಪದಿ ಕಾವ್ಯಗಳ ಕಾಲ ಮುಗಿಯಿತೆಂದು ಭಾವಿಸಬಹುದು. ರಕ್ಕಸತಂಗಡಿ ಯುದ್ಧದಲ್ಲಿ (ಸು.1565) ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ಸಾಹಿತ್ಯಕ್ಕಿದ್ದ ರಾಜಾಶ್ರಯ ತಪ್ಪಿತು. ಜನಜೀವನ ಅಸ್ತವ್ಯಸ್ತವಾಯಿತು. ಮುಂದೆ ಮೈಸೂರು, ಕೆಳದಿ ಮುಂತಾದ ಅರಸರು ಆಶ್ರಯವನ್ನು ಕೊಟ್ಟರೂ ಒಟ್ಟಿನಲ್ಲಿ ಯಾವುದೇ ರೀತಿಯ ಶ್ರೇಷ್ಠ ಕಾವ್ಯಗಳ ಕಾಲ ಅಲ್ಲಿಗೆ ಮುಗಿಯಿತೆಂದೂ ಅಲ್ಲಿಂದ ಏನಿದ್ದರೂ ಆಧುನಿಕ ಯುಗಕ್ಕೆ ಬಂದಾಗಲೇ ಉತ್ತಮ ಕೃತಿಗಳನ್ನು ಕಾಣಲು ಸಾಧ್ಯವೆಂದೂ ಹೇಳಬಹುದು. 17ನೆಯ ಶತಕದಿಂದೀಚೆಗೆ ಹುಟ್ಟಿದ ಕೆಲವು ಕೃತಿಗಳು ಹೀಗಿವೆ: ಸು.1606ರಲ್ಲಿದ್ದ ಎಳಂದೂರ ಹರೀಶರನು ಪ್ರಭುದೇವರ ಪುರಾಣವನ್ನು ಬರೆದಿದ್ದಾನೆ. ಇದರಲ್ಲಿ ಅಲ್ಲಮಪ್ರಭುವಿನ ಕಥೆಯ ಜೊತೆಗೆ ಬೇರೆ ಭಕ್ತರ ಕಥೆಗಳೂ ದೊರಕುತ್ತವೆ. ಸು.1650ರಲ್ಲಿದ್ದ ಸಿದ್ಧನಂಜೇಶ ಅಥವಾ ಚಿಕ್ಕ ನಂಜೇಶನ ಎರಡು ವಾರ್ಧಕ ಷಟ್ಪದಿ ರೂಪದ ಕೃತಿಗಳಿವೆ: ಗುರುರಾಜ ಚಾರಿತ್ರ ಮತ್ತು ರಾಘವಾಂಕ ಚರಿತೆ. ಕವಿ ರಾಘವಾಂಕನ ಬಗ್ಗೆ ನಮಗೆ ತಿಳಿದಿರುವ ಸಂಗತಿಗಳಿಗೆ ಇದು ಮುಖ್ಯ ಆಕರ. ಜೊತೆಗೆ, ಸಿದ್ಧನಂಜೇಶ ರಾಘವಾಂಕನ ಎಲ್ಲ ಕಾವ್ಯಗಳ ಸಾರಾಂಶವನ್ನು ಕೊಡುವಂತೆ ಹರಿಹರಮಹತ್ತ್ವ ಎಂಬ ಕೃತಿಯ ಸಾರಾಂಶವನ್ನೂ ಕೊಟ್ಟಿದ್ದಾನೆ. ರಾಘವಾಂಕನ ಈ ಕೃತಿ ಇಂದು ಅಲಭ್ಯ ವಾಗಿದೆಯಾದರೂ ಅದರ ಕಥಾ ಸಾರಾಂಶ ನಮಗೆ ದೊರಕುವುದರಿಂದಾಗಿ, ಹರಿಹರನ ವೈಯಕ್ತಿಕ ಜೀವನದ ಕೆಲವಾದರೂ ಪ್ರಮುಖ ಘಟನೆಗಳು ತಿಳಿದುಬರುವುದು ಇದರಿಂದ ಸಾಧ್ಯ ವಾಗಿದೆ. ಗೋವಿಂದ (ಸು. 1650, ನಂದಿ ಮಾಹಾತ್ಮ್ಯ), ಲಕ್ಷ್ಮಕವಿ(1723, ಭಾರತ), ಬಬ್ಬೂರುರಂಗ (1750, ಅಂಬಿಕಾ ವಿಜಯ), ಕೋನಯ್ಯ (ಸು.1750, ಗಯಚರಿತ್ರೆ)- ಇವರೆಲ್ಲರೂ ಕುಮಾರ ವ್ಯಾಸನಿಂದ ಪ್ರಭಾವಿತರಾದ ಕವಿಗಳು. ಸಹ್ಯಾದ್ರಿ ಖಂಡ ತೀರ್ಥಕ್ಷೇತ್ರಗಳ ಮಹಿಮೆಯನ್ನು ಭಾಮಿನಿಷಟ್ಪದಿಯಲ್ಲಿ ನಿರೂಪಿಸುವ ಒಂದು ಬೃಹತ್ಕಾವ್ಯ. ಮಹಲಿಂಗರಂಗನ (ಸು.1675) ಅನುಭವಾಮೃತ ಅದ್ವೈತ ತತ್ತ್ವಗಳನ್ನು ಸುಲಭಶೈಲಿಯಲ್ಲಿ ಬೋದಿಸುವ ಒಂದು ಜನಪ್ರಿಯ ಕೃತಿ. ದ್ವೈತ ತತ್ತ್ವಗಳನ್ನು ಬೋದಿಸುವ ಜಗನ್ನಾಥದಾಸರ (ಸು.1775) ಹರಿಕಥಾಮೃತಸಾರ ಇನ್ನೊಂದು ಜನಪ್ರಿಯ ಗ್ರಂಥವಾಗಿದೆ.
ಷಟ್ಪದಿ ಗ್ರಂಥಗಳ ಮಾಲಿಕೆಯಲ್ಲಿ ಕೊನೆಯದಾಗಿ ಮುದ್ದಣನ (1869-1901) ಹೆಸರನ್ನು ಹೇಳಬಹುದು. ಇವನು ಹಳೆಯ ಮತ್ತು ಹೊಸ ಸಾಹಿತ್ಯಗಳ ಸಂದಿಕಾಲದಲ್ಲಿದ್ದ ಕವಿ. ಇವನ ಗದ್ಯಕೃತಿಗಳಾದ ರಾಮಾಶ್ವಮೇಧ ಮತ್ತು ಅದ್ಭುತರಾಮಾಯಣಗಳು ಪ್ರಖ್ಯಾತವಾಗಿವೆ. ಅಷ್ಟೊಂದು ಪ್ರಸಿದ್ಧವಲ್ಲದ ಇವನ ಕೃತಿ ಶ್ರೀರಾಮಪಟ್ಟಾಬಿಷೇಕ ವಾರ್ಧಕದಲ್ಲಿ ರಚಿತವಾಗಿರುವ ಸುಂದರ ಕಾವ್ಯ. ಮುದ್ದಣನಾದ ಮೇಲೂ ಹಲವರು ಷಟ್ಪದಿ ಕಾವ್ಯಗಳನ್ನು ಮುಂದುವರಿಸಿದ್ದುಂಟು. ಬಹು ಹಿಂದಿನಿಂದ ಷಟ್ಪದಿ ಕಾವ್ಯಗಳು ಅತ್ಯಂತ ಜನಪ್ರಿಯವಾಗಿವೆ. ರಾಘವಾಂಕನ ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಮತ್ತು ಲಕ್ಷ್ಮೀಶರ ಭಾರತಗಳು, ಕನಕದಾಸರ ನಳಚರಿತ್ರೆ ಇವು ಇದಕ್ಕೆ ಉದಾಹರಣೆಗಳು. ಇವನ್ನು ಇಂದಿಗೂ ಗಮಕಿಗಳು ವಾಚನಮಾಡಿ ಶ್ರೋತೃಗಳನ್ನು ತಣಿಸುತ್ತಾರೆ. ಇವು ಕವಿತೆಯ ದೃಷ್ಟಿಯಿಂದಲೂ ಉನ್ನತಮಟ್ಟದವು ಎಂಬುದರಲ್ಲಿ ಸಂದೇಹವಿಲ್ಲ. ಇವುಗಳ ವಸ್ತು ಸುಪ್ರಸಿದ್ಧ; ಭಾಷೆ ಸರಳ, ಜೊತೆಗೆ ರಾಗವಾಗಿ ಹಾಡಲೂ ಅನುಕೂಲ. ಅನುಭವಾಮೃತದಂಥ ವೇದಾಂತ ಗ್ರಂಥವ ಷಟ್ಪದೀರೂಪವಾಗಿದೆಯೆಂಬುದನ್ನು ಇಲ್ಲಿ ಸ್ಮರಿಸಬಹುದು.
20ನೆಯ ಶತಮಾನದಲ್ಲಿ ಷಟ್ಪದಿ ರಚನೆಯನ್ನು ಬಹುಯಶಸ್ವಿಯಾಗಿ ಬಳಸಿಕೊಂಡವರೆಂದರೆ ಜಿ.ಪಿ.ರಾಜರತ್ನಂ. ಇವರು ತಮ್ಮ ಮಹಾಕವಿ ಪುರುಷ ಸರಸ್ವತಿ ಎಂಬ ವಿಡಂಬನ ಗ್ರಂಥದಲ್ಲಿ ಹೊಸ ಮಾದರಿಯಲ್ಲಿ ಷಟ್ಪದಿ ರಚನೆಯನ್ನು ಕನ್ನಡಾಂಗ್ಲಭಾಷಾ ಮಿಶ್ರಣದಲ್ಲಿ ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ. ಮಹಾಕವಿ ಪುರುಷ ಸರಸ್ವತಿಯ ಗುಣಕಥನ ಮಾಡುವಾಗಲಾಗಲಿ, ಕುಕವಿನಿಂದೆ, ಸತ್ಕವಿಪ್ರಶಂಸೆ ಮಾಡುವಾಗಲಾಗಲಿ, ಹಾರ್ಮೋನಿಯಂ ಹರಣದಂತೆ ಕರ್ಣಕಥೆಯನ್ನು ಹೇಳುವಾಗಲಾಗಲಿ ತನಿಯಾದ ಹಾಸ್ಯ ವ್ಯಂಗ್ಯ ಬಹು ಸಹಜವಾಗಿ, ಅದ್ಭುತವಾಗಿ ಮೂಡಿನಿಂತಿದೆ.