ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 5 August 2020

ಆಂದ್ರದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಶೋನಲ್ಲಿ ಗೆದ್ದ ಕರುನಾಡ ಸರ್ಕಾರಿ ಶಾಲೆ ಬಾಲಕಿ

ಆಂಧ್ರದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಶೋನಲ್ಲಿ  ಗೆದ್ದ ಕರುನಾಡ ಸರ್ಕಾರಿ ಶಾಲೆ ಬಾಲಕಿ.



ಟೀವಿ ನೋಡುತ್ತಲೇ   ನೃತ್ಯ ಮಾಡುವುದನ್ನು ಅಭ್ಯಾಸ ಮಾಡಿಕೊಂಡ   ಹಳ್ಳಿಯೊಂದರ ಪುಟ್ಟ  ಬಾಲಕಿಯ ಆಸಕ್ತಿ ಪ್ರತಿಭೆ ಕಂಡು ಪಾಲಕರು ಸೊರಬ ತಾಲೂಕಿನ ಸ್ಥಳೀಯ ನೃತ್ಯಶಾಲೆಯಲ್ಲಿ  ಅಭ್ಯಾಸಕ್ಕೆಂದು ಕಳಿಸಿದ ಮೂರನೇ ತಿಂಗಳಲ್ಲಿಯೇ  ಏಳನೇ ವಯಸ್ಸಿಗೆ  ಕರ್ನಾಟಕ ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ಆಡಿಷನ್ ಗೆ ಹಾಜರಾಗಿ ಬಿಡುತ್ತಾಳೆ. ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆಯಾಗಿದ್ದ ಆ ಪುಟ್ಟ ಬಾಲಕಿಗೆ ಏನಾದರೂ ಸಾಧಿಸಬೇಕೆಂಬ ಆಸಕ್ತಿ ಹೊರತುಪಡಿಸಿ ಬೇರೇನೂ ಇರಲಿಲ್ಲ. 


ಗೆಲ್ಲಲೇಬೇಕೆಂಬ ಛಲದಿಂದ ನಿರಂತರ ಪರಿಶ್ರಮ ಹಾಕಿದವರಿಗೆ ಪ್ರತಿಭೆ ಮೈಗೂಡಿ ಗೆಲುವಿನ ಮೈಲಿಗಲ್ಲು ಸಿಕ್ಕೆ ಸಿಗುತ್ತದೆ . ಆದರೆ ಕೆಲವೇ ಪ್ರತಿಭೆಗಳನ್ನು ಮಾತ್ರ ಮಾಧ್ಯಮಗಳು ಮತ್ತು ಸಮಾಜ ಹೊತ್ತುಕೊಂಡು ಮೆರೆಯುತ್ತದೆ. ಇನ್ನು ಕೆಲವರು ಪ್ರತಿಭೆಯಿದ್ದು ಪರಿಶ್ರಮಪಟ್ಟರೂ ಎಲೆಮರೆಯಂತೆ ಉಳಿಯಬೇಕಾಗುತ್ತದೆ. ಇಂದಿನ ಮಾಧ್ಯಮಗಳಂತೂ  ಕಂಟೆಂಟ್ ಗಿಂತ ಕಾಂಟ್ಯಾಕ್ಟ್ ಇದ್ದವರನ್ನು  ಮತ್ತಷ್ಟು ಮೆರೆಸುತ್ತವೆ. 

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ  ಉಳವಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ   ಮಹಾಲಕ್ಷ್ಮಿಯ ವಿಷಯದಲ್ಲಿ ಇದು ಅಪ್ಪಟ ಸತ್ಯ ಎನಿಸಿಬಿಟ್ಟಿದೆ. ಈ ಮಹಾ ಪ್ರತಿಭೆಯ  ಅದ್ಭುತ ಡ್ಯಾನ್ಸ್ ನೀವು ಸಹ ನೋಡಿರಬಹುದು. ಪ್ರತಿಯೊಂದು ಸಂಗೀತದ ಮಟ್ಟುಗಳನ್ನು ಕಿವಿಯಲ್ಲಿ ಹಾಗೆ ಹಿಡಿದಿಟ್ಟುಕೊಂಡು ಮಿಂಚಿನಂತೆ ಹೆಜ್ಜೆಹಾಕುವ , ಹಾಡಿಗೆ ಬೇಕಾದ ಭಾವವನ್ನು ತುಂಬುವ ವಿಶಿಷ್ಟ ನೃತ್ಯ ಪ್ರತಿಭೆ. ಯಾವ ನಗರದಲ್ಲಿಯು ವರ್ಷಾನುಗಟ್ಟಲೆ ತರಬೇತಿ ಪಡೆದಿಲ್ಲ. ಮನೆಯಲ್ಲಿ ಟಿವಿಯನ್ನು ನೋಡಿ ಪ್ರೇರಿತಳಾಗಿ ನಾಟ್ಯ ದೇವಿಯೇ ಮೈಮೇಲೆ ಬಂದವಳಂತೆ ನೃತ್ಯ ಮಾಡುವ ಇವಳನ್ನು ಕಂಡ ಮನೆಯ ಪೋಷಕರು ಮೂರು ತಿಂಗಳು ಸ್ಥಳೀಯ ನೈತ್ಯ ಶಾಲೆಯಲ್ಲಿ ಒಂದಿಷ್ಟು ತರಬೇತಿ ಪಡೆದು  ಏಳನೇ ವಯಸ್ಸಿಗೆ  ನೇರವಾಗಿ ಕನ್ನಡ ಕಲರ್ಸ್  ವಾಹಿನಿಯ ಕರ್ನಾಟಕ ಮಾಸ್ಟರ್ ಡ್ಯಾನ್ಸರ್ ಆಡಿಷನ್ನಿಗೇ ಬಾಗಿಲು ತಟ್ಟಿ ಧುಮುಕಿ ಬಿಟ್ಟಳು. ಪಾಲಕರು ಹಳ್ಳಿಯವರಾದರೂ  ಮಹಾಲಕ್ಷ್ಮಿ ನೃತ್ಯ ಆಸಕ್ತಿ ಕಂಡು ಉಳವಿಯ  ಸಣ್ಣಬೈಕ್ ಮೆಕಾನಿಕ್ ಆದ  ತಂದೆ ಉಮೇಶ್ ಹಾಗೂ ಅವರ ಮಾವ ಕಭಿ ಅವಳ ಪ್ರತಿಭೆಯನ್ನು ಪೋಷಿಸುವ ಕನಸು ಕಂಡರು.
    
   ಹೇಳಿಕೊಳ್ಳಲು ಯಾವ ಕಾಂಟ್ಯಾಕ್ಟ್ ಇಲ್ಲದ ಸರ್ಕಾರಿ ಶಾಲೆ ಹಳ್ಳಿ ಹುಡುಗಿ ಇನ್ನೂ ಎರಡನೇ ತರಗತಿಯ   ಲ್ಲಿದ್ದಾಗಲೇ    ಕಲರ್ಸ್ ಚಾನೆಲ್ನಲ್ಲಿನಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ   ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಈ ಮೊದಲು ಡ್ಯಾನ್ಸ್ ಮಾಡಿದವರಿಗಿಂತ ಭರ್ಜರಿ ಎಂಟ್ರಿ ಕೊಟ್ಟು  ಎಲ್ಲರಿಂದ ಶಭಾಷ್ ಗಿಟ್ಟಿಸಿದ್ದರೂ  ರನ್ನರ್ ಆಗಿ  ಆಯ್ಕೆಯಾಗಿ ತೃಪ್ತಿ ಪಡಬೇಕಾಯಿತು.
   
     ಆದರೂ ಅಪ್ಪಟ ಪ್ರತಿಭೆಯಾಗಿದ್ದ ಅವಳನ್ನು ತೆಲುಗಿನ ಜಿ ಟೀವಿ ಆಟ ಎನ್ನುವ ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ರಿಯಾಲಿಟಿ ಶೋಗೆ  ಅವಳಿನ್ನೂ ಮೂರನೇ ತರಗತಿ ಇದ್ದಾಗಲೇ  ಕೈಬೀಸಿ ಕರೆಸಿಕೊಂಡಿತ್ತು. ಅಲ್ಲಿ ಅವಳು ನೀಡಿದ ಪ್ರತಿಯೊಂದು  ಡ್ಯಾನ್ಸ್  ಶೋ ಎಲ್ಲಾ ತೆಲುಗು ಸಿನಿ ಪ್ರಿಯರಿಂದ ಮೆಚ್ಚುಗೆಗಳಿಸಿ ಸರಿಯಾಗಿ ತೆಲುಗು ಭಾಷೆ ಮಾತನಾಡಲು ಬಾರದ ಕರ್ನಾಟಕದ  ಹಳ್ಳಿಯ  ಕುವರಿ ತೆಲುಗು ನಾಡಿನ ಮನೆಮಗಳಾಗಿ ಮನೆಮನೆ ಮಾತಾದಳು. ಸ್ವತಹ ಚಿರಂಜೀವಿ ಶೋ ಒಂದಕ್ಕೆ ಬಂದು ಅವಳಿಗೆ ಬಹುಮಾನ ನೀಡಿದರು. ಆಟ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಗೆಲುವಿನ ಮಹಾಲಕ್ಷ್ಮಿ ಆದಳು. ಆನಂತರ  ತೆಲುಗು ನಾಡಲ್ಲಿ ಡ್ಯಾನ್ಸ್ ನ್ಸ್ ಜೋಡಿ ಡ್ಯಾನ್ಸ್ ಸೆಲೆಬ್ರಿಟಿ ಡ್ಯಾನ್ಸ್  ಶೋನಲ್ಲೂ  ಮಿಂಚಿದ್ದಳು. ಅವಳ ಡ್ಯಾನ್ಸ್ ಶೋ ತೆಲುಗು ಜೀ ಚಾನೆಲ್ ಗೆ ಬರೋಬ್ಬರಿ ಟಿ ಆರ್ ಪಿಯನ್ನು ತಂದುಕೊಟ್ಟಿತ್ತು. ಹೀಗಿದ್ದರೂ ನಮ್ಮ  ಕನ್ನಡ ನೆಲದ ಗ್ರಾಮೀಣ ಪ್ರತಿಭೆಯನ್ನು ಕನ್ನಡದ ಯಾವ ಚಾನೆಲ್ ಸಹ ಕರೆಸಿಕೊಂಡು ಅವಳನ್ನು ಅಭಿನಂದಿಸಲಿಲ್ಲ. ಅವಳಿಗೆ ಬೇರೆ ಬೇರೆ ಅವಕಾಶ ಕೊಡುವುದಿರಲಿ ,ಅವಳ ಕುರಿತು ಒಂದು ವಿಶೇಷ ಸಂದರ್ಶನ ಕೂಡ ಮಾಡಲಿಲ್ಲ. ಮುದ್ರಿಣ ಮಾಧ್ಯಮದಲ್ಲೂ ಅವಳ ಬಗ್ಗೆ  ವಿಶೇಷ ವರದಿ ಬಂದಿಲ್ಲ.
     
ಈಗಿನ ರಿಯಾಲಿಟಿ ಶೋಗಳೇ ಹೀಗೆ ,ದಿಡೀರನೆ  ಪ್ರಸಿದ್ಧಿ ಸಿಗುವುದಾದರೂ ಆನಂತರ ಬಾಲಪ್ರತಿಭೆ ದಾರಿ ಸುಲಭವೇನೂ ಆಗಿರುವುದಿಲ್ಲ. ಮಕ್ಕಳ ಪ್ರತಿಭೆಗಳನ್ನು ಬಳಸಿಕೊಂಡ ರಿಯಾಲಿಟಿ ಶೋಗಳ ಚಾನೆಲ್ ನವರು   ಹೊಸ ಅವಕಾಶವಾಗಳ ಬಾಗಿಲು ತೆರೆಯುವುದಿಲ್ಲ. ದಿಡೀರನೆ ಬಂದ ಪ್ರಸಿದ್ಧಿಯಿಂದ ಹಿಗ್ಗಿದ ಮಕ್ಕಳು ಮುಂದೆ  ಅದನ್ನೇ ತಲೆಯಲ್ಲಿಟ್ಟುಕೊಂಡು  ಯಾವ ಅವಕಾಶಗಳು ಸಿಗದಿದ್ದಾಗ ಖಿನ್ನರಾದ ಉದಾಹರಣೆಗಳನ್ನು ಕಂಡಿದ್ದೇವೆ. ಆದರೆ ನಿಜವಾದ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ  ಜವಾಬ್ದಾರಿಯುತ ವ್ಯವಸ್ಥೆ  ನಮ್ಮದಾಗಬೇಕು. 

ಮಾಧ್ಯಮಗಳಲ್ಲಿ  ಯಾರನ್ನೋ  ಕರೆದುಕೊಂಡು ಕೂರಿಸಿ ಮೆರೆಸಿ ಅದನ್ನೇ ಮನರಂಜನೆಯ ಸರಕನ್ನಾಗಿ ನೀಡಿದರೂ ಅನಿವಾರ್ಯ ಪ್ರೇಕ್ಷಕರಾಗಿ  ನಾವು ಕೈಚೆಲ್ಲಿ ಕೂತಿದ್ದೇವೆ. ಹಲವಾರು ನೈಜ ಪ್ರತಿಭೆಗಳು ಇನ್ನು ಎಲೆಮರೆಯಲ್ಲಿವೆ.

ಇತ್ತೀಚೆಗೆ ಮಹಾಲಕ್ಷ್ಮಿ  ದಂತಪುರಾಣ ಎನ್ನುವ ಸಿನಿಮಾವೊಂದರಲ್ಲಿ ಅಭಿನಯಿಸಿ ಬಂದಿದ್ದಾಳೆ. ಕನಸು ಮನಸಿನಲ್ಲೂ ನೃತ್ಯವನ್ನು ಉಸಿರಾಡುವ ಅವಳು ಹೊಸ ಅವಕಾಶಗಳ ನಿರೀಕ್ಷೆಯಲ್ಲಿದ್ದಾಳೆ. ಸಾಹಿತ್ಯ, ಕಲೆ ಸಂಸ್ಕೃತಿ, ಮಲೆನಾಡಿನ ಹಸಿರು ಸಿರಿಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಈ  ಬಾಲ ಪ್ರತಿಭೆ ಈಗಿನ್ನೂ 5 ನೇ ತರಗತಿ. ಕನ್ನಡ ಮಾಧ್ಯಮಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಅವಳಿಗೆ ಸೂಕ್ತ ಅವಕಾಶ ನೀಡಲಿ ಎಂಬುದೇ ಅವಳ ಅಭಿಮಾನಿಗಳ ಆಶಯ.


 ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ವಿಶಿಷ್ಟವಾದ ಪ್ರತಿಭೆಯನ್ನು  ಕನ್ನಡದ ಮಾಧ್ಯಮಗಳು ಇನ್ನು ಸರಿಯಾಗಿ ಬಳಸಿಕೊಂಡಿಲ್ಲ.  ಯಾಕೆ ಹೀಗಾಯ್ತು ಎನ್ನುವ ಕೊರಗು ಅವಳ ನೃತ್ಯ ಪ್ರತಿಭೆ ಕಂಡ ನಮ್ಮಲ್ಲಿ ಹಾಗೆ ಉಳಿದಿದೆ. ಇಂತಹ ಹಲವಾರು  ಬೇರೆ ಬೇರೆ ಕ್ಷೇತ್ರದ ಪ್ರತಿಭೆಗಳು ಹಳ್ಳಿಗಳಲ್ಲಿ ನಗರಗಳಲ್ಲಿ ಇದ್ದಾರೆ.
 ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತೇವೆ  ಎನ್ನುವ  ಮಕ್ಕಳ ಕಲ್ಯಾಣ ಇಲಾಖೆಗಳು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳು,ಬಾಲವಿಕಾಸ ಅಕಾಡೆಮಿಗಳು ಇಂತಹ  ಅಪ್ಪಟ ಬಾಲಪ್ರತಿಭೆಗಳಿಗೆ  ವಿಶೇಷ ಗಮನಹರಿಸಿ ವಿಶೇಷ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಿದಲ್ಲಿ ಅಂಥವರು ನಾಡಿಗೆ ದೊಡ್ಡ ಆಸ್ತಿ ಆಗುವುದರಲ್ಲಿ ಅನುಮಾನವಿಲ್ಲ.  ಹಿಂದೆ ಸಾಧಿಸಿದ ಸಾಧಕರನ್ನು ಸ್ಮರಿಸಲು , ಆಚರಣೆಗಳನ್ನು ಮಾಡಲು, ಪ್ರತಿಮೆಗಳನ್ನು ನಿರ್ಮಿಸಲು  ಕೋಟಿ ಕೋಟಿ ಹಣ ವ್ಯಯಿಸುವ ಸರ್ಕಾರಿ ಇಲಾಖೆಗಳು, ಹೇಳಿದ್ದೆ ಹೇಳಿ ಮೆರೆಸುವ ಮಾಧ್ಯಮಗಳು ಇಂದು ನಮ್ಮ ಜೊತೆ ಇರುವ ಪ್ರತಿಭೆಗಳನ್ನು ಸಾಧಕರನ್ನಾಗಿಸಲು ಶ್ರಮಿಸಬೇಕು . ನೇರವಾಗಿ ಪ್ರತಿಭೆಗಳನ್ನು ಗುರುತಿಸಿ , ಮಾಧ್ಯಮಗಳು,
 ಇಲಾಖೆಗಳು ಪ್ರತಿಭೆಗಳ ಮನೆಗೆ ಹೋಗುವಂತಾಗಬೇಕು.
 ಇಲಾಖೆಯ ಹಿಂದೆ ಮುಂದೆ ಅಲೆದವರಿಗೆ ಮಾತ್ರ ಸರ್ಕಾರಿ ಸೇವೆ ಸೀಮಿತವಾಗದೆ ಇಲಾಖೆಯತ್ತ ಬರಲು ಆಗದ ಪ್ರತಿಭೆಗಳತ್ತ ಇಲಾಖೆ ಸಾಗಬೇಕು. ಯಾವ ಮಾಧ್ಯಮಗಳನ್ನು ಬಲ್ಲವರಲ್ಲದ ತಲುಪರವರನ್ನೂ  ತಲುಪುವಲ್ಲಿ ಮಾಧ್ಯಮಗಳು ಸಾಮಾಜಿಕ ಇಚ್ಚಾಶಕ್ತಿ ಪ್ರದರ್ಶಿಸಬೇಕು.

ರವಿರಾಜ್ ಸಾಗರ್.ಮಂಡಗಳಲೆ.
ಜಿಲ್ಲಾಧ್ಯಕ್ಷರು.
 ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
 9980952630
 rvc.md8@gmail.com.

Friday 31 July 2020

ನಮ್ಮೂರ ವಠಾರ ಶಾಲೆ/vataara shaale

ನಮ್ಮ ಶಾಲಾ ಮಕ್ಕಳಿಗಾಗಿ ವಠಾರ ಶಾಲೆ

https://youtu.be/WMu17wnfugA
ನಮ್ಮೂರ ವಠಾರ ಶಾಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ. ಮಾನ್ವಿ ತಾಲೂಕು.
ಗ್ರಾಮದ ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಯಶಸ್ವಿ ಮಠರ ಶಾಲೆ. ಮೇಲಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ.

https://youtu.be/WMu17wnfugA