ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರಿ ಶಾಲಾ ಮಕ್ಕಳ ಆಟದ ಮೈದಾನ ನಿರ್ಮಾಣ, ಸ್ವಚ್ಛತೆ, ಶಾಲಾವನ ಮತ್ತು ಶಾಲಾ ಕೈತೋಟ ನಿರ್ವಹಣಾ ಕಾರ್ಯವನ್ನು ಸ್ವಯಂ ಸೇವಾ ಆಸಕ್ತಿಯಿಂದ ಸ್ವತಹ ನಿರ್ವಹಿಸಿ ಮಾದರಿಯಾಗಿದ್ದಾರೆ. ತಮ್ಮ ಊರಿಗೆ ಸರ್ಕಾರಿ ಶಾಲೆಯ ಬಗ್ಗೆಗಿನ ಕಾಳಜಿಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಮ್ಮ ಶಾಲೆ ನಮ್ಮ ಹೆಮ್ಮೆ ತಂಡ ಮತ್ತು ಮಕ್ಕಳ ಮಂದಾರ ತಂಡದ ವತಿಯಿಂದ ಪೋಷಕರ ಮಹಾಸಭೆ ಮತ್ತು ಸ್ವಚ್ಛತಾ ಸಪ್ತಾಹವನ್ನು ಆಯೋಜಿಸಲಾಗಿತ್ತು. ಈ ವರ್ಷ ಸುರಿದ ಅಧಿಕ ಮಳೆಯಿಂದ ಶಾಲಾ ಆವರಣ ಬೃಹತ್ ಕಳೆ, ಹುಲ್ಲಿನಿಂದಾಗಿ ಹಾವುಗಳ ಹಾವಳಿ ಅಧಿಕವಾಗಿತ್ತು. ಇದನ್ನು ಗಮನಿಸಿದ ಮುಖ್ಯ ಗುರುಗಳಾದ ರವಿಚಂದ್ರರವರು ಮಕ್ಕಳೊಂದಿಗೆ ತಾವೇ ಸ್ವತಹ ಶಾಲಾ ಸ್ವಚ್ಚತೆ ಆರಂಭಿಸಿ ಊರಿನ ಪಾಲಕರಿಗೆ ಶಾಲಾ ಸ್ವಚ್ಛತಾ ನಿರ್ವಹಣೆಗೆ ಬರುವಂತೆ ಕರೆ ನೀಡಿದ್ದರು. 20ಕ್ಕೂ ಅಧಿಕ ಪಾಲಕರು ತಮ್ಮ ಜವಾಬ್ದಾರಿ ಅರಿತು ಗುದ್ದಲಿ, ಕುಡುಗೋಲು ಹಿಡಿದುಕೊಂಡು ಬಂದು ಸುಮಾರು ಎರಡು ಎಕರೆಗಿಂತಲೂ ಅಧಿಕ ವಿಸ್ತೀರ್ಣ ಹೊಂದಿರುವ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಕೈತೋಟದ ಅಡಿಕೆ ಗಿಡ, ತೆಂಗಿನ ಮರ, ವಿವಿಧ ಹೂವಿನ ಗಿಡಗಳು ಮತ್ತು ಮತ್ತಿತರ ಗಿಡಗಳಿಗೆ ಮಣ್ಣು ಹಾಕುವುದು, ಕಳೆ ನಿರ್ವಹಣೆ, ಚರಂಡಿ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ಮಾಡಿ ತಮ್ಮ ಊರಿನ ಶಾಲೆಯನ್ನ ಸುಂದರಗೊಳಿಸಿದ್ದು ಶ್ಲಾಘನೀಯ ವಿಷಯವಾಗಿದೆ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಬೀರನ್ ಕುಟ್ಟಿ, ಮುಖ್ಯ ಶಿಕ್ಷಕರಾದ ರವಿಚಂದ್ರ, ಹಿರಿಯ ಶಿಕ್ಷಕರಾದ ಪರುಶುರಾಮಪ್ಪ ಅವರು ಸಹ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡು ಮಾರ್ಗದರ್ಶನ ಮಾಡಿದ್ದರು.