ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 22 November 2019

ನಾ ಡಿಸೋಜಾ ಅವರ ಒಂದು ಸಣ್ಣ ಕಥೆ...

** ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ **

ಕಲ್ಲು ಮತ್ತು ಸಿಮೆಂಟಿನ ಬೃಹತ್ ಕಪ್ಪು ಗೋಡೆಗೆ ಮೈಯೊತ್ತಿ ನಿಂತ ಜಲಸಾಗರದ ಅಂಚಿನಲ್ಲಿಯೇ, ಆತ ತನ್ನ ವಾಹನದಲ್ಲಿ ಕುಳಿತು ಅಷ್ಟು ದೂರ ಹೋದ. ರಸ್ತೆ ಸಂಪೂರ್ಣ ನಿರ್ಜನವಾಗಿತ್ತು. ಯಾವುದೇ ವಾಹನದ ಓಡಾಟವಿಲ್ಲದೆ ಹಾಳು ಬಿದ್ದಿತ್ತು. ಅಲ್ಲಲ್ಲಿ ಬಿದ್ದ ಎಲೆ ಟೊಂಗೆಗಳು ರಸ್ತೆಯ ಏಕಾಂತಕ್ಕೆ ಕನ್ನಡಿ ಹಿಡಿದ ಹಾಗೆ ಕಾಣುತ್ತಿತ್ತು. ಅದು ಯಾವತ್ತೋ ಮಾಡಿದ ರಸ್ತೆ, ಮತ್ತೆ ರಿಪೇರಿಯನ್ನೇ ಕಾಣದೆ ಹಾಳು ಹಾಳು ಸುರಿಯುತ್ತಿತ್ತು. ರಸ್ತೆಗೆ ಹಾಕಿದ ಕಪ್ಪು ಡಾಮರು, ಅದು ಒಂದು ಕಾಲದಲ್ಲಿ ವೈಭವದಿಂದ ಮೆರೆದ ರಸ್ತೆ ಎಂಬುದನ್ನು ಸಾರಿ ಹೇಳುತ್ತಿದ್ದರೂ ಇಂದು ಅದು, ತನ್ನ ಗತ ಕಾಲದ ಅವನತಿಯ ಸಂಕೇತವಾಗಿ ನಿಂತಿತ್ತು.

ಆ ಕೃತಕ ಜಲಾಶಯ ಮೌನವಾಗಿ ನಿಂತ ಕಾಡು ಗುಡ್ಡಗಳ ನಡುವೆ, ಸದ್ದಿಲ್ಲದೆ ಬೀಸುವ ಗಾಳಿಯ ನಡುವೆ ತಾನು ಅಲ್ಲಿ ನೂರಾರು ವರ್ಷಗಳಿಂದ ಇದ್ದೇನೇನೋ ಎಂಬಂತೆ ಪರಿಸರದೊಡನೆ ಒಂದಾಗಿತ್ತು. ನೀರಿನೊಳಗೆ ನಿಂತ ಗುಡ್ಡಗಳು, ನೀರಿನ ಅಂಚಿನ ಕಾಡು, ನೀರಿನಲ್ಲಿ ಉಳಿದು ಚಿಗುರಿಕೊಂಡ ಮರಗಳು, ನೀರಿನಲ್ಲಿ ತಮ್ಮನ್ನು ನೋಡಿಕೊಂಡು ಹಾರುತ್ತಿದ್ದ ಹಕ್ಕಿಗಳು, ಎಲ್ಲ ಜಲಾಶಯದೊಡನೆ ಏನೋ ಸಂಬಂಧ ಬೆಳೆಸಿಕೊಂಡಂತೆ ಇವನಿಗೆ ಕಂಡಿತು.

ಅಲ್ಲಲ್ಲಿ ತನ್ನ ವಾಹನವನ್ನ ನಿಲ್ಲಿಸಿ ಈತ ಜಲಾಶಯವನ್ನ ನೋಡಿದ. ಹೆಪ್ಪುಗಟ್ಟಿ ನಿಂತ ನೀರಿನಲ್ಲಿ ಸಣ್ಣಗೆ ಅಲೆಗಳು ಏಳುತ್ತಿದ್ದವು. ಅಕ್ಕಪಕ್ಕದ ಗುಡ್ಡ ಕಾಡನ್ನು ನೀರು ತನ್ನಲ್ಲಿ ಪ್ರತಿಬಿಂಬಿಸುತ್ತ ಯಾರೂ ನೋಡದ ಒಂದು ಚಿತ್ರವನ್ನ ಬರೆಯುತ್ತಿರುವಂತೆ ಅನಿಸಿತು,.

ಹಾಗೆಯೇ ಇಂಥದ್ದೆಂದು ಹೇಳಲಾಗದ ಒಂದು ವಿಚಿತ್ರ ಬೇಗುದಿ ಅಲ್ಲೆಲ್ಲ ವ್ಯಾಪಿಸಿಕೊಂಡಿರುವುದನ್ನ ಈತ ಗಮನಿಸಿದ. ಈ ಮುಳುಗಡೆ ಪ್ರದೇಶಕ್ಕೆ ಬಂದ ಕ್ಷಣದಿಂದ ಆತ ಇದನ್ನು ಅನುಭವಿಸುತ್ತ ಬಂದಿದ್ದ. ಆ ಪ್ರದೇಶದಲ್ಲಿ ಮುಳುಗಡೆಯಾಗದೇ ಉಳಿದ ಜನ, ಮನೆ, ಹಳ್ಳಿಗಳು ಸಾಕಷ್ಟು ಇದ್ದವು. ಇಂತಹಾ ಸಾವಿರಾರು ಜನರ ವರ್ತನೆಯಲ್ಲಿ, ಮಾತಿನಲ್ಲಿ, ಬದುಕಿನಲ್ಲಿ, ನಿತ್ಯದ ವ್ಯವಹಾರದಲ್ಲಿ ತಟ್ಟನೆ ಗುರುತಿಸಲಾಗದ ಒಂದು ನೋವು, ತಳಮಳ ಅವನ ಗಮನಕ್ಕೆ ಬಂದಿತ್ತು. ಅದೇ ಬಗೆಯ ಒಂದು ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯನ್ನು ಆತ ಹಿನ್ನೀರಿನ ಈ ಅಂಚಿನಲ್ಲೂ ಕಂಡ.

ಈತ ಹೀಗೆ ಹೋಗುತ್ತಿರುವಾಗ ಒಂದು ಬಗೆಯ ಭೀತಿ ಇವನನ್ನೂ ಬಂದು ಆವರಿಸಿಕೊಂಡಿತು. ಎಲ್ಲ ಕಡೆಯೂ ಕವಿದುಕೊಂಡ ಮೌನ ಇವನನ್ನು ಬಾಧಿಸಿತು. ಆಗೊಮ್ಮೆ, ಈಗೊಮ್ಮೆ ಕೂಗುವ ಹಕ್ಕಿಯ ಸದ್ದು, ಮರದ ರೆಂಬೆಗೆ ತನ್ನ ಮೈಯುಜ್ಜುವ ಅದೇ ಮರದ ಇನ್ನೊಂದು ಕೊಂಬೆಯ ಕೀರಲು ದನಿ, ದೂರದಲ್ಲಿ ಬೊಗಳುತ್ತಿರುವ ಒಂದು ನಾಯಿ...ಇಷ್ಟನ್ನು ಬಿಟ್ಟರೆ ಬೇರೊಂದು ಸದ್ದು ಅಲ್ಲಿ ಇಲ್ಲದ್ದರಿಂದ ಈತ ಕೊಂಚ ಆತಂಕಗೊಂಡ. ಜತೆಗೆ ಗೋಡೆಯಂತೆ ಒಂದು ಕಡೆ ನಿಂತ ಕಾಡು, ಮತ್ತೊಂದು ಕಡೆ ಮಡುಗಟ್ಟಿದ ನೀರು. ಇದೆಲ್ಲವನ್ನ ತನ್ನ ಕಕ್ಷೆಯಲ್ಲಿ ತೆಗೆದುಕೊಂಡಂತಿದ್ದ ಬಿಸಿಲು. ಆತ ಕಾರಿನಲ್ಲಿ ಕುಳಿತೇ ಭಯಭೀತನಾದ. ಒಂದು  ಬಗೆಯ ಆತಂಕಕ್ಕೆ ಒಳಗಾದ.

ಸದಾ ಗದ್ದಲ, ಗೌಜಿಯಲ್ಲಿಯೇ ಬದುಕುವ ತನಗೆ ಈ ಮೌನ ವಿಚಿತ್ರವೆನಿಸಿ, ಯಾರಾದರೂ ಜನ ತನ್ನ ಕಣ್ಣಿಗೆ ಬೀಳಬಹುದೆ ಎಂದು ಹುಡುಕಾಡಿದ. ಬಹಳ ದೂರದಿಂದ ಆಣೆಕಟ್ಟಿನ ಹಿನ್ನೀರಿನಲ್ಲಿ ಹಾದು ಬಂದರೂ ಒಂದು ನರಪಿಳ್ಳೆ ಎದುರಾಗದೇ ಇದ್ದುದು ವಿಚಿತ್ರವೆನಿಸಿತು. ಏನು ಈ ಪ್ರದೇಶದಲ್ಲಿ ಜನರೇ ಇಲ್ಲವೇ ಎಂದು ಗಾಬರಿಗೊಂಡ.

ಆಗ ದೂರದಲ್ಲಿ, ಜಲಾಶಯದ ದಂಡೆಯ ಮೇಲೆ, ಕಾಡಿನ ಹಸಿರು ಹಾಗೂ ನೀರಿನ ನೀಲಿಯ ನಡುವೆ ಅದಾರೋ ಕುಳಿತಿರುವುದು ಅವನ ಗಮನಕ್ಕೆ ಬಂದು ಕೊಂಚ ನಿಟ್ಟುಸಿರುಬಿಟ್ಟ.
ಕಾರಿನ ವೇಗವನ್ನ ಕಡಿಮೆ ಮಾಡಿ ಆ ವ್ಯಕ್ತಿಯ ಬಳಿ ತನ್ನ ಕಾರನ್ನ ನಿಲ್ಲಿಸಿದ.

ಕೆಳಗೆ ಕಣಿವೆಯಲ್ಲಿ ನೀಲಿ ನೀರು ಮೈಚಾಚಿ ಮಲಗಿದ್ದರೆ, ಮೇಲೆ ಒಂದು ದಿಣ್ಣೆ. ಅದರ ಮೇಲೆ ಅನ್ಯಮನಸ್ಕನಾಗಿ ಈ ಕಂಬಳಿ ಧರಿಸಿದ ವ್ಯಕ್ತಿ ಕುಳಿತಿದ್ದ. ತನ್ನ ಹಿಂದೆ ಒಂದು ಕಾರು ಬಂದು ನಿಂತದ್ದು ಅವನ ಗಮನಕ್ಕೆ ಬಂದಂತಿರಲಿಲ್ಲ. ಆತ ದೂರದಲ್ಲಿಯ ನೀರಿನಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದ.

ಈತ ಕಾರಿನ ಹಾರ್ನ್ ಮಾಡಿದ. 'ಅಯ್ಯಾ' ಎಂದು ಕರೆದ. ಆ ವ್ಯಕ್ತಿ ತನ್ನನ್ನು ಗಮನಿಸದೇ ಹೋದಾಗ ಕಾರಿನ ಬಾಗಿಲು ತೆರೆದು ಕೆಳಗೆ ಇಳಿದ.
ನೇರವಾಗಿ ಅವನ ಮುಂದೆ ಹೋಗಿ ನಿಂತಾಗ ಆತ ಇವನನ್ನು ಗಮನಿಸಿದ ಹಾಗೆ ಇವನತ್ತ ತಿರುಗಿದ.

ಅವನ ಮುಖ ನೋಡಿ ಇವನ ಎದೆ ಧಸ್ ಎಂದಿತು. ಆತ ತನ್ನ ಮೈಯನ್ನು ಕಂಬಳಿ ಕೊಪ್ಪೆಯೊಂದರಲ್ಲಿ ಮುಚ್ಚಿ ಇರಿಸಿಕೊಂಡಿದ್ದ. ಕೈಗಳು ಕಾಣದ ಹಾಗೆ, ಮೈ ಕಾಣದ ಹಾಗೆ, ಮುಖ ಒಂದೇ ಕಾಣುವಂತೆ ಕಂಬಳಿಯನ್ನು ಮೈಗೆ ಸುತ್ತಿಕೊಂಡಿದ್ದ. ಅವನ ಮುಖದ ಮೇಲೆ ಬಹಳ ದಿನಗಳ ಹರಿತವಾದ ಗಡ್ಡವಿತ್ತು. ಕಿವಿಗಳಲ್ಲಿಯ ಒಂಟಿಗಳು ಮುಚ್ಚಿಕೊಂಡ ಕಂಬಳಿಯಿಂದ ಹೊರಬಂದು ಕಾಣಿಸಿಕೊಂಡವು. ತಾನು ಬದುಕಿರುವ ಕಾಲದಿಂದ ದೂರವಾದ ಯಾವುದೋ ಕಾಲದ ಓರ್ವ ವ್ಯಕ್ತಿಯ ಹಾಗೆ ಆತ ಕಂಡು ಬಂದು ಈತ ತುಸು ಬೆದರಿದ. ಅವನ ಕೆನ್ನೆಗಳು ಚೂಪಾದ ಬೆಣಚು ಕಲ್ಲುಗಳ ಹಾಗೆ ತಿವಿಯಲು ಸಿದ್ಧವಾಗಿ ನಿಂತದ್ದನ್ನು ಈತ ಗಮನಿಸಿದ.

ಆತ ತನ್ನ ಕಣ್ಣುಗಳಿಂದ ಏನು ಎಂಬಂತೆ ಈತನನ್ನು ಕೇಳಿದಂತೆ ಅನಿಸಿ, 'ಯಜಮಾನ, ಯಾವ ಊರು?' ಎಂದು ಕೇಳಿದ.

'ನರಸೀ ಗದ್ದೆ.'

ಅಸ್ಪಷ್ಟವಾಗಿ ಕೇಳಿಬಂದಿತು ದನಿ. ಆಳವೇ ಅರಿಯದ ಬಾವಿಯೊಳಗೆ ಹಾಕಿದ ಕಲ್ಲೊಂದು ಬಹಳ ಹೊತ್ತಿನ ನಂತರ ನೀರಿಗೆ ಬಿದ್ದು ಸದ್ದು ಮೇಲೆ ಬಂದಂತೆ ಆತನ ದನಿ ಕೇಳಿಸಿತು. ಆದರೂ ಈತ ಕೇಳಿದ.

'ನರಸೀ ಗದ್ದೆ ಎಲ್ಲಿದೆ ?'

ಕಂಬಳಿಯೊಳಗಿನಿಂದ ಅವನ ಒಂದು ಕಪ್ಪು ಕೈ ಹೊರಬಂದಿತು. ಒಣಗಿ ಬಿದಿರ ಗೂಟದಂತಾಗಿ ನೆರಿಗೆಗಟ್ಟಿದ್ದ ಈ ಕೈಯನ್ನು ನೀರಿನತ್ತ ಚಾಚಿ ಅವನು ತೋರಿಸಿದ.
'ಅಗೋ ಅಲ್ಲಿ, ನೇರಲೇ ಗುಡ್ಡೆ ಕೆಳಗೆ.....'
ಅಲ್ಲೊಂದು ಗುಡ್ಡ ಇದ್ದುದು ಹೌದು. ನೀರಿನಲ್ಲಿ ಮುಳುಗಿ ಅದರ ಮೇಲ್ ಭಾಗವಷ್ಟೇ ಕಾಣುತ್ತಿತ್ತು. ಅದರ ಸುತ್ತ ನೀರು ಗುಡ್ಡದ ಮೇಲೆ ದಟ್ಟವಾಗಿ ಬೆಳೆದ ಮರ ಗಿಡ ಪೊದೆಗಳು.
'ನೇರಲೇ ಗುಡ್ಡೆ ಕೆಳಗೆ ನನ್ ಗದ್ದೆ...ಮನೆ...ಕೊಟ್ಟಿಗೆ...' ಎಂದ ಆತ ತುಸು ಉತ್ಸಾಹದಿಂದ.

'ಎಷ್ಟು ಎಕರೆ ಇತ್ತು ಜಮೀನು ?'

'ಐದು ಎಕರೆ. ನಾನೇ ಮಾಡಿದ್ದು. ನಾನೇ ದರಖಾಸ್ತು ಪಡೆದು, ನಾನೇ ಕಾಡು ಕಡಿದು, ನೆಲ ಸವರಿ, ಹಾಳೆ ಮಾಡಿ, ಉತ್ತು ಬಿತ್ತು ಕಳೆ ಕಿತ್ತು, ವ್ಯವಸಾಯ ಮಾಡಿದ್ದು. ಜನ ಅದನ್ನು ನರಸೀ ಗದ್ದೆ ಅಂತ ಕರೆದ್ರು. ನಾನೇ ಕಲ್ಸಂಕದ ನರಸಣ್ಣ...ನನ್ ಹೆಸರನಲ್ಲಿ ಜನ ಇದನ್ನ ನರಸೀ ಗದ್ದೆ ಅಂದ್ರು...ಊರ ಗೌಡ ನನ್ನ ಕೈಯಿಂದ ಇದನ್ನ ಕಸಗೋಬೇಕು ಅಂತ ನೋಡ್ದ....ಮತ್ತೆ ಯಾರೋ ಕಸಕೊಳ್ಳೋದಕ್ಕೆ ಬಂದ್ರು...ನಾ ಬಿಡಲಿಲ್ಲ, ಮಾಡ್ದೆ. ಮನೇಲಿ ಏನೇನೋ ಕಷ್ಟ ಬಂತು. ಅದನ್ನ ಅಡವು ಇಟ್ಟು ಸಾಲ ಮಾಡು ಅಂದ್ರು, ನಾನು ಈ ಕೆಲಸ ಮಾಡಲಿಲ್ಲ. ಒಂದಲ್ಲ, ಹದಿನೈದು ವರ್ಷ ಬೇಸಾಯ ಮಾಡ್ದೆ...ನರಸೀ ಗದ್ದೆ ಅಂದ್ರೆ ಬಂಗಾರದಂತಾ ನೆಲ ಅಂದ್ರು ಜನ. ಆದರೆ ಈ ಭೋಸುಡಿ ನನ್ ಮಗನ್ನ ಸರಕಾರ, ಇದನ್ನ ಮುಳುಗುಸ್ತು...ಊರಿಗೆಲ್ಲ ಏಲಕ್ಕೀ ದೀಪ ಕೊಡತೀನಿ ಅಂತು...ನಿಮ್ಮನ್ನೆಲ್ಲ ಉದ್ಧಾರ ಮಾಡ್ತೀನಿ ಅಂತು....ಸ್ವರ್ಗ ನೆಲಕ್ಕೆ ಇಳಸ್ತೀನಿ ಅಂತು...ಕೊನೆಗೆ ನಮಗೆ ಅದು ತೋರ್ಸಿದ್ದು ಮಾತ್ರ ನರಕಾನ...ಕಳ್ ನನ್ ಮಕ್ಳು ಎಲ್ಲ ನಾಶ ಮಾಡಿದ್ರು...'

ಮಾತನಾಡುತ್ತ ಆತ ಏಕೋ ವ್ಯಗ್ರನಾಗುತ್ತಿರುವುದು ಇವನ ಗಮನಕ್ಕೆ ಬಂದಿತು. ಆತ ಹಲ್ಲು ಕಚ್ಚತೊಡಗಿದ. ಅವನ ಕಣ್ಣುಗಳಲ್ಲಿ ಕೆಂಡದ ಮಳೆ ಕಂಡು ಬಂದಿತು. ಅವನ ಮೈ ನಡುಗತೊಡಗಿತು. ಅವನ ಮೈ ಇಡೀ ಸೆಟೆದುಕೊಂಡು ಎತ್ತರದ ದನಿಯಲ್ಲಿ ಕಿರುಚಾಡತೊಡಗಿದ.

'ಈ ನರಸೀ ಗದ್ದೆ ಯಾವ ನನ್ ಮಗನೂ ಮಾಡಿದ್ದಲ್ಲ, ನಾನು ಮಾಡಿದ್ದು. ನಾನು ಬೆವರು ಸುರಿಸಿದ್ದು. ನಾನು ಒಪ್ಪತ್ತು ಉಂಡಿದ್ದೆ. ನಾನು ನಿದ್ದೆಗೆಟ್ಟಿದ್ದೆ. ನಾನು ಮೈ ಮುರಿದಿದ್ದೆ. ಯಾರು ಯಾರೋ ಬಂದಾಗ ಇಲ್ಲ ಅಂದಿದ್ದೆ. ಮಳೆ, ಬಿಸಿಲು ಅಂತಿಲ್ಲ ಅಂಗೆ ಗೇಯ್ದಿದ್ದೆ...ಆಮ್ಯಾಲೆ...ಬೋಸುಡಿ ಮಕ್ಳು...ಬೋಸುಡಿ ಮಕ್ಳು...'

ಕಂಬಳಿ ಹೊದ್ದು ಕುಳಿತ ಆತನ ಮೈ ನಡುಗತೊಡಗಿತು. ಅವನ ಮುಖ ವಿಕಾರವಾಯಿತು. ಆತ ತನ್ನ ಹಲ್ಲುಗಳನ್ನು ಕಟಕಟನೆ ಕಚ್ಚತೊಡಗಿದ. ಅವನಿಗೆ ಬಾಹ್ಯ ಪ್ರಪಂಚದ ಅರಿವು ಹಾರಿಹೋದಂತೆ ಅನಿಸಿತು. ಅವನ ಅವಸ್ಥೆ ಕಂಡು ಈತ ಬೆದರಿದ. ಇವನ ಮೈ ಭೀತಿಯಿಂದ ಕಂಪಿಸತೊಡಗಿತು.

ಈತ ನಿಧಾನವಾಗಿ ಅಲ್ಲಿಂದ ಹಿಂದೆ ಸರಿದ. ಇನ್ನು ಅಲ್ಲಿ ನಿಂತಿರುವುದು ಅಪಾಯ ಎನಿಸಿ ನೇರ ಕಾರಿನ ಬಳಿ ಬಂದು ಕಾರು ಹತ್ತಿದ. ಕಾರು ಅಲ್ಲಿಂದ ಹೊರಟಾಗ ತಿರುಗಿ ನೋಡಿದ. ಆತ ಹಿಂದಿನಂತೆಯೇ ರಸ್ತೆಗೆ ಬೆನ್ನು ಹಾಕಿ ಕುಳಿತಿದ್ದ. ಈತ ನಿಧಾನವಾಗಿ ಕಾರು ನಡೆಸಿಕೊಂಡು ಮುಂದೆ ಹೋದ.

ತುಂಬಾ ಕಷ್ಟಪಟ್ಟು ಮಾಡಿದ ಜಮೀನನ್ನ ಯಾರೋ ಕಿತ್ತುಕೊಂಡಾಗ ಸಿಟ್ಟು ನೋವು ಸಹಜ, ನರಸಣ್ಣ ಈ ನೋವಿನಿಂದ ನೊಂದಿದ್ದಾನೆ ಅನಿಸಿತು.

ಸುಮಾರು ಮೂವತ್ತು ವರ್ಷಗಳ ಹಿಂದೆ ಮಾಡಿದಂತಿದ್ದ ಟಾರು ರಸ್ತೆಯ ಮೇಲೆ ಕಾರು ಓಡಿತು.

ಹೀಗೆ ಹೋದವನಿಗೆ ಎಷ್ಟು ದೂರ ಹೋದರೂ ಹಿನ್ನೀರು ಮುಗಿಯುವಂತೆ ಕಾಣಲೇ ಇಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ ಅನಿಸಿ ಆತ ಒಂದು ಕಡೆ ಕಾರನ್ನ ತಿರುಗಿಸಿದ. ಮತ್ತೆ ಅದೇ ರಸ್ತೆ. ಅದೇ ನೀರು. ಅದೇ ಕಾಡು ಮತ್ತೆ ಅದೇ ನೇರಲೇ ಗುಡ್ಡ.

ಆದರೆ ಒಂದು ಅರ್ಧ ಗಂಟೆಯ ಹಿಂದೆ ಆ ಕಂಬಳಿಯವನು ಕುಳಿತ ದಿಣ್ಣೆ  ಬರಿದಾಗಿತ್ತು. ಆ ಮನುಷ್ಯ ಅಲ್ಲಿಯೇ ಎಲ್ಲಿಯಾದರೂ ಇರಬಹುದೇ ಎಂದು ಹುಡುಕಾಡಿದ. ಆತ ಇವನಿಗೆ ದಾರಿಯಲ್ಲೂ ಎದುರಾಗಿರಲಿಲ್ಲ. ಈಗಲೂ ಎಲ್ಲೂ ಕಾಣಲಿಲ್ಲ. ಮುಂದೆ ಸಿಗಬಹುದು ಎಂದು ಮುಂದೆ ಕಾರನ್ನು ನಡೆಸಿದ. ಆಗಲೂ ಆತ ಸಿಗಲಿಲ್ಲ. ಹಾಗಾದರೆ ಎಲ್ಲಿ ಹೋದ?

ಈತ ವಿಚಾರ ಮಾಡುತ್ತ ಮುನ್ನಡೆದ. ಕಾರು ಮುಳುಗಡೆ ಪ್ರದೇಶದಿಂದ ಹೊರ ಬಂದಿತು.

ಒಂದು ವೃತ್ತ ಎದುರಾಯಿತು. ಅಲ್ಲೊಂದು ಹಳ್ಳಿ ಹೋಟೆಲು. ಬೆಳಗ್ಗೆ ಇಲ್ಲಿಗೆ ಬಂದಾಗಿನಿಂದ ಟೀ ಕುಡಿದಿರಲಿಲ್ಲವಾದ್ದರಿಂದ ಹೋಟೆಲಿನ ಒಳಹೊಕ್ಕ.
ತಿಂಡಿಗೆ ಹೇಳಿ ಕುಳಿತಾಗ ಹೋಟೆಲಿನ ಮಾಲೀಕ ಬಂದು ಪಕ್ಕದಲ್ಲಿ ಕುಳಿತ.
'ಎಲ್ಲಿಂದ ಬಂದಿದೀರಾ ಸಾರ್  ?' ಆತ ಕೇಳಿದ.

'ಬೆಂಗಳೂರಿನಿಂದ, ಅಣೆಕಟ್ಟನ್ನ ನೋಡೋಣ ಅಂತ ಬಂದೆ.'
ತಟ್ಟನೆ ಅವನಿಗೆ ಕಲ್ಸಂಕದ ನರಸಣ್ಣನ ನೆನಪಾಯಿತು.
'ಅಲ್ಲ ಇವರೇ, ಇಲ್ಲಿ ಕಲ್ಸಂಕದ ನರಸಣ್ಣ ಅಂತ...'

ಇವನ ಮಾತು ಮುಗಿಯುವ ಮುನ್ನವೇ ಆತ ಕೇಳಿದ 'ನರಸೀಗದ್ದೆ ನರಸಣ್ಣ ಅಲ್ವಾ ?'

'ಹೌದು, ಅವನು ಸಿಗಬಹುದೇ ?'

ಆತ ನಕ್ಕ.

'ಈ ಹಿನ್ನೀರಿನ ಪ್ರದೇಶದಲ್ಲಿ ನೀವು ಒಂಟಿಯಾಗಿ ತಿರುಗಾಡಿದರೆ ನಿಮಗೆ ಒಬ್ಬನಲ್ಲ ಸಾವಿರ ಜನ ನರಸಣ್ಣಗಳು ಸಿಗತಾರೆ...ಅಣೆಕಟ್ಟನ್ನ ಕಟ್ಟಿದ್ದರಿಂದ ಸಾವಿರ ಜನರ ಬದುಕು ಉದ್ಧಾರ ಆಗಿದೆ...ಆದರೆ ಅಷ್ಟೇ ಜನರ ಬದುಕು ಹಾಳಾಗಿದೆ. ಅವರೆಲ್ಲ ಇಲ್ಲಿ ಪ್ರೇತಗಳಾಗಿ ಅಲೆದಾಡ್ತಿದಾರೆ...ಇದನ್ನ ಯಾರೂ ನಂಬೋದಿಲ್ಲ...ಆದರೆ ನಮ್ಮ ಅನುಭವವೇ ಬೇರೆ...ಇಲ್ಲಿ ಕವಿದಿರೋ ಈ ಮೌನ, ಭೀತಿಯ ಹಿಂದೆ ಮತ್ತೆ ಏನು ಇರಲಿಕ್ಕೆ ಸಾಧ್ಯ ಹೇಳಿ ?'

ಮಾಣಿ ತಂದು ಎದುರು ಇರಿಸಿದ ತಿಂಡಿಯ ತಟ್ಟೆಯನ್ನು ತನ್ನ ಬಳಿ ಎಳೆದುಕೊಂಡು ಕುಳಿತ ಆತ ಮತ್ತೊಮ್ಮೆ ನರಸಣ್ಣನನ್ನ ನೆನಸಿಕೊಂಡ.
ಮನಸ್ಸು ಏಕೋ ಸಣ್ಣಗೆ ಮಿಡುಕಾಡಿತು.
ದೇಹ ತನಗರಿವಿಲ್ಲದೆ ಕಂಪಿಸಿತು.

(೧೯೯೯)

✍ ಡಾ. ನಾ. ಡಿಸೋಜ
{ಸಮಗ್ರ ಕತೆಗಳು ಸಂಪುಟ ೨}

ಈ ಸಣ್ಣಕತೆ ಆಧರಿಸಿದ 'ಶರಾವತಿ' ಕಿರುಚಿತ್ರದ ಲಿಂಕ್:
https://youtu.be/IhUzzd_RQg8

Monday 18 November 2019

ಮಾರಿಹಬ್ಬದ ಸುತ್ತಮುತ್ತ... ಅಸಲಿ ವಿಷಯ ಏನು ಗೊತ್ತ....

ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ದುಂದುವೆಚ್ಚ ತರವೇ?

ಬಡತನ ಹೆಚ್ಚಿಸುವ ಮಾರಿ ಹಬ್ಬ!



ಡಿ.ಜಿ.ನಾಗರಾಜ್ ಹರ್ತಿಕೋಟೆ


ಶ್ರಾವಣ ಮಾಸದ ಆಸುಪಾಸಿನ ದಿನಗಳಲ್ಲಿ ಮಾರಿ ಹಬ್ಬದ ಸಂಭ್ರಮ ತುಸು ಜೋರಾಗಿಯೇ ಇರುತ್ತದೆ. ಇತ್ತೀಚೆಗೆ ತನ್ನ ಲವಲವಿಕೆಯನ್ನು ಕಳೆದುಕೊಂಡು ಬಿಕೋ ಎನ್ನುತ್ತಿರುವ ಗ್ರಾಮಗಳಲ್ಲಿ, ಮಾರಿ ಹಬ್ಬದ ಸಂಜೆಯ ದಿನಗಳಲ್ಲಿ ಕಾಲಿಡಲಾಗದಷ್ಟು ಜನಜಂಗುಳಿ ಇರುತ್ತದೆ. ವರ್ಷಕ್ಕೊಮ್ಮೆ ಅಥವಾ ಎರಡು ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವದಲ್ಲಿ ಜನಪದೀಯ ಆಚರಣೆಗಳ ಜೊತೆಗೆ ಮದ್ಯ, ಮಾಂಸದ ಸಮಾರಾಧನೆ ಎಗ್ಗಿಲ್ಲದೆ ನಡೆಯುತ್ತದೆ.


ಇಂತಿಪ್ಪ ಮಾರಿ ಹಬ್ಬದ ಹಿನ್ನೆಲೆಯನ್ನು ಗಮನಿಸಿ
ದಾಗ, ಮಾನವ ಮೊದಮೊದಲಿಗೆ, ಪ್ರಕೃತಿದೇವಿ
ಯನ್ನು ಪೂಜಿಸುವ ಮೂಲಕ ಆಕೆಯ ಆರಾಧಕನಾಗಿದ್ದ.
ಇದು ಆತನ ಬದುಕಿಗೆ ಸ್ಫೂರ್ತಿ, ಉಲ್ಲಾಸ, ನೆಮ್ಮದಿ ನೀಡುವ ಆರಾಧನೆಯಾಗಿತ್ತು ಎಂಬುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಇದು ನಡೆದುಬಂದ ಹಾದಿ
ಯನ್ನು ಗಮನಿಸಿದರೆ, ಬಹುತೇಕ ಕಥೆಗಳು ವರ್ಣಾಶ್ರಮ
ವ್ಯವಸ್ಥೆಯ ಹಿನ್ನೆಲೆಯನ್ನು ಹಾಸಿಹೊದ್ದಿರುವುದು ತಿಳಿಯುತ್ತದೆ. ಅಲ್ಲಿ ಮತ್ತದೇ ಸಾಮಾಜಿಕ ಶ್ರೇಣೀ
ಕರಣದ ಮೇಲ್ಪಂಕ್ತಿಯೇ ಮುನ್ನೆಲೆಗೆ ಬರುತ್ತದೆ. 
ಬ್ರಾಹ್ಮಣತಿಯೊಬ್ಬಳನ್ನು ಶೂದ್ರ ಹುಡುಗನೊಬ್ಬ ತನ್ನ ಹಿನ್ನೆಲೆ ತಿಳಿಸದೇ ವಿವಾಹವಾಗುತ್ತಾನೆ. ತದನಂತರ ಆತನ ಹಿನ್ನೆಲೆಯು ಹೆಂಡತಿಯ ಅರಿವಿಗೆ ಬರುತ್ತದೆ. ಆಗ ಆಕೆ ಪುನರ್ಜನ್ಮವೆತ್ತಿ ಮಾರಿಯಾಗಿ, ಕೋಣ ರೂಪದ ಶೂದ್ರ ಗಂಡನನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ಅಂತ್ಯ ಹಾಡಲಾಗಿದೆ. ವಿಚಿತ್ರವೆಂದರೆ, ಮೇಲ್ವರ್ಗದ ಗಂಡು ಶೂದ್ರ ಹುಡುಗಿಯನ್ನು ವಿವಾಹವಾದರೆ ಅಪರಾಧವೆಂದು ಬಿಂಬಿಸದೆ, ಇತಿಹಾಸದ ಪುಟಗಳಲ್ಲಿ ವಿನಾಯಿತಿಯನ್ನೂ ಕೊಡಲಾಗಿದೆ.

ಮಾರಿ ಹಬ್ಬಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು
ಕಥೆ ಚಾಲ್ತಿಯಲ್ಲಿದೆ. ಒಂದು ಪ್ರಾಂತ್ಯದಲ್ಲಿನ ಶ್ರೀಮಂತ
ಮಂದಿ ನೂರಾರು ಎಕರೆ ಭೂಮಿಯನ್ನು ಹೊಂದಿದ್ದರೆ,
ಕೆಳವರ್ಗದ ಮಂದಿಯೂ ಅಗತ್ಯವಿರುವಷ್ಟು ಭೂಮಿ
ಯಲ್ಲಿ ಸ್ವಾವಲಂಬಿ ಜೀವನವನ್ನು ಕಂಡುಕೊಂಡಿ
ರುತ್ತಾರೆ. ಹೆಚ್ಚು ಭೂಮಿ ಹೊಂದಿದ ಮೇಲ್ವರ್ಗಕ್ಕೆ ಕೃಷಿಕ ಆಳುಗಳು ಸಿಗುವುದೇ ದುಸ್ತರವಾಗಿರುತ್ತದೆ. ತಾವು ಶ್ರಮರಹಿತ ಆಡಂಬರದ ಜೀವನ ಕಂಡುಕೊಳ್ಳಬೇಕು ಎಂದರೆ, ಹೇಗಾದರೂ ಸರಿ ಇವರನ್ನು ಮಟ್ಟ ಹಾಕ
ಬೇಕು ಎಂಬ ಆಲೋಚನೆ ಅವರದ್ದು. ಹೀಗಿರಲಾಗಿ, ಊರಿಗೆ ಒಮ್ಮೆ ಭಯಾನಕ ಸೋಂಕು ತಗುಲಿ, ಊರಿ
ಗೂರೇ ಸಾವಿನ ಮನೆಯಾಗುತ್ತದೆ. ಇದೇ ಅವಕಾಶ
ಬಳಸಿಕೊಂಡ ಶ್ರೀಮಂತರು ಮತ್ತು ಪೂಜಾರಿ ‘ಊರ ದೇವತೆ ನಮ್ಮ ಮೇಲೆ ಮುನಿದಿದ್ದಾಳೆ. ಪ್ರಾಣಿಗಳ ಬಲಿ ಕೊಟ್ಟು ಪ್ರತಿವರ್ಷವೂ ಮಾರಿ ಹಬ್ಬ ಮಾಡಿದರೆ ಶಾಂತಳಾಗುತ್ತಾಳೆ’ ಎಂದು ಜನರನ್ನು ನಂಬಿಸುತ್ತಾರೆ. ಕಡೆಗೆ, ಮಾರಿ ಹಬ್ಬ ಮಾಡುವ ಬಗ್ಗೆ ಒಕ್ಕೊರಲ ತೀರ್ಮಾನವಾಗುತ್ತದೆ. ಮಾರಿ ಹಬ್ಬ ಮಾಡುವವರಾರು...? ಮತ್ತದೇ ಮಂದಿ.

ನೆಂಟರಿಷ್ಟರನ್ನು ಕಲೆಹಾಕಿ ಹಬ್ಬದ ನೆಪದಲ್ಲಿ ಪ್ರಾಣಿ ಬಲಿಯೊಂದಿಗೆ ಮದ್ಯ, ಮಾಂಸದ ಭರ್ಜರಿ ರಸದೌತಣ ನಡೆಯುತ್ತದೆ. ಹೀಗೆ ಇತ್ತ ಹಬ್ಬವೇನೋ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಅತ್ತ ಮನೆಯಲ್ಲಿ ನಿಧಾನವಾಗಿ ಅಶಾಂತಿ ಭುಗಿಲೇಳುತ್ತದೆ. ಕಾರಣವಿಷ್ಟೇ, ಮಾರಿಗೆ ಔತಣ ನೀಡಲು ಕೂಡಿಟ್ಟ ಹಣ ಸಾಲದಾಗಿ, ಕೆಳವರ್ಗದ ಮಂದಿಯೆಲ್ಲಾ ಶ್ರೀಮಂತರ ಮನೆ
ಬಾಗಿಲಿಗೆ ಎಡತಾಕಿ ಬೊಗಸೆ ತುಂಬಾ ಹಣ ತಂದಿರು
ತ್ತಾರೆ. ಈ ಸಮಯಕ್ಕಾಗಿಯೇ ಕಾದು ಕುಳಿತವರು
ಕೆಲವು ದಿನಗಳ ನಂತರ ಹಣ ಮರುಪಾವತಿಗೆ ಪೀಡಿಸುತ್ತಾರೆ. ಸಾಲ ತೀರಿಸಲು ಆದಾಯದ ಮೂಲಗಳೇ ಇಲ್ಲದವರು ಶ್ರೀಮಂತರ ಮನೆಗಳಲ್ಲಿ ಜೀತದಾಳುಗಳಾಗುತ್ತಾರೆ. ಅವರ ದುಡಿಮೆಯ ಹಣ ಬಡ್ಡಿ ಚುಕ್ತಾಗಷ್ಟೇ ಸೀಮಿತವಾಗುತ್ತದೆ. ಅಸಲಿನ
ಬಾಬತ್ತು ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ವರ್ಗಾವಣೆ
ಯಾಗಿ, ಅದು ತೀರದ ಸಾಲವಾಗಿಬಿಡುತ್ತದೆ.

ಗುಪ್ತ ಕಾರ್ಯಸೂಚಿಗಳೇ ಹೀಗೆ. ಅಲ್ಲಿ ಬಲಿಯಾಗು
ವವರು ಅಮಾಯಕರೇ ಆಗಿರುತ್ತಾರೆ. ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಆಚರಿಸುವ ಮಾರಿ ಹಬ್ಬದ ಸಂಭ್ರಮವು ಜನಪದೀಯತೆಯನ್ನು ಕಳೆದುಕೊಂಡು, ಉಂಡು ತಿಂದು ತೇಗುವುದಕ್ಕಷ್ಟೇ ಸೀಮಿತವಾಗಿದೆ. ಸ್ಪರ್ಧೆಗಿಳಿ
ದವರಂತೆ ಹಬ್ಬ ಮಾಡುವ ಹಳ್ಳಿಗರು ಮಾಡುವ ವೆಚ್ಚವು ಎಷ್ಟೋ ಬಾರಿ, ಅವರ ಒಣಭೂಮಿಯಲ್ಲಿ ಬೆಳೆ
ಯುವ ಬೆಳೆಯ ವರ್ಷದ ಆದಾಯಕ್ಕಿಂತಲೂ ಹೆಚ್ಚು! ಹಬ್ಬದ ನೆಪದಲ್ಲಿ ನಡೆಯುವ ಅತಿಥಿ ಸತ್ಕಾರಕ್ಕೆ ಸಂತಸ
ಪಡಬೇಕೋ, ಆರ್ಥಿಕ ಜಂಜಾಟಗಳ ನಡುವೆಯೂ ಮಾಡುವ ಹಬ್ಬಕ್ಕೆ ಸಂಭ್ರಮಿಸಬೇಕೋ ತಿಳಿಯದು.

ಇಲ್ಲಿ ಸಂಪ್ರದಾಯ, ನಂಬಿಕೆ, ಆಚರಣೆ, ಸಂಸ್ಕೃತಿ ಮತ್ತು ಆಹಾರದ ಹಕ್ಕುಗಳು ಪ್ರಶ್ನಾತೀತ. ಆದರೆ ಅವುಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚ, ಹುನ್ನಾರ, ಗುಪ್ತ ಸಿದ್ಧಾಂತಗಳು ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿವೆ. ಇಲ್ಲಿ ಬಂಡವಾಳವಾಗುತ್ತಿರು
ವುದು ಅಮಾಯಕರ ಭಾವನೆಗಳೇ. ಬೇರೆಲ್ಲಾ ದಿನಗಳಲ್ಲಿ ಅತಿ ಸರಳವಾಗಿ ಬದುಕುವ ಜನ, ಹಬ್ಬ, ಜಾತ್ರೆ, ಉತ್ಸವಗಳಲ್ಲಿ ವರ್ಷದ ವರಮಾನವನ್ನೆಲ್ಲ ವೆಚ್ಚ ಮಾಡಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸೊರಗಿ ಹೋಗುತ್ತಿರುವುದು ದುರಂತವೇ ಸರಿ. ಜನ ಬದಲಾದಂತೆಲ್ಲಾ ಆಳುವವರ ಗುಪ್ತ ಕಾರ್ಯ
ಸೂಚಿಗಳ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ತಮ್ಮ ಅಸ್ತಿತ್ವಕ್ಕಾಗಿ ಜನರ ಭಾವನೆಗಳನ್ನು 
ಅವರು ಬಳಸಿಕೊಳ್ಳುತ್ತಾರೆ. 

Sunday 17 November 2019

ವಿಜ್ಞಾನದಲ್ಲಿ ಸೃಜನಶೀಲತೆ

ವಿಜ್ಞಾನದಲ್ಲಿ ಸೃಜನಶೀಲತೆ



ರಾಜು ಭೂಶೆಟ್ಟಿ


ವಿಜ್ಞಾನ ವಿಷಯಕ್ಕೆ ಅನ್ವಯಿಸಿ ನೋಡಿದಾಗ ವಿದ್ಯಾರ್ಥಿಗಳು ಸಮಸ್ಯಾತ್ಮಕ ಸನ್ನಿವೇಶಗಳನ್ನು ಅರಿತು ಅದಕ್ಕೆ ಉತ್ತರವನ್ನು ಹುಡುಕಲು ಸ್ವಂತವಾಗಿ ವಿವೇಚಿಸುವುದು ಸೃಜನಶೀಲ ಚಿಂತನೆ ಎನಿಸಿಕೊಳ್ಳುತ್ತದೆ.


ಮಕ್ಕಳು ಕುತೂಹಲಿಗಳಾಗಿದ್ದು, ಹೊಸತನ್ನು ಹುಡುಕಲು ಒಂದೇ ಸಮನೆ ಪ್ರಶ್ನೆಗಳನ್ನು ಹಾಕಿದರೆ ಅವರು ಪ್ರತಿಭಾಶಾಲಿಗಳೆಂದೇ ನಾವು ಮನಗಾಣಬೇಕು. ಕೇವಲ ಕಲಿಸುವ ವಿಷಯಕ್ಕೆ ಸೀಮಿತವಾಗಿರದೇ, ವಿಷಯಕ್ಕೆ ಸಂಬಂಧವಿರಲಿ, ಇಲ್ಲದಿರಲಿ, ಕುತೂಹಲಭರಿತವಾಗಿ ಗುಣಮಟ್ಟದ ಪ್ರಶ್ನೆಗಳನ್ನು ಕೇಳುವ ಮುಕ್ತ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಿದಾಗ ಅವರಲ್ಲಿ ಸೃಜನಾತ್ಮಕತೆ ಎಂಬುದು ವೃಕ್ಷವಾಗಿ ಬೆಳೆಯುತ್ತದೆ.

ಕೇವಲ ಪ್ರಶ್ನೆಗಾಗಿ ಕೇಳಿದ ಪ್ರಶ್ನೆಗಳಾಗಳಲ್ಲ. ಕೇಳಿದ ಪ್ರಶ್ನೆಯ ಹಿಂದಿನ ಆಲೋಚನೆ, ಅದರ ಗುಣಮಟ್ಟವು ಹೇಗಿದೆ ಎಂಬುದು ಮಾತ್ರ ಸೃಜನಾತ್ಮಕತೆಯನ್ನು ಸೂಚಿಸುತ್ತದೆ.

ಸೃಜನಾತ್ಮಕ ಆಲೋಚನೆಯಲ್ಲಿರುವ ಹಂತಗಳು

l ಸಿದ್ಧತೆಯ ಹಂತ- ಈ ಹಂತದಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯವಾದ ಮಾಹಿತಿ ಸಂಗ್ರಹಣೆ ನಡೆಯುತ್ತದೆ. ಸಂಗ್ರಹಿತ ಸಾಮಗ್ರಿಗಳನ್ನು ವಿಶ್ಲೇಷಿಸಿ ವ್ಯವಸ್ಥೆಗೊಳಿಸುವ ದಿಸೆಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತದೆ.

l ಸುಪ್ತ ಚಿಂತನೆ- ಈ ಹಂತದಲ್ಲಿ ಸಮಸ್ಯೆ ಪರಿಹಾರದ ದೃಷ್ಟಿಯಿಂದ ಸಾಕಷ್ಟು ಪ್ರಗತಿ ಉಂಟಾಗುತ್ತದೆ. ವಿಚಾರಗಳು ತಮಗೆ ತಾವೇ ವ್ಯವಸ್ಥಿತಗೊಂಡು ಸಮಸ್ಯೆಯ ಪರಿಹಾರವು ಉದ್ಭವಿಸುವುದಕ್ಕೆ ಸಿದ್ಧವಾಗುತ್ತದೆ.

l ವಿಚಾರ ಸರಣಿ / ಜ್ಞಾನೋದಯ- ಈ ಹಂತದಲ್ಲಿ ಪರಿಹಾರವು ಆರ್ಕಿಮಿಡಿಸ್‌ನಿಗೆ ಹೊಳೆದಂತೆ ಇದ್ದಕ್ಕಿದ್ದಂತೆ ಹೊಳೆಯಬಹುದು. ಅಥವಾ ಆಲೋಚಕ ತನ್ನ ಸಮಸ್ಯೆಯ ಬಗ್ಗೆ ಒಳನೋಟವನ್ನು ಪಡೆಯಬಹುದು.

l ಸಮರ್ಥನಿಯ ಮತ್ತು ಪರಿಷ್ಕರಣದ ಹಂತ- ಇದು ತುಂಬಾ ಮಹತ್ವದ ಹಂತವಾಗಿದ್ದು, ಈ ಹಂತದಲ್ಲಿ ಸಮಸ್ಯೆಯ ಪರಿಹಾರವನ್ನು ತಾಳೆ ನೋಡಲಾಗುವುದು. ಅದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ನಿವಾರಿಸಿ ಪರಿಷ್ಕರಿಸಿ ಅದಕ್ಕೊಂದು ಸರಿಯಾದ ರೂಪ ಬರುವಂತೆ ಪ್ರಕಟಿಸಲಾಗುವುದು.

ಸೃಜನಶೀಲತೆಯ ತಾಯಿ ಬೇರು ಆಲೋಚಿಸುವುದು. ಮಕ್ಕಳ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ಸಮಸ್ಯೆಯ ವಿಶ್ಲೇಷಣೆ ಮತ್ತು ಪರಿಹಾರಕ್ಕೆ ಹೊಸ ಮತ್ತು ಹಳೆಯ ಮಾರ್ಗಗಳಾವವು? ಎಂದು ಕೇಳಲು, ಚರ್ಚಿಸಲು ಬಿಡಬೇಕು. ಏನಾದರೂ ಹೊಸತನ್ನು ಆಲೋಚಿಸಿ, ಸೃಷ್ಟಿಸಿ ಎಂದು ಸ್ಪರ್ಧೆಗಳನ್ನು ಏರ್ಪಡಿಸಬೇಕು.

ಉದಾಹರಣೆಗೆ- ಒಂದು ಬೀಕರ್‌ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು, ಅದರೊಳಗೆ ಪೊಟ್ಯಾಶಿಯಂ ಪರ್ಮಾಂಗನೇಟ್ ಹರಳನ್ನು ಹಾಕಿದಾಗ ನೀರಿನ ಬಣ್ಣ ಬದಲಾಗುತ್ತದೆ. ಕಾರಣವೇನು? ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಅವರು ಪೊಟ್ಯಾಶಿಯಂ ಪರ್ಮಾಂಗನೇಟ್ ಅಣುಗಳು ನೀರಿನಲ್ಲಿ ಹಂಚಿ
ಹೋಗುವುದರಿಂದ ಹೀಗಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ಅಣುಗಳು ಹೆಚ್ಚಿನ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶದೆಡೆಗೆ ಚಲಿಸುವ ಕ್ರಿಯೆಯನ್ನು ವಿಸರಣೆ ಎನ್ನುವರು ಎಂದು ಉತ್ತರಿಸುತ್ತಾರೆ. ಹಾಗಾದರೆ ಈ ವಿಸರಣೆ ಕ್ರಿಯೆ ಇಲ್ಲದಿದ್ದರೆ ಏನಾಗುತ್ತಿತ್ತು? ಎಂದು ವಿದ್ಯಾರ್ಥಿಗಳನ್ನು ಆಲೋಚನೆಗೆ ಹಚ್ಚಬೇಕಾಗುತ್ತದೆ.

l ಉಪಯುಕ್ತ ಅಣುಗಳನ್ನು ದೇಹದೊಳಗೆ ಹಾಗೂ ಅನುಪಯುಕ್ತ
ವಾದವುಗಳನ್ನು ಹೊರಹಾಕುವ ಕ್ರಿಯೆಗಳು ನಡೆಯುತ್ತಿರಲಿಲ್ಲ.

l ವಿಸರಣೆ ಇಲ್ಲದಿದ್ದರೆ ಭೂಮಿಯ ಮೇಲೆ ಮನುಷ್ಯನ ಜೀವನವೇ ದುಸ್ತರವಾಗುತ್ತಿತ್ತು. ಕಾರಣ ಉಸಿರಾಟ ಕ್ರಿಯೆಯಲ್ಲಿ ಜೀವಕೋಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

l ನೀರು ಮತ್ತು ಲವಣಾಂಶಗಳು ಸಸ್ಯಗಳ ಬೇರುಗಳಿಂದ ಹೀರಲ್ಪಡಲು ವಿಸರಣೆ ಅತ್ಯಗತ್ಯ. ಇದು ನಡೆಯುತ್ತಿರಲಿಲ್ಲ.

l ರಕ್ತದಲ್ಲಿನ ಹಿಮೋಗ್ಲೋಬಿನ್‌ಗೆ ಆಮ್ಲಜನಕ ಒದಗಿಸುವ ಕೆಲಸವು ಸಾಧ್ಯವಾಗುತ್ತಿರಲಿಲ್ಲ.

l ಆಹಾರ ತಯಾರಿಸುವಾಗ ಅದರ ಸುವಾಸನೆ ಹರಡಿರುವುದನ್ನು ವಾಸನೆ ಮೂಲಕ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ.

l ಎಲೆಗಳಲ್ಲಿರುವ ಆಮ್ಲಜನಕ ವಾತಾವರಣಕ್ಕೆ ಬಿಡುಗಡೆಯಾಗುತ್ತಿರಲಿಲ್ಲ.

ಹೀಗೆ ವಿಸರಣೆಯ ಒಂದು ಪ್ರಯೋಗದ ಮೂಲಕ ಅದರ ಅನ್ವಯಗಳನ್ನು ತಿಳಿಸುವ ಸೃಜನಾತ್ಮಕ ಕಾರ್ಯವನ್ನು ಮಾಡಬಹುದಾಗಿದೆ. ವಿಜ್ಞಾನದ ಪ್ರತಿಯೊಂದು ತತ್ವಗಳನ್ನು ಪ್ರಯೋಗಗಳ ಮೂಲಕ ವಿವರಿಸಿ ನಿತ್ಯ ಜೀವನದಲ್ಲಿ ಆ ತತ್ವಗಳ ಮಹತ್ವವನ್ನು ತಿಳಿಸುವುದರಿಂದ ವಿಜ್ಞಾನದಲ್ಲಿ ಸೃಜನಾತ್ಮಕತೆಯನ್ನು ಮೂಡಿಸಬಹುದಾಗಿದೆ.

(ಲೇಖಕರು ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ, ಡಯಟ್, ಧಾರವಾಡ)

ಕಥೆಗಳ ಮೂಲಕ ವ್ಯಾಕರಣ ಕಲಿಕೆ

ಕಥೆಕಥೆ ಕಾರಣ.. ಕಥೆ ಮೂಲಕ ವ್ಯಾಕರಣ!



ಮಂಜುಳಾ ರಾಜ್‌


ಕ ಥೆಗಳಿಗೆ ಮಕ್ಕಳಲ್ಲಿ ಒಂದು ರೀತಿಯ ಮಾಂತ್ರಿಕ ಜಗತ್ತನ್ನೇ ಸೃಷ್ಟಿಸಿ ಮಂತ್ರಮುಗ್ಧಗೊಳಿಸುವ ಜಾದೂಶಕ್ತಿಯಿದೆ. ಅವು ಬದುಕಿನ ಬಗ್ಗೆ ಹೇಳುತ್ತವೆ, ನಮ್ಮ ಬಗ್ಗೆ, ಇತರರ ಬಗ್ಗೆ ಕೂಡ ಕುತೂಹಲ ಸೃಷ್ಟಿಸುತ್ತವೆ. ಇದು ಮಕ್ಕಳಿಗೆ ಒಂದು ವಿಷಯವನ್ನು ಅರ್ಥ ಮಾಡಿಸಲು, ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸಲು ತಕ್ಷಣಕ್ಕೆ ಸಿಗುವ ಸಾಧನ ಎನ್ನಬಹುದು.


ಈಗ ಆಧುನಿಕ ಗ್ಯಾಜೆಟ್‌ಗಳು ಬಂದು ಕಥೆ ಹೇಳುವ ಅಭ್ಯಾಸ ಅಥವಾ ಅಜ್ಜಿಯರು ಹೇಳುವ ಕಥೆ ಕೇಳಿಸಿಕೊಳ್ಳುವುದು ಸ್ವಲ್ಪ ಕಡಿಮೆಯಾಗಿರಬಹುದು. ಆದರೆ ಅದು ಮತ್ತೊಂದು ರೂಪದಲ್ಲಿ ಮತ್ತೂ ಆಕರ್ಷಕವಾಗಿ, ಉಪಯುಕ್ತವಾಗಿ ಹೊರ ಬರುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದು ಹೇಗೆಂದರೆ ಶಿಕ್ಷಣದಲ್ಲಿ ಈ ಕಥಾರೂಪವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಕ್ಲಿಷ್ಟಕರ ವಿಷಯವನ್ನು ಅತ್ಯಂತ ಸರಳೀಕರಿಸಿ ಹೇಳಲು ಇದು ಸುಲಭ ಮಾಧ್ಯಮ.

ಆರಂಭದಲ್ಲಿ ಪುಟ್ಟ ಮಕ್ಕಳನ್ನು ರಂಜಿಸಲು, ಅವರಲ್ಲಿ ಏಕಾಗ್ರತೆ ಮೂಡಿಸಲು, ಒಂದು ಕಡೆ ಕೂರುವಂತೆ ಮಾಡಲು, ಮನಸ್ಸಿನಲ್ಲಿ ಮೂಡುವ ಅರ್ಥವಾಗದ ಪ್ರಶ್ನೆಗಳಿಗೆ ಒಂದು ಮೂರ್ತ ರೂಪ ನೀಡಲು, ಧ್ವನಿ, ಶಬ್ದ, ಭಾಷೆಯನ್ನು ಪರಿಚಯಿಸಲು, ಪುಸ್ತಕ, ಕಥೆಗಳ ಬಗ್ಗೆ ಒಲವು ಬೆಳೆಸಲು ಬಳಕೆಯಾಗುವ ಈ ಮಾಧ್ಯಮವನ್ನು ನಿಧಾನವಾಗಿ ಶಿಕ್ಷಣದ ಮೂಲ ಪಾಠಗಳನ್ನು ಅರ್ಥ ಮಾಡಿಸಲು ಬಳಸಬಹುದು. ಅದು ಅವರಲ್ಲಿ ಕಲಿಕೆಯ ಕುರಿತು ಆತ್ಮವಿಶ್ವಾಸವನ್ನು ಕೂಡ ಹೆಚ್ಚು ಮಾಡಬಲ್ಲದು; ಸೃಜನಶೀಲ ಅಲೋಚನೆಗಳನ್ನು ಮೂಡಿಸಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಆಲಿಸುವ ಕ್ರಿಯೆಯಲ್ಲಿ ಆಸಕ್ತಿ ಮೂಡಿಸುತ್ತದೆ.

ವ್ಯಾಕರಣ

ವ್ಯಾಕರಣ ಯಾವ ಭಾಷೆಯದೇ ಆಗಿರಲಿ, ಅದು ಕಬ್ಬಿಣದ ಕಡಲೆಯೇ, ಅದನ್ನು ಸುಲಭ ಮಾಡುವುದು ಹೇಗೆ? ಅಲ್ಲೂ ಸಹಾ ನಮ್ಮ ಕಥೆಗಳು ಸಹಾಯಕವಾಗುತ್ತವೆ. ಯಾವುದಾದರೂ ಒಂದು ಕಥೆ ಹೇಳಿದಾಗ ಮಕ್ಕಳು ಬಹಳ ಇಷ್ಟಪಟ್ಟು ಕುತೂಹಲದಿಂದ ಕೇಳುತ್ತಾರೆ. ಆ ಕಥೆಗಳ ಮೂಲಕ ವ್ಯಾಕರಣವನ್ನು ಕಲಿಸಬಹುದೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಅಲ್ಲವೇ?

ಕಲಿಯುವ ರೀತಿ ನೀರಸವಾಗದಿರಲು....

ಯಾವುದೇ ವಾಕ್ಯವನ್ನು ನೀವು ಅವರಿಗೆ ಕಲಿಸಬೇಕೆಂದಾಗ ಮಕ್ಕಳು ಬಾಯಿಪಾಠ ಮಾಡಿ ಕಲಿಯುತ್ತಾರೆ, ಆದರೆ ಕಲಿಯುವ ರೀತಿ ಮಾತ್ರ ನೀರಸವಾಗಿರುತ್ತದೆ. ಆದರೆ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಅವರಿಗೆ ಯಾವುದೇ ಬೇಸರವಿರುವುದಿಲ್ಲ. ಆ ವಾಕ್ಯಗಳು ಅವರ ಮನದಲ್ಲಿ ಮೂಡಿ ಬಿಡುತ್ತವೆ. ಭಾಷೆ ಬೇರೆಯದೇ ಆದರೂ ಅವರಿಗೆ ವಾಕ್ಯಗಳು ಪರಿಚಿತವಾಗಿ ಬಿಡುತ್ತವೆ. ಕಥೆ ಹೇಳುವ ಮೂಲಕ ಗ್ರಹಣ ಶಕ್ತಿ, ಶಬ್ದ ಸಂಪತ್ತು, ಮಾತನಾಡುವ ಕಲೆ, ಸೃಜನಶೀಲತೆ ಮತ್ತು ವ್ಯಾಕರಣವನ್ನೂ ಕಲಿಸಬಹುದು.

ವಾಕ್ಯಗಳ ರಚನೆ

ಮೊದಲಿಗೆ ವಾಕ್ಯಗಳ ರಚನೆ. ವಾಕ್ಯಗಳನ್ನು ಬರೆಯುವಾಗ ಪದಗಳ ಮಧ್ಯೆ ಒಂದು ಬೆರಳಿನಷ್ಟು ಸ್ಥಳ ಬಿಡಬೇಕು, ವಾಕ್ಯದ ಪ್ರಾರಂಭ ದೊಡ್ಡ ಅಕ್ಷರದಿಂದಲೇ ಆಗಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ, ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯ ಸೂಚಕ ಚಿಹ್ನೆ.. ಈ ರೀತಿ ಯಾವುದಾದರೂ ಚಿಹ್ನೆ ಬರಬೇಕೆಂದು ತಿಳಿಸಲಾಗುತ್ತದೆ. ಕಥೆಯ ವಾಕ್ಯಗಳಲ್ಲಿ ಬರುವ ದೊಡ್ಡ ಅಕ್ಷರಗಳ (ಕ್ಯಾಪಿಟಲ್ ಲೆಟರ್) ಕೆಳಗೆ ಗೆರೆಗಳನ್ನೂ ಮಕ್ಕಳಿಂದಲೇ ಹಾಕಿಸುವ ಮೂಲಕ ಮತ್ತೆ ಮತ್ತೆ ವಾಕ್ಯಗಳ ಮೊದಲು ದೊಡ್ಡ ಅಕ್ಷರ ಬರಬೇಕು ಮತ್ತು ವಾಕ್ಯದ ಕೊನೆಗೆ ಪೂರ್ಣ ವಿರಾಮ ಚಿಹ್ನೆ ಬರೆಯಬೇಕೆನ್ನುವ ವಿಷಯವನ್ನು ಒತ್ತಿ ಹೇಳಲಾಗುತ್ತದೆ. ಈ ವಿಷಯ ಮಕ್ಕಳ ಮನಸ್ಸಿನಲ್ಲಿ ಮುದ್ರಿತವಾಗಿ ಬಿಡುತ್ತದೆ.

ನಾಮಪದಗಳು

ಎರಡನೆಯದಾಗಿ ಪ್ರಾಣಿಗಳ ಕಥೆ, ಉದಾಹರಣೆಗೆ ತೋಳ- ಕುರಿಮರಿ ಕಥೆ ಹೇಳುವ ಮೂಲಕ ಕಥೆಯಲ್ಲಿ ಬರುವ ನಾಮಪದಗಳ ಪರಿಚಯವನ್ನು ಮಾಡಲಾಗುತ್ತದೆ. ಕಥೆಯಲ್ಲಿ ಬರುವ ನಾಮಪದಗಳ ಕೆಳಗೆ ಗೆರೆ ಹಾಕಿ ಗುರುತಿಸಲು ಹೇಳಲಾಗುತ್ತದೆ. ನಾಲ್ಕು ಕಾಲಂ ಮಾಡಿ ಜನರ ಹೆಸರು, ಸ್ಥಳಗಳು, ಪ್ರಾಣಿಗಳು ಮತ್ತು ವಸ್ತುಗಳನ್ನು ಬರೆಯಲು ಹೇಳಲಾಗುತ್ತದೆ. ಕಥೆಯನ್ನು ಮತ್ತೆ ಮತ್ತೆ ಕೇಳಿದ್ದರಿಂದ ಮಕ್ಕಳಿಗೆ ವಾಕ್ಯಗಳು ಪರಿಚಿತ ಮತ್ತು ನಾಮಪದಗಳ ಗುರುತಿಸುವಿಕೆ ಸುಲಭವಾಗುತ್ತದೆ.

ಇದೇ ರೀತಿಯಲ್ಲಿ ಪ್ರತಿಯೊಂದು ಕಥೆ ಹೇಳುವಾಗಲೂ ಒಂದೊಂದು ವ್ಯಾಕರಣ ವಿಷಯಗಳನ್ನು ತಿಳಿಸಿ ಕೊಡಲಾಗುತ್ತದೆ. ಕ್ರಿಯಾಪದ, ಸರ್ವನಾಮ, ವಚನಗಳು, ಕಾಲಗಳು... ಈ ರೀತಿ ಒಂದೊಂದನ್ನೇ ಮತ್ತೆ ಮತ್ತೆ ವಿವರವಾಗಿ ತಿಳಿಸಿದಾಗ ಕಥೆಯ ಜೊತೆ ವ್ಯಾಕರಣವೂ ಮನದಲ್ಲಿ ಮೂಡುತ್ತದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಪಾಠ ಹೇಳಿಕೊಡುವ ಆಶಾ ಇನ್ಫಿನೈಟ್ ಸಂಸ್ಥೆಯ ನಿರ್ದೇಶಕಿ ಕಾಂತಿ ಮೇಡಾ ಅವರು ‘ಮಕ್ಕಳಿಗೆ ವ್ಯಾಕರಣ ಬಹಳ ಮುಖ್ಯ, ಆದರೆ ಅವರು ಅದನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕೆಂದರೆ ಅವರಲ್ಲಿ ಆಸಕ್ತಿ ಮೂಡಿಸುವುದು ಬಹಳ ಮುಖ್ಯ. ಕಥೆಯ ಮೂಲಕ ಕಲಿಸುವುದು ನಿಜಕ್ಕೂ ಸುಲಭ, ಕಥೆಯ ಮೂಲಕ ಶಿಕ್ಷಣ ಬಹಳ ಪುರಾತನವಾದುದು ಮತ್ತು ಜನಪ್ರಿಯವೂ ಹೌದು. ಕಷ್ಟಕರವೆನಿಸಿಕೊಂಡ ವಿಷಯಗಳನ್ನು ಕಥೆಗಳ ಮೂಲಕ ತಿಳಿಸುವುದು ಸಾಧ್ಯವಿದೆ ಎನ್ನುವುದಕ್ಕೆ ಪಂಚತಂತ್ರ ಬಹಳ ಒಳ್ಳೆಯ ಉದಾಹರಣೆ’ ಎನ್ನುತ್ತಾರೆ .

‘ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆಂದರೆ ಅವರಿಗೆ ಕಥೆಗಳನ್ನು ಹೇಳಿ. ಅವರು ಇನ್ನೂ ಹೆಚ್ಚು ಬುದ್ಧಿವಂತರಾಗಬೇಕೆಂದರೆ ಇನ್ನೂ ಹೆಚ್ಚು ಹೆಚ್ಚು ಕಥೆಗಳನ್ನು ಹೇಳಿ’ ಎಂದು ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಅವರ ಹೇಳಿಕೆಯನ್ನು ಇಲ್ಲಿ ಪ್ರಸ್ತಾಪಿಸಬಹುದು. v

ಕಥೆಯಿಂದ ಭಾಷೆಯ ತಳಪಾಯ


ಇಡೀ ವಿಶ್ವದ ಹಲವಾರು ಸಂಸ್ಕೃತಿಗಳು ಈಗಲೂ ಕಥೆ ಹೇಳುವ ಕಲೆಯನ್ನು ಶಿಕ್ಷಣದ ಮುಖ್ಯ ಸಾಧನವನ್ನಾಗಿ ಬಳಸುತ್ತಿವೆ. ಮಕ್ಕಳಿಗೆ ಕಥೆ ಎಂದರೆ ಅದೇನೋ ಮೋಹ, ಅವರು ಕಥೆಯನ್ನು ಕೇಳಿದಾಗ ಅವರಲ್ಲಿ ಭಾಷೆಯ ಗಟ್ಟಿಯಾದ ತಳಪಾಯವೇ ಅಲ್ಲಿ ಮೂಡಿ ಬಿಡುತ್ತದೆ. ಹೇಳುವ ವಿಷಯವನ್ನು ಸುಮ್ಮನೆ ಹೇಳಿದಾಗ ಮೂಡುವ ಪರಿಣಾಮವೇ ಬೇರೆ, ಆದರೆ ಕಥೆಯ ಮೂಲಕ ಆಗುವ ಪರಿಣಾಮವೇ ಬೇರೆ. ಕಥೆ ಅವರಲ್ಲಿ ಭಾವನಾ ತರಂಗಗಳನ್ನು ಎಬ್ಬಿಸುತ್ತದೆ.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...