ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Monday 10 February 2020
ಐತಿಹಾಸಿಕ ಪ್ರಮುಖ ಘಟನೆಗಳ ಉಪಯುಕ್ತ ಸಂಪೂರ್ಣ ಮಾಹಿತಿ
Thursday 16 January 2020
ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ
ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ
ಮಕ್ಕಳ ಸಾಹಿತ್ಯವು ತಾಯಿಯ ಜೋಗುಳ ಹಾಡುಗಳಿಂದಲೇ ಆರಂಭವಾಗಿದೆ. ಜನಪದರ ಜೋಗುಳಗಳಲ್ಲಿ ಚಂದಮಾಮನ ಕುರಿತಾದ ಪ್ರಾಣಿ-ಪಕ್ಷಿಗಳ ಹಾಡುಗಳು ಸಾಕಷ್ಟಿವೆ. ಅವೆಲ್ಲವೂ ಅವರ ಪರಿಸರ ಪ್ರಜ್ಞೆಯನ್ನು ಸಾರುತ್ತದೆ. ಸಹಜವಾಗಿ ಮಕ್ಕಳು ಕುತೂಹಲದ ಕಣ್ಮಣಿಗಳು .ಅವರು ಪರಿಸರವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಹಾಗಾಗಿ ಅವರಿಗೆ ಪರಿಸರದ ಕುರಿತಾದ ಶಿಶುಪ್ರಾಸಗಳು ಹತ್ತಿರವಾಗುತ್ತವೆ.
ಇಂದಿನ ಆಧುನಿಕ ಮಕ್ಕಳ ಸಾಹಿತ್ಯದಲ್ಲು ಪರಿಸರದ ಕುರಿತಾದ ಶಿಶುಪ್ರಾಸಗಳು ಹೆಚ್ಚಾಗಿವೆ . ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ, ಜಿ.ಪಿ.ರಾಜರತ್ನಮ್ ಅವರ ನಾಗರಹಾವೆ ಹಾವೊಳು ಹೂವೆ, ಸಿದ್ದಯ್ಯ ಪುರಾಣಿಕರು, ಶಿವರಾಮಕಾರಂತರು, ನಾ ಡಿಸೋಜ, ಸಹ ಪರಿಸರ ಮತ್ತು ವಿಜ್ಞಾನದ ವಿಷಯ ವಸ್ತುವಿನ ಮಕ್ಕಳ ಸಾಹಿತ್ಯ ರಚನೆ ಮಾಡಿದ್ದಾರೆ.
ಇತ್ತೀಚಿನ ಮಕ್ಕಳ ಸಾಹಿತಿಗಳಲ್ಲಿ ಚಂದ್ರಕಾಂತ ಕರದಳ್ಳಿ ಅವರು, ಆನಂದ ಪಾಟೀಲರು, ಹ.ಸ ಬ್ಯಾಕೋಡ್, ಸಿ ಎಂ ಗೋವಿಂದರೆಡ್ಡಿ, ಗಣೇಶ್ ನಾಡರ್, ಸಹ ಪರಿಸರ ಕುರಿತಾದ ಪದ್ಯಗಳನ್ನೇ ಮಕ್ಕಳಿಗಾಗಿ ರಚಿಸಿದ್ದಾರೆ, ಹ.ಸ ಬ್ಯಾಕೋಡರ ನವೀನ ಸಾಕಿದ ನವಿಲು, ಚಂದ್ರಕಾಂತ ಕರದಳ್ಳಿ ಕಾಡು ಕನಸಿನ ಬೀಡಿಗೆ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಕುರಿಸುವ ಹೆಸರಿಸಬಹುದಾದ ಅತ್ಯುತ್ತಮ ಕೃತಿಗಳಾಗಿವೆ. ಅಲ್ಲದೆ ನಾಡಿನ ಬಹುತೇಕ ಮಕ್ಕಳ ಸಾಹಿತಿಗಳು ರಚಿಸಿರುವ ಕೃತಿಗಳು ಪರಿಸರದ ಕುರಿತ ಹೆಚ್ಚಿನ ವಸ್ತು ವಿಷಯವನ್ನು ಹೊಂದಿದ್ದನ್ನಾ ಗಮನಿಸಬಹುದು, ಪರಿಸರ ಮಾನವನಿಂದಾಗಿ ವಿನಾಶದ ಅಂಚಿಗೆ ಹೋಗುತ್ತಿರುವ ಹಿನ್ನೆಲೆಗಳಲ್ಲಿ ಪರಿಸರ ಕುರಿತಾದ ಮಕ್ಕಳ ಸಾಹಿತ್ಯ ವಿಫಲವಾಗಿ ರಚನೆಯಾಗುತ್ತಿರುವುದು ಪರಿಸರ ಪ್ರಜ್ಞೆ ಜಾಗೃತಿ ಮೂಡಿಸಲು ಆಶಾದಾಯಕವಾದ ಬೆಳವಣಿಗೆಯೇ ಸರಿ.
ಆದರೆ ಪರಿಸರ ಪ್ರಜ್ಞೆಯ ಸಾಹಿತ್ಯ ಕೃತಿಗಳನ್ನು ಓದಿದವರು ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಪರಿಸರವನ್ನು ಆರಾಧಿಸುವ ಮಾನವನ ಸಹಜಗುಣ ಮಕ್ಕಳಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಸುತ್ತಮುತ್ತಲಿನ ಪ್ರಾಣಿ ಪಕ್ಷಿ ಕೀಟ ಮರಗಿಡಬಳ್ಳಿ ಹೂವುಗಳ ಬಗ್ಗೆ ಕುತೂಹಲ, ಆಕರ್ಷಣೆ ಹೆಚ್ಚಾಗಿರುತ್ತದೆ. ಹಾಗಾಗಿ ಕವಿಗಳು ಮಕ್ಕಳ ಮನಸ್ಸನ್ನು ಮುಟ್ಟಲು ಪರಿಸರದ ಕುರಿತಾದ ಕವಿತೆಗಳನ್ನು ಹೆಚ್ಚಾಗಿ ರಚಿಸಿದ್ದಾರೆ. ಮಕ್ಕಳು ಅವುಗಳನ್ನು ಓದುವ ಮೂಲಕ ,ಆಲಿಸು ಮೂಲಕ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವುದಲ್ಲದೆ ಸುತ್ತಲಿನ ಪರಿಸರದ ಜ್ಞಾನ ತಿಳಿದುಕೊಳ್ಳುವರು.
ಇಂದಿನ ಹೊಸ ತಲೆಮಾರಿನ ಮಕ್ಕಳ ಸಾಹಿತಿಗಳು ತಮ್ಮ ಸಾಹಿತ್ಯಕೃತಿಗಳಲ್ಲಿ ಮಕ್ಕಳ ಕಾದಂಬರಿಗಳಲ್ಲಿ ಕಥೆಗಳಲ್ಲಿ ಯಥೇಚ್ಛವಾಗಿ ಪರಿಸರದ ಕುರಿತು ಬರೆದಿದ್ದಾರೆ,. ಇತ್ತೀಚಿಗೆ ನಮ್ಮ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಕೃತಿ ಕಾಡು ಕನಸಿನ ಬೀಡಿಗೆ ಒಂದು ಉತ್ತಮ ಪರಿಸರ ಕಾದಂಬರಿ ಆಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಈ ಕೃತಿಗೆ ಇತ್ತೀಚಿಗೆ ದೊರಕಿದೆ. ಪೂರ್ಣಚಂದ್ರ ತೇಜಸ್ವಿ ಅವರು ಮಕ್ಕಳ ಸಾಹಿತ್ಯಕ್ಕೆ ಪರಿಸರದ ಕುರಿತಾದ ಉತ್ತಮ ಕೃತಿಗಳನ್ನು ನೀಡಿದ್ದಾರೆ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚನೆ ಸಾಕಷ್ಟು ಬೆಳೆದಿದ್ದು ಕುವೆಂಪು ಅವರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತರು ಸಹ ಮಕ್ಕಳ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿವರಾಮಕಾರಂತರು, ತೇಜಸ್ವಿ,ದೊಡ್ಡರಂಗೇಗೌಡ ಎಚ್.ಎಸ, ವೆಂಕಟೇಶಮೂರ್ತಿ, ನಾ ಡಿಸೋಜ , ಬೋಳುವಾರು ಮಹಮದ ಕುಂಇ, ಮುಂತಾದವರು ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರೆಲ್ಲರೂ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ಸಾಹಿತ್ಯ ಕೃಷಿ ಮಾಡಿದ್ದಾರೆ.
ನಮ್ಮ ರಾಯಚೂರಿನ ಮಕ್ಕಳ ಸಾಹಿತಿಗಳೂ ಸಹಸ್ರ ಪ್ರಜ್ಞೆಯನ್ನು ತಮ್ಮ ಕೃತಿಯಲ್ಲಿ ಜಾಗೃತಗೊಳಿಸಿದ್ದಾರೆ.
ರವಿರಾಜ್ ಸಾಗರ್.
Saturday 4 January 2020
ಬರವಣಿಗೆಯ ಹೊತ್ತು ಗೊತ್ತು.
ಸದಾ ಶಿವ ಹೊರಟೂರು
ಬರವಣಿಗೆಯ ಹೊತ್ತು-ಗೊತ್ತುಗಳು..
ತುಟಿ ಚಟಕ್ಕೆ ಪಟ್ ನೇ ಸಿಗರೇಟ್ ಹಚ್ಚಿ ಬೂದಿ ಮಾಡುತ್ತೇವಲ್ಲ ಆಗಲ್ಲ ಸಾಹಿತ್ಯದ ಬರವಣಿಗೆ. ಅಂಗಡಿ ವ್ಯಾಪಾರದ ನಂತರ ಕೂಡಿ ಕಳೆದು ಕೊಡುವ ರಶೀದಿ ಚೀಟಿಯೂ ಅಲ್ಲ. ಅದರಲ್ಲೂ ಕವನಗಳನ್ನು ಹೀಗೆ ದಿಢೀರನೆ ಬರೆದುಕೊಂಡು ಕೂರಲು ಸಾಧ್ಯವಾಗುತ್ತದಾ? ಬಹುಶಃ ಇಲ್ಲ, ಸಾಧ್ಯವೂ ಅಲ್ಲ. ಯಾಕೆ ಜಯಂತ್ ಕಾಯ್ಕಿಣಿಯವರ ಎಲ್ಲಾ ಹಾಡುಗಳು ಹಿಟ್ ಆಗಲಿಲ್ಲ. ಒಬ್ಬ ನಿರ್ದೇಶಕ ಒಂದು ಗೆಲುವು ಕಂಡ ನಂತರ ಮತ್ತೆ ಮತ್ತೆ ತೆಗೆದ ಸಿನೆಮಾಗಳು ಗೆಲ್ಲುವುದಿಲ್ಲ ಯಾಕೆ? ಯಾಕೆ ಯೋಗರಾಜ್ ಭಟ್ ರ ಎಲ್ಲಾ ಸಿನೆಮಾಗಳು ನೂರುದಿನ ಓಡಲಿಲ್ಲ. ಬರೆಯುವ ಹುಕಿ ಮೂಡಿದಾಗ ನಾವೇ ನಾಲ್ಕಾರು ಸಾಲುಗಳನ್ನು ಗೀಚಿಕೊಂಡು ಅದನ್ನು ನಾಳೆಯೊ, ನಾಡಿದ್ದೊ ಬರೆಯಲು ಕೂತರೆ ಅದೇ ರೀತಿ ಯಾಕೆ ಬರೆಯಲಾಗುವುದಿಲ್ಲ? ಯಾಕೆ ಎಲ್ಲರೂ ಕವಿಗಳಾಗಿಲ್ಲ? ಹೌದು, ಇಲ್ಲೆಲ್ಲಾ ನಮಗೇ ಗೊತ್ತಿಲ್ಲದ ಯಾವುದೊ ವಿಚಾರವೊಂದು ಕೆಲಸ ಮಾಡಿರಬೇಕು ಅಲ್ಲವೇ?
ಗೋಪಾಲಕೃಷ್ಣ ಅಡಿಗರು ಒಮ್ಮೆ ತಮ್ಮ ಸ್ನೇಹಿತರ ವಲಯದಲ್ಲಿ ತಮ್ಮ ಕವನ ರಚನೆಯ ವಿಷಯದಲ್ಲಿ ಕಳವಳಗೊಂಡಿದ್ದರು. ಯಾಕೊ ಎರಡ್ಮೂರು ತಿಂಗಳಿನಿಂದ ಕವನಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಅನ್ನುತ್ತಾ ಗಾಬರಿಗೊಂಡಿದ್ದರು. ಸೃಜನ್ಮಾಕತೆ ಮುಗಿದು ಹೊಯಿತೆ ಅಂತ ಕಳವಳಿಸಿದ್ದರು. ತದನಂತರವೂ ಅವರಿಂದ ಅದ್ಬುತ ಕವಿತೆಗಳು ಹೊರಬಂದವು. ಆದರೆ ಆ ಎರಡ್ಮೂರು ತಿಂಗಳ ಅವಧಿಯಲ್ಲಿ ಅವರಿಗ್ಯಾಕೆ ಸಾಧ್ಯವಾಗಲಿಲ್ಲ? ಕುವೆಂಪು ಅವರನ್ನು ಕೂಡ ಇಂತದ್ದೆ ಸಮಸ್ಯೆ ಕಾಡಿದೆ. ಶ್ರೀ ರಾಮಾಯಣ ದರ್ಶನಂ ಬರೆಯುವಾಗ ಮಧ್ಯೆ ನಾಲ್ಕು ತಿಂಗಳು ಏನನ್ನೂ ಕೂಡ ಬರೆಯಲಾಗದ ಕೂತು ಬಿಟ್ಟಿದ್ದರು. ಹೇಗೆ ಆರಂಭಿಸಬೇಕೆಂದು ಅವರಿಗೆ ಹೊಳೆಯುತ್ತಿರಲಿಲ್ಲ. ಒಮ್ಮೆ ಪುಟ್ಟ ತೇಜಸ್ವಿ ಮನೆಯಲ್ಲಿ ಅಳುತ್ತಿರುವಾಗ ಅವನನ್ನು ಸಂತೈಸಲು ಹುಟ್ಟಿಕೊಂಡ ಒಂದು ಸಾಲು 'ಯಾಕೆ ಅಳುವೇ ತೇಜಸ್ವಿ..' ಅನ್ನುವ ಸಾಲೇ ಮತ್ತೆ 'ರಾಮಾಯಣ ದರ್ಶನಂ' ಅನ್ನು ಮುಂದುವರೆಸಲು ಸಾಧ್ಯವಾಗಿಸಿತು. ಶಿವರಾಮ ಕಾರಂತರು ಒಂದು ಕಾದಂಬರಿಯನ್ನು ನಿಲ್ಲಿಸಿ ಮತ್ತೆ ಎಷ್ಟೊ ವರ್ಷಗಳ ನಂತರ ಮುಂದುವರೆಸಿ ಮುಗಿಸಿದರು.
ಯಾಕೆ ಎಲ್ಲರಿಗೂ, ಎಲ್ಲಾ ಕಾಲದಲ್ಲೂ ಒಂದೇ ರೀತಿ ಬರೆಯಲು ಸಾಧ್ಯವಾಗುವುದಿಲ್ಲ? ಅದಕ್ಕೆ ಕಾರಣಗಳಿವೆ. ರಚನೆಗೆ ಬೇಕಾದ ಪ್ರತಿಭೆಯೂ ಎಲ್ಲಾ ಕಾಲದಲ್ಲೂ ಕೆಲಸ ಮಾಡಬೇಕಲ್ಲ!. ತೀನಂಶ್ರೀ ಅದನ್ನು 'ಹೊಳಹು' ಅಂತ ಕರೆಯುತ್ತಾರೆ. ಒಂದು ದಂತಕಥೆಯು ಹೇಳುವಂತೆ, ಕುಮಾರವ್ಯಾಸ ನಿತ್ಯ ನದಿಯಲ್ಲಿ ಮಿಂದು ಬಂದ ಒದ್ದೆ ಬಟ್ಟೆಯಲ್ಲೇ ಬರವಣಿಗೆಗೆ ಕೂರುತ್ತಿದ್ದನಂತೆ. ಬಟ್ಟೆ ಒಣಗುವ ಮೊದಲೇ ಅಂದಿನದ್ದನ್ನು ಬರೆದು ಮುಗಿಸುತ್ತಿದ್ದನಂತೆ. ಈ ಹೊಳಹು ಎಂತಹ ಸಾಮಾನ್ಯನನ್ನು ಅಸಾಮಾನ್ಯನ್ನಾಗಿ ಮಾಡುತ್ತದೆ. ಆದರೆ ಅದನ್ನು ಹಿಡಿದಿಟ್ಟು ಕೊಳ್ಳುವ ಕಲೆ ನಮಗಿರಬೇಕು. ಅದನ್ನು 'ಕಾವ್ಯಾತ್ಮಕತೆ' ಅನ್ನುತ್ತಾರೆ. ಬರೆದವನು ಕವಿ ಅಥವಾ ಸಾಹಿತಿ ಅನ್ನಿಸಿಕೊಳ್ಳುತ್ತಾನೆ. ಇದನ್ನೇ ಇಂಗ್ಲಿಷ ಸಾಹಿತ್ಯದಲ್ಲಿ ಸ್ಫೂರ್ತಿ ಅಂತ ಕರೆಯಲಾಗಿದೆ. ಅದು ಯಾವಾಗ್ಲೂ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗದು. ಕುಮಾರವ್ಯಾಸ ಕೇವಲ ಹತ್ತು ಪರ್ವಗಳನ್ನು ಮಾತ್ರ ಬರೆದು ನಿಲ್ಲಿಸಿದಕ್ಕೆ ಕೆಲವರು ಇದೇ ಕಾರಣವನ್ನು ನೀಡುತ್ತಾರೆ. ಅಲ್ಲಿಗೆ ಅವರ ಬರೆಯುವ ಪ್ರತಿಭೆ, ಹೊಳಹು ನಿಂತು ಹೊಯಿತು ಅನ್ನುವ ವಾದವೂ ಇದೆ.
ಬೇಂದ್ರೆಯವರ ಈ ಕವನ ನೋಡಿ
“ಎಲ್ಲೆಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವೀ
ಹಕ್ಕಿ-ಗಾಳಿ ಸಾಗಿದೆ”
’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ. ಅವರ ಭೃಂಗದ ಬೆನ್ನೇರಿ ಬಂತು ಕವನವನ್ನು ಓದಿ ನೋಡಿ. ಕವಿಯ ಕಾವ್ಯರಚನೆಯ ಸೊಬಗನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತದೆ.
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ..."
ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರತಿಭೆ ಹೊಂದಿರುತ್ತಾನೆ. ಯಾರು ಅದನ್ನು ಮತ್ತೆ- ಮತ್ತೆ ದುಡಿಸಿಕೊಳ್ಳುತ್ತಾರೊ ಆತ ಅದ್ಬುತ ಕವಿಯಾಗಿತ್ತಾನೆ. ಪದಗಳು ಸಂತೆಯಲ್ಲಿ ಸಿಗುವುದಿಲ್ಲ, ಓದಿನಲ್ಲಿ ಸಿಗುತ್ತವೆ, ಜನರ ಮಧ್ಯೆಯ ಒಡನಾಟದಲ್ಲಿ ಸಿಗುತ್ತವೆ. ಮನುಷ್ಯ ಸದಾ ತಾನು ಕಂಡದ್ದನ್ನು ಹೊರ ಹಾಕುವ ಪ್ರಯತ್ನದಲ್ಲಿರುತ್ತಾನೆ. ಆದರೆ ಕವಿಯಾದವನು ಮಾತ್ರ ಅದನ್ನು ಸಾಹಿತ್ಯದ ಮೂಲಕ ಆಚೆ ಹಾಕುತ್ತಾನೆ. ಕವಿಯೊಬ್ಬ ನಿರಾಳನಾಗುವುದು ಬರೆದು ಕೂತ ಮೇಲೆಯೇ!
ಕಾವ್ಯಕ್ಕೊಂದು ಹೊಳಹು ನುಗ್ಗಿ ಬರುವಂತಿರವುದನ್ನೇ ಮಧುರ ಚೆನ್ನರು ಈ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೇನೊ ಅನಿಸುವಂತೆ ಬರೆದಿದ್ದಾರೆ ನೋಡಿ. ಪ್ರತಿಯೊಬ್ಬ ಕವಿಯೂ ಇಂತದ್ದೆ ತುಡಿತಕ್ಕೆ ಕಾಯುತ್ತಿರುತ್ತಾನೆ.
ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು
ಬಂತೆಂದರೂ ಇದ್ದುದಿದ್ದೇ ಇತ್ತು |
ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ
ಇದ್ದದ್ದೆ ತುಂಬಿ ತುಳುತುಳುಕುತಿತ್ತು ||
ಬರೆಯುವುದನ್ನೇ ಹಗುರಾಗುವುದು ಎಂದೇ ನಾನು ಭಾವಿಸುತ್ತೇನೆ. ನಿಜ ಹೇಳಬೇಕಂದರೆ ಕವಿಯಾದವನು ಲಕ್ಕಿಯೇ ಸರಿ. ಪಡೆದ ಅನುಭವ ಎಲ್ಲವನ್ನೂ ಆತ ಅಕ್ಷರಕ್ಕಿಳಿಸಿ ಕೂತು ಬಿಡುತ್ತಾನೆ. ಅವನು ಆಗ ನಿರಾಳ. ಈಗೀಗ ಬರೆಯುವವರೇ ಹೆಚ್ಚು. ಬರೆದವರಲ್ಲ ಕವಿಗಳಲ್ಲ. ಅಷ್ಟೊಂದು ಬರೆದ ಬೇಂದ್ರೆ ಕೂಡ ನಾನು ಕವಿಯಲ್ಲ ಕಿವಿ ಅಂದಿದ್ದಾರೆ. ಕವಿಯಾಗುವುದು ಒಂದು ತಪಸ್ಸೇ! ಕಾವ್ಯ ಕಟ್ಟುವುದು ಒಂದು ಧ್ಯಾನ. ಕವಿ ಕೆ.ಎಸ್ ನರಸಿಂಹಸ್ವಾಮಿ ಹೀಗೆನ್ನುತ್ತಾರೆ. ಅನಿಸಿದನ್ನು ಒಮ್ಮೆಲೆ ಬರೆದುಬಿಡಬೇಡಿ. ವಾರಗಟ್ಟಲೇ ಅದನ್ನು ಮನಸ್ಸಿನಲ್ಲಿ ನೆನೆಹಾಕಿ.. ಆ ವಿಚಾರದ ಸುತ್ತಾ ಏನೇನು ಹೊಳೆಯಬಹುದು ಎಂಬುದನ್ನು ಗುರುತಿಸಿಕೊಳ್ಳಿ. ಒಮ್ಮೆ ಕೂತು ಬರೆಯಿರಿ. ಬರೆದಿದ್ದನ್ನು ಮತ್ತೆ ಮತ್ತೆ ಓದಿ, ತಿದ್ದಿ. ತೃಪ್ತಿಯಾಯಿತು ಅನಿಸಿದಾಗ ಅದನ್ನು ಪ್ರಕಟಿಸಿ ಅನ್ನುತ್ತಾರೆ. ಕಾವ್ಯಕಲೆ ಎಂಬುದು ಸುಮ್ನೆ ಅಲ್ಲ. ಅರವಿಂದ ಮಾಲಗತ್ತಿ 'ಎಷ್ಟೊ ಬಾರಿ ಕವಿ ನೆಲದ ಮೇಲಿರುವುದಿಲ್ಲ' ಅನ್ನುವ ಒಂದು ಮಾತನ್ನು ಹೇಳುತ್ತಾರೆ. ಕವಿ ಎಲ್ಲವನ್ನೂ ಮೀರಿದವನು ಮತ್ತು ಮಿತಿಯಲ್ಲೇ ಬದುಕುವವನು.
ಸದಾಶಿವ್ ಸೊರಟೂರು
Sunday 29 December 2019
ಫಲವಂತಿಕೆ ಆಚರಣೆ ಮತ್ತು ಶಿವಲಿಂಗ ರಹಸ್ಯ
ಹರ್ಷಕುಮಾರ್ ಕುಗ್ವೆ :
ನಮ್ಮ ಸಾಗರದ ಬಳಿಯ ಆನಂದಪುರದ ಕೆರೆಯ ಪಕ್ಕದಲ್ಲಿ ಹೈವೇ ಪಕ್ಕ ಅಗೆತ ಮಾಡುವಾಗ ಈ ಫಲವಂತಿಕೆ ಶಿಲ್ಪಗಳು ನೆನ್ನೆ ಸಿಕ್ಕಿವೆಯಂತೆ.. ಇದೇ ರೀತಿಯ ಶಿಲಾರಚನೆಗಳು ಸಾಗರದಿಂದ 25 ಕಿಲೋಮೀಟರ್ ದೂರದ ಉಳವಿ ಕೆರೆಯ ಮೇಲೂ ಇವೆ. ದ್ರಾವಿಡ ಹಾಗೂ ದ್ರಾವಿಡ ಪೂರ್ವ ಧಾರ್ಮಿಕ ಆಚರಣೆಯಾದ ಫಲವಂತಿಕೆ ಆಚರಣೆಗಳು ಈ ಭಾಗದಲ್ಲಿ ಚಾಲ್ತಿಯಿದ್ದ ಕುರಿತು ಇವು ತಿಳಿಸುತ್ತವೆ.
ಈ ಕುರಿತು ಹಿಂದೆ ನಾನು ಬರೆದಿದ್ದ ಬರೆಹವನ್ನು ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಶಿವಮೊಗ್ಗ ಜಿಲ್ಲೆಯ ಉಳವಿಯ (ನಮ್ಮೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ) ಕೆರೆ ಏರಿಯೊಂದರ ಮೇಲೆ ಬೈಕಿನಲ್ಲಿ ಹೋಗುತ್ತಿರುವಾಗ ನನ್ನನ್ನು ಗಕ್ಕನೆ ನಿಲ್ಲಿಸುವಂತೆ ಮಾಡಿದ್ದು ಈ ಕಲ್ಲಿನ ಕೆತ್ತನೆಗಳು...
ಇದನ್ನು ನೋಡಿ ಕೆಲವರು ನಾಚಿಕೆ ಪಟ್ಟುಕೊಳ್ಳಬಹುದು, ಲೇವಡಿ ಮಾಡಬಹುದು ಅಥವಾ ಇಂತಹ erotic ಲೈಂಗಿಕ ಶಿಲ್ಪಗಳ ಅರ್ಥ ಏನು ಎಂದೂ ತಲೆ ಕೆಡಿಸಿಕೊಳ್ಳಬಹುದು.
ಗಂಭೀರವಾಗಿ ಅವಲೋಕಿಸಿದರೆ ಈ ದೇಶದ ಮೂಲ ಸಂಸ್ಕೃತಿ ಮತ್ತು ಮೂಲ ಧರ್ಮ ಇವುಗಳಲ್ಲಿದೆ.
ಪುರುಷ ತನ್ನ ಲಿಂಗವನ್ನು ಹಿಡಿದುಕೊಂಡಿರುವ ಮತ್ತು ಮಹಿಳೆ ಅದನ್ನು ಹೊತ್ತುಕೊಂಡಿರುವ ಒಂದು ಶಿಲ್ಪ, ಹಾಗೂ ಮಹಿಳೆ ತನ್ನ ಯೋನಿಯನ್ನು ಹಿಡಿದುಕೊಂಡಿರುವ ಮತ್ತೊಂದು ಶಿಲ್ಪ ಸೂಚಿಸುವುದು ದ್ರಾವಿಡ ಮತ್ತು ದ್ರಾವಿಡ ಪೂರ್ವ ಸಮುದಾಯಗಳ ಫಲವಂತಿಕೆಯ ಆಚರಣೆ (fertility cult) ಯನ್ನು...
ಜಗತ್ತಿನಲ್ಲಿ ಇಂದು ಇರುವ ವೈದಿಕ, ಇಸ್ಲಾಂ, ಪಾರ್ಸಿ, ಕ್ರೈಸ್ತ ಮೊದಲಾದ ಯಾವುದೇ ಮತಧರ್ಮ ಹುಟ್ಟುವುದಕ್ಕೆ ಮೊದಲು ವ್ಯಾಪಕವಾಗಿ ಇದ್ದ ಆಚರಣೆ ಇದು. ಭಾರತದ ಮಟ್ಟಿಗೆ ಆರ್ಯರು ಇಲ್ಲಿಗೆ ಕಾಲಿಡುವ ಮುನ್ನ ದ್ರಾವಿಡ ಸಮುದಾಯಗಳು ಎಲ್ಲೆಡೆ ಪಾಲಿಸುತ್ತಿದ್ದ "ಧರ್ಮ" ಇದು.
ಇದೇ ಆಚರಣೆಗಳು ಮುಂದೆ ವ್ಯವಸ್ಥಿತ ರೂಪ ಪಡೆದು ತಾಂತ್ರಿಕ ಪಂಥದ ಏಳಿಗೆಗೆ ಅನುವು ಮಾಡಿಕೊಟ್ಟವು ಎಂದು ಮಾನವಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಶೋಧಿಸಿದ್ದಾರೆ.
ಕರ್ನಾಟಕದಲ್ಲಿಯೇ ಅನೇಕ ಕಡೆಗಳಲ್ಲಿ ಲಜ್ಜಾ ಗೌರಿಯ ವಿಗ್ರಹಗಳು ದೊರೆತಿವೆ. ಲಜ್ಜಾಗೌರಿಯ ಮುಖವು ಅರಳಿದ ಕಮಲವನ್ನು ಹೊಂದಿದ್ದು ಯೋನಿ ಮೇಲ್ಮುಖವಾಗಿರುತ್ತದೆ... ಇದೂ ಸಹ ಫಲವಂತಿಕೆ ಪಂಥದ ಪೂಜಾ ಸಾಧನವೇ ಆಗಿದೆ.
ಈ ಕೆತ್ತನೆಗಳಲ್ಲಿನ ಮೂಲ ತಿಳುವಳಿಕೆಯ ಸಾರ ಇಷ್ಟೇ. ಸಕಲ ಜೀವಜಂತುಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸ್ತ್ರೀ ಪುರುಷ ಜನನಾಂಗಗಳೇ ಪೂಜನೀಯವಾದವು.
ಮುಂದೆ ಶೈವ ಪಂಥವು ಸ್ವೀಕರಿಸಿದ ಲಿಂಗವೂ ಸ್ತ್ರೀ-ಪುರುಷ ಸಮಾಗಮ ತತ್ವವನ್ನೇ ಸಾಂಕೇತಿಕಗೊಳಿಸಿಕೊಂಡದ್ದು. ಈ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಲಕ್ಷ್ಮೀಪತಿ ಕೋಲಾರ ಅವರು ತಮ್ಮ 'ಲಾಗಾಯ್ತಿನ ಲಿಂಗ ಪುರಾಣ' ಎಂಬ ಲೇಖನದಲ್ಲಿ, "ವೇದದಲ್ಲೆಲ್ಲೂ "ಶಿವ' ಎಂಬ ಪದದ ಪ್ರಯೋಗವೂ ಆಗಿಲ್ಲ ಎಂಬುದನ್ನು ಶಂ.ಭಾ. ಜೋಶಿಯವರು ತಮ್ಮ 'ಶಿವ ರಹಸ್ಯ' ದಲ್ಲಿ ದಾಖಲಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಮೊದಲು ಶಿವ ಎಂಬ ನಾಮದ ಪ್ರಯೋಗವಾಗಿರುವುದು ಶ್ವೇತಾಶ್ವತೋಪನಿಷತ್ತಿನಲ್ಲೇ! ದ್ರಾವಿಡ ಭಾಷಾ ವಿಜ್ಞಾನಿಗಳು ಈಗಾಗಲೇ ದೃಢಪಡಿಸಿರುವಂತೆ 'ಶಿವ' ಮತ್ತು 'ಲಿಂಗ' ಶಬ್ದಗಳು ಸಂಸ್ಕೃತ ಭಾಷೆಯದ್ದಲ್ಲವೇ ಅಲ್ಲ....." ಎನ್ನುತ್ತಾರೆ. ಲಿಂಗ ಎಂಬ ಪದವು ಕೋಲಾ ಮುಂಡಾ ಬುಡಕಟ್ಟು ಜನರಿಂದ ಪಡೆದುಕೊಂಡಿದ್ದೆಂದೂ ಈ ಕುರಿತ ಅಧ್ಯಯನಗಳು ತಿಳಿಸಿವೆ.
ದ್ವೈತ ಹಾಗೂ ಅದ್ವೈತ ಚಿಂತನೆಗಳ ಮೂಲವೂ ಸಹ ಈ ಸ್ತ್ರೀ ಪುರುಷ ಸಂಯೋಗದ ಫಲವಂತಿಕೆ ಪಂಥದಲ್ಲಿಯೇ ಇತ್ತು ಎನ್ನಲಾಗುತ್ತದೆ. ಹೆಣ್ಣು ಗಂಡಿನ ಮಿಲನದ ಸರಳ ಸುಂದರ ಅದ್ವೈತ ತತ್ವವನ್ನು ಮುಂದೆ ಎಂಟನೇ ಶತಮಾನದಲ್ಲಿ ಜನವಿರೊಧಿ ಸಿದ್ಧಾಂತವಾಗಿಸಲಾಯಿತು. ಈ ಬಗ್ಗೆ ಲಕ್ಷ್ಮೀಪತಿ ಕೋಲಾರ ಅವರು ಅದೇ ಲೇಖನದಲ್ಲಿ ಹೀಗ ಬರೆಯುತ್ತಾರೆ, "ಹೆಣ್ಣು- ಗಂಡುಗಳು ದ್ವೈತವಾಗಿದ್ದು, ಅವರ ಸಮಾಗಮದಿಂಸ ಸೃಷ್ಟಿಕ್ರಿಯೆ ನಡೆದು, ಅಲ್ಲಿ ಹುಟ್ಟುವ ಹೊಸ ಜೀವ ಅವರಿಂದ ಬೇರೆಯಲ್ಲವಾಗಿ ಅದು ಅದ್ವೈತ. ಇದು ಜೇನು ಕುರುಬರ ಅಣಪೆ ನೂರಾಳೊಡೆಯನ ಪರಿಕಲ್ಪನೆಯ ಹಿಂದಿರುವ ಆದಿಮವಾದ, ಸರಳ ಅದ್ವೈತ ತತ್ವ. ಜೇನು ಕುರುಬರಲ್ಲಿನ ಈ ಸೃಷ್ಟಿ ಕ್ರಿಯೆಯನ್ನಾಧರಿಸಿದ ಅದ್ವೈತ ತತ್ವವನ್ನೇ ವೈದಿಕ ಪೂರ್ವದ ಅಥವ ದ್ರಾವಿಡರ ತಂತ್ರ ಪಂಥವು ತಂತ್ರಾಕೃತಿಗಳ ಮೂಲಕವೇ ಹಿಡಿದಿಟ್ಟಿತು. ಉದಾಹರಣೆಗೆ ಸರಳವಾಗಿ ಹೀಗೆ ವಿವರಿಸಬಹುದು: ಮೇಲ್ಮುಖವಾದ ತ್ರಿಕೋನವು ಪುರುಷ ಲಿಂಗದ ಸಂಕೇತವಾದರೆ ಕೆಳಮುಖವಾದ ತ್ರಿಕೋನವು ಸ್ತ್ರೀಲಿಂಗದ ಸಂಕೇತವೆಂದುಕೊಳ್ಳೋಣ. ಹೆಣ್ಣು ಗಂಡುಗಳು ಪ್ರತ್ಯೇಕವಾಗಿರುವವರೆಗೂ ಈ ತ್ರಿಕೋನಗಳು ಬೇರೆ ಬೇರೆಯೇ ಆಗಿ ದ್ವೈತವನ್ನು ಹೇಳುತ್ತವೆ. ಹೆಣ್ಣು- ಗಂಡುಗಳು ಸಮಾಗಮಗೊಂಡಾಗ ಎರಡು ತ್ರಿಕೋನಗಳೂ ಹೀಗೆ ಬೆಳೆದುಕೊಂಡು ಆರು ತ್ರಿಕೋನಗಳನ್ನು ಸೃಷ್ಟಿಸುತ್ತವೆ. ಈ ಹೊಸದಾದ ಆರು ತ್ರಿಕೋನಗಳೂ ಮೂಲದ ಹೆಣ್ಣು ಗಂಡುಗಳ ಎರಡು ತ್ರಿಕೋನಗಳಿಂದ ಹೊರತಾದುದಲ್ಲವಾದ್ದರಿಂದ ಅದು ಅದ್ವೈತವನ್ನು ಸಾರುತ್ತದೆ. ಮನುಷ್ಯ ಮೂರು ಸಂದರ್ಭಗಳಲ್ಲಿ ತುರಿಯಾವಸ್ಥೆಯನ್ನು (orgasm) ತಲುಪುತ್ತಾನೆಂದು ಶೈವ ತತ್ವ ಹೇಳುತ್ತದೆ. ಅದು ಹೆಣ್ಣು ಗಂಡಿನ ಸಮಾಗಮ, ಸಂಗೀತ ಹಾಗೂ ನೃತ್ಯದ ತಲ್ಲೀನತೆಗಳಲ್ಲಿ. ಹಾಗಾಗಿ ಇದೇ ತಂತ್ರಾಕೃತಿಯನ್ನು
ಕೊಂಚ ಬದಲಿಸಿ ಢಮರುಗವನ್ನು ಸೃಷ್ಟಿಸಿ ಹೆಣ್ಣು ತ್ರಿಕೋನದಿಂದ ಶಕ್ತಿ ಮತ್ತು ಪುರುಷ ತ್ರಿಕೋನದಿಂದ ಶಿವನನ್ನು ಇರಿಸಿ ಶಿವ ಶಕ್ತಿಯರ ಸಮಾಗಮದಲ್ಲಿ ನಾದೋತ್ಪತ್ತಿಯ ತತ್ವವನ್ನು ವಿವರಿಸುತ್ತದೆ. ಇದು ದ್ರಾವಿಡ ಪೂರ್ವ ಬುಡಕಟ್ಟುಗಳ phallic cult ನಿಂದ ಎತ್ತಿ ವಿವರಿಸಿದ diagrammatic ಅದ್ವೈತವಾಗಿದೆ. ಈ ಮೂಲ ಅದ್ವೈತವನ್ನು ಸೃಷ್ಟಿಶೀಲ ನೆಲೆಯಿಂದ ಪಲ್ಲಟಗೊಳಿಸಿ ಪರ- ಬ್ರಹ್ಮ- ಆತ್ಮ- ಪರಮಾತ್ಮದ ವೈದಿಕೋಪನಿಷತ್ತಿನ ವಂಚ ಜಾಲದಲ್ಲಿ ಸಂಕೀರ್ಣಗೊಳಿಸಿ ಜನಸಾಮಾನ್ಯರಿಗೆ ಎಟುಕದಂತೆ ಜಟಿಲ ತತ್ವವನ್ನಾಗಿಸಿದ್ದೊಂದು ಪಿತೂರಿಯೂ ಆಗಿದೆ. ಈ ವಂಚಕ ಚರಿತ್ರೆಯ ವಿವರಣೆಯೂ ಮತ್ತೊಂದು ಅಧ್ಯಾಯವಾಗಬಲ್ಲದು".
ಇಂದಿನ ಕಾಲದಲ್ಲಿ ಹಾಸ್ಯ ಎನಿಸುವ, ವಿಚಿತ್ರ ಎನಿಸುವ ಜನಪದರ ಎಷ್ಟೋ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಇತಿಹಾಸದ ಸತ್ಯಗಳು ಹುದುಗಿ ಹೋಗಿರುತ್ತವೆ. ಅವುಗಳನ್ನು ಎತ್ತಿ ತೆಗೆದು ಜನರಿಗೆ ವಿವರಿಸುವ ಜರೂರು ಇಂದು ಎದುರಾಗಿದೆ.. ಬದುಕಿನ ಪ್ರತಿ ಕ್ಷಣವೂ ವೈದಿಕಗೊಳ್ಳುತ್ತಿರುವ ಕೇಡುಗಾಲದಲ್ಲಿರುವ ನಾವು ಸಂಸ್ಕೃತಿಯ ಮಹಾ ಮರೆವಿನಿಂದ ಹೊರಬರಲೇಬೇಕಾಗಿದೆ.
- ಹರ್ಷಕುಮಾರ್ ಕುಗ್ವೆ
ಚಿತ್ರಗಳು: ಬಿದ್ದ ಮಣ್ಣು ತುಂಬಿದ ಕಲ್ಲುಗಳು ಆನಂದಪುರ ಬಳಿ ಸಿಕ್ಕವು
ನಿಂತಿರುವ ಕಲ್ಲು- ಉಳವಿ ಕೆರೆಯ ಮೇಲಿನವು
Friday 20 December 2019
ಟಿ.ಇ.ಟಿ ಪರೀಕ್ಷೆ ತಯಾರಿಗೆ ಸೂಕ್ತ ಮಾರ್ಗಗಳು
ವೆಂಕಟಸುಬ್ಬರಾವ್..
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ.
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಟಿ.ಇ.ಟಿ.! ಹೀಗಾಗಿ, ಇಲ್ಲಿ ಕೇವಲ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ, ವೇಗವಾಗಿ ಉತ್ತರಿಸುವುದು ಮಾತ್ರವಲ್ಲ, ಮಕ್ಕಳ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರಿತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಿಗೆ ವಿದ್ಯಾಭ್ಯಾಸದ ಜೊತೆಗೆ, ಜೀವನದ ಮೌಲ್ಯಗಳು, ಆದರ್ಶಗಳನ್ನು ಕಲಿಸಬೇಕಾದ ಗುರುತರವಾದ ಜವಾಬ್ದಾರಿ ಇರುತ್ತದೆ. ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೆ ಮೊದಲು ಶಿಕ್ಷಕರು ಅವುಗಳನ್ನು ಪಾಲಿಸಬೇಕಾಗುತ್ತದೆ.
ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.
ಪದಜೋಡಣೆ ವಿಧಾನ
ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.
ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು?
ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು,
ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ!
ಇಲ್ಲಿ ಅವರಂಗಿ ಜೇಬು ಔರಂಗಜೇಬ್,
ಮುರಿದು - ಮುರಾದ್
ಸೂಜಿ - ಶೂಜ
ದಾರ - ದಾರ
ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ !
ಎಷ್ಟು ಸರಳ ಅಲ್ಲವೇ !
ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.
ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.
ಮೈಂಡ್ ಮ್ಯಾಪ್ ವಿಧಾನ
ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ.
ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ.
ಮೈಂಡ್ ಮ್ಯಾಪ್ನ ಒಂದು ಉದಾಹರಣೆ:
ಸರಳವಾದ ತಾಳೆ ನೋಡುವ ಪದ್ಧತಿ
ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ.
ಹೀಗೆ ತಾಳೆ ನೋಡಿ
ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2
ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು.
ಉದಾ : 123ರ ವರ್ಗ
ಎ) 15129 ಬಿ) 15139 ಸಿ) 25129 ಡಿ) 15229
ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ,
1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9
ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ.
ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ !
ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು!
ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.
(ಲೇಖಕರು .ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...