ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 16 April 2017

ಮಹಾಭಾರತದಲ್ಲಿ ಕೊನೆವರೆಗೂ ಬದುಕುಳಿದವರು ಯಾರು...

ಮಹಾಭಾರತದ ಸಾರ ದರ್ಶನ

ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ ....
ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ ..
ಸಹಸ್ರ ಸಹಸ್ರ ಗಂಡಾನೆಗಳ ಭೀಮ ನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ
ಧರ್ಮರಾಜ ನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!
ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..
ಧರ್ಮರಾಜನಲ್ಲಿ ದ್ದ ಏಕೈಕ
ಸಂಪತ್ತೆಂದರೆ “ ಧರ್ಮ “..!
ಹುಟ್ಟು ಹೆಸರು
ಯುಧಿಷ್ಠಿರ ನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
“ ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು ” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..
ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನ ಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!
ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..
ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!
ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.
ಮರಣ ವು ಅವರಿಗೆ ಮಹೋತ್ಸವವೇ ಆಗಿತ್ತು.!
ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.
ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:” ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!? ”
ಧರ್ಮರಾಜ ಉತ್ತರಿಸಿದ, “ ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು ”
ಮುಂದೆ ಸಾಗುತ್ತಿದ್ದಂತೆಯೇ
ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣ, ಸಹದೇವನಿಗೇಕೆ ಹೀಗಾಯಿತು? ”
ಧರ್ಮರಾಜ ಉತ್ತರಿಸಿದ: “ ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”
ಮತ್ತೆ ಕುಸಿದವನು ನಕುಲ , ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ” ವಾಯಿತೆಂದು ಧರ್ಮರಾಜ ಉತ್ತರಿಸಿದ.
ಮತ್ತೆ ಮೃತ್ಯುವಿನ ಸರದಿ
ಅರ್ಜುನ ದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:” ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು? ”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..
ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!
ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”
ಮಹಾಪ್ರಸ್ಥಾನ ಮುಂದುವರೆಯಿತು..
ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮ ನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ? ”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.
ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”
ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.
“ ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ “ದ ಧರ್ಮರಾಜ.
“ ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.
ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.
“ ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು. ”
ಚಕಿತನಾದ ಇಂದ್ರ ಹೇಳಿದ, “ ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ “. (Dogs are not allowed..!)
“ ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!
ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?
ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?
ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!
ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!
ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?
ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?
ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?
ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …

*"*" ಭೋಜರಾಜನ ಜೀವನಸಂದೇಶವನ್ನು ಗಮನಿಸಿ:
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||

(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)

*** ಧರ್ಮ ವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು ..!!
... ಸಂಗ್ರಹ..

Monday 10 April 2017

ಮಾರುತಿ ಮಹಿಮೆ

*ಮಾರುತಿ ಜನ್ಮದ ಇತಿಹಾಸ*

ರಾಜಾ ದಶರಥನು ಪುತ್ರಪ್ರಾಪ್ತಿಗಾಗಿ *‘ಪುತ್ರಕಾಮೇಷ್ಟಿ ಯಜ್ಞ’*ವನ್ನು ಮಾಡಿದನು. ಆಗ ಯಜ್ಞದಿಂದ ಅಗ್ನಿದೇವನು ಪ್ರತ್ಯಕ್ಷನಾಗಿ ದಶರಥನ ರಾಣಿಯರಿಗಾಗಿ ಪಾಯಸ (ಖೀರು, ಯಜ್ಞದಲ್ಲಿನ ಉಳಿದ ಪ್ರಸಾದ) ವನ್ನು ನೀಡಿದನು. ದಶರಥನ ರಾಣಿಯರಂತೆಯೇ ತಪಸ್ಸನ್ನು ಮಾಡುವ *ಅಂಜನೀಗೂ ಪಾಯಸವು ದೊರಕಿತ್ತು ಮತ್ತು ಅದರಿಂದಲೇ ಮಾರುತಿಯ ಜನ್ಮವಾಗಿತ್ತು.*

ಆ ದಿನ *ಚೈತ್ರ ಪೌರ್ಣಿಮೆಯಾಗಿತ್ತು.* ಈ ದಿನವನ್ನು *‘ಹನುಮಾನ್ ಜಯಂತಿ’* ಎಂದು ಆಚರಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ *(ಕಿಷ್ಕಿಂಧಾಕಾಂಡ, ಅಧ್ಯಾಯ ೬೬)*

*ಹನುಮಂತ ಜಯಂತಿ*

*ತಿಥಿ :* ಕೆಲವು ಪಂಚಾಂಗಗಳ ಪ್ರಕಾರ *ಆಶ್ವಯುಜ ಕೃಷ್ಣ ಚತುರ್ದಶಿಯು* ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ *ಚೈತ್ರ ಹುಣ್ಣಿಮೆಯು* ಹನುಮಂತನ ಜನ್ಮತಿಥಿಯಾಗಿದೆ. *ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.*

*ಮಹತ್ವ : ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ‘ಶ್ರೀ ಹನುಮತೇ ನಮಃ|’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.*

*ಉತ್ಸವವನ್ನು ಆಚರಿಸುವ ಪದ್ಧತಿ :* ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ.

*ಕಾರ್ಯ ಮತ್ತು ವೈಶಿಷ್ಟ್ಯಗಳು*

*ಸರ್ವಶಕ್ತಿವಂತ :* ಹುಟ್ಟಿದ ಕೂಡಲೇ *ಮಾರುತಿಯು ಸೂರ್ಯನನ್ನು ನುಂಗಲು ಹಾರಿದನು ಎಂಬ ಕಥೆಯಿದೆ,* ಇದರಿಂದ *ವಾಯುಪುತ್ರ* (ಅಂದರೆ ವಾಯುತತ್ತ್ವದಿಂದ ನಿರ್ಮಾಣವಾದ) ಮಾರುತಿಯು ಸೂರ್ಯನನ್ನು (ತೇಜತತ್ತ್ವ ವನ್ನು) ಜಯಿಸುವವನಾಗಿದ್ದನು ಎನ್ನುವುದು ತಿಳಿಯುತ್ತದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳಲ್ಲಿ ವಾಯುತತ್ತ್ವವು ತೇಜತತ್ತ್ವಕ್ಕಿಂತಲೂ ಹೆಚ್ಚು ಸೂಕ್ಷ್ಮ, ಅಂದರೆ ಹೆಚ್ಚು ಶಕ್ತಿಯುಳ್ಳದ್ದಾಗಿದೆ.

*ಭೂತ ಮತ್ತು ಮಾರುತಿ :* ಎಲ್ಲ ದೇವತೆಗಳಲ್ಲಿ ಕೇವಲ ಮಾರುತಿಗೆ ಮಾತ್ರ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದಿಲ್ಲ. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರು, ಆದರೆ ಅವರಿಗೆ ಮಾರುತಿಗೆ ತೊಂದರೆ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾರುತಿಗೆ *‘ಭೂತಗಳ ಸ್ವಾಮಿ’* ಎನ್ನುತ್ತಾರೆ. ಯಾರನ್ನಾದರೂ ಭೂತವು ಹಿಡಿದಿದ್ದರೆ, ಆ ವ್ಯಕ್ತಿಯನ್ನು ಮಾರುತಿಯ ದೇವಸ್ಥಾನಕ್ಕೆ ಒಯ್ಯುತ್ತಾರೆ ಅಥವಾ ಮಾರುತಿ ಸ್ತೋತ್ರವನ್ನು ಪಠಿಸುತ್ತಾರೆ. ಇದರಿಂದ ಅವನ ತೊಂದರೆಗಳು ಕಡಿಮೆಯಾಗದಿದ್ದರೆ ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸಿ ಮಾರುತಿಯ ದೇವಸ್ಥಾನದಲ್ಲಿ ಒಡೆಯುತ್ತಾರೆ.
ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸುವುದರಿಂದ ಅವನಲ್ಲಿದ್ದ ಕೆಟ್ಟ ಶಕ್ತಿಯು ತೆಂಗಿನಕಾಯಿಯಲ್ಲಿ ಪ್ರವೇಶಿಸುತ್ತದೆ ಮತ್ತು ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದರಿಂದ ಅದರಲ್ಲಿರುವ ಕೆಟ್ಟ ಶಕ್ತಿಯು ಮಾರುತಿಯ ಸಾಮರ್ಥ್ಯದಿಂದ ನಾಶವಾಗುತ್ತದೆ. ನಂತರ ಆ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುತ್ತಾರೆ.

*ಮಹಾಪರಾಕ್ರಮಿ :* ರಾಮ-ರಾವಣರ ಯುದ್ಧದಲ್ಲಿ ಬ್ರಹ್ಮಾಸ್ತ್ರದಿಂದ ರಾಮ, ಲಕ್ಷ್ಮಣ, ಸುಗ್ರೀವ ಇತ್ಯಾದಿ ವೀರರು ಮೂರ್ಛೆ ಹೋದಾಗ ಜಾಂಬವಂತನು ಹನುಮಂತನ ಪರಾಕ್ರಮದ ಬಗ್ಗೆ ಹೀಗೆ ವರ್ಣನೆ ಮಾಡಿದ್ದನು – ವಾನರಶ್ರೇಷ್ಠ ಹನುಮಂತನು ಜೀವಂತವಾಗಿದ್ದಾಗ ಎಲ್ಲ ಸೈನ್ಯವು ಮರಣ ಹೊಂದಿದರೂ ಅವರು ಮರಣ ಹೊಂದದಂತೆ ಆಗಿದೆ; ಆದರೆ ಹನುಮಂತನು ಪ್ರಾಣತ್ಯಾಗ ಮಾಡಿದರೆ ನಾವು ಜೀವಂತವಾಗಿದ್ದರೂ ಮೃತರಾದಂತೆಯೇ ಆಗಿದೆ. ಹನುಮಂತನು ಜಂಬು-ಮಾಲಿ, ಅಕ್ಷ, ಧೂಮ್ರಾಕ್ಷ, ನಿಕುಂಭ ಇತ್ಯಾದಿ ಬಲಾಢ್ಯ ವೀರರನ್ನು ನಾಶ ಮಾಡಿದನು. ಅವನು ರಾವಣನನ್ನೂ ಮೂರ್ಛಿತಗೊಳಿಸಿದನು. ಸಮುದ್ರ ಉಡ್ಡಾಣ, ಲಂಕೆಯ ದಹನ, ದ್ರೋಣಗಿರಿ ಪರ್ವತವನ್ನು ತರುವುದು ಇತ್ಯಾದಿ ಘಟನೆಗಳು ಹನುಮಂತನ ಶೌರ್ಯದ ಪ್ರತೀಕವಾಗಿವೆ.

*ಜಿತೇಂದ್ರಿಯ :* ಸೀತೆಯನ್ನು ಶೋಧಿಸಲು ರಾವಣನ ಅಂತಃಪುರದೊಳಗೆ ಪ್ರವೇಶಿಸಿದ ಮಾರುತಿಯ ಮನಃಸ್ಥಿತಿಯು ಅವನ ಉಚ್ಚಚಾರಿತ್ರ್ಯದ ನಿದರ್ಶಕವಾಗಿದೆ. ಅವನು ಸ್ವತಃ ಹೇಳುತ್ತಾನೆ, *‘ನಿಶ್ಚಿಂತೆಯಿಂದ ಬಿದ್ದಿರುವ ಈ ಎಲ್ಲ ರಾವಣನ ಸ್ತ್ರೀಯರನ್ನು ನಾನು ಹೀಗೆ ನೋಡಿರುವುದು ನಿಜ, ಆದರೆ ಅವರನ್ನು ನೋಡಿ ನನ್ನ ಮನಸ್ಸಿನಲ್ಲಿ ವಿಕಾರವುಂಟಾಗಲಿಲ್ಲ’* (ಶ್ರೀವಾಲ್ಮೀಕಿರಾಮಾಯಣ, ಸುಂದರಕಾಂಡ, ಅಧ್ಯಾಯ ೧೧, ಶ್ಲೋಕ ೪೨, ೪೩) ಅನೇಕ ಸಂತರೂ ಈ ಜಿತೇಂದ್ರಿಯ ಮಾರುತಿಯ ಪೂಜೆಯನ್ನು ಮಾಡಿ ಅವನ ಆದರ್ಶವನ್ನು ಸಮಾಜದ ಮುಂದೆ ಇಟ್ಟಿದ್ದಾರೆ.

*ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ :* ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಹನುಮಂತನು ಧರಿಸಿರುವ ಜನಿವಾರವು ಬ್ರಾಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ.

*ಹನುಮಂತನಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ* ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಾಶ ಮಾಡುತ್ತಿದ್ದರು.

*ಉಪಾಸನೆ*

*ಉದ್ದೇಶ :* ಮಾರುತಿಯಲ್ಲಿನ ಪ್ರಕಟ ಶಕ್ತಿಯು (ಶೇ.೭೨) ಇತರ ದೇವತೆಗಳ ಪ್ರಕಟ ಶಕ್ತಿಯ (ಶೇ.೧೦) ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿರುವುದರಿಂದ ಮುಂದಿನ ಕಾರಣಗಳಿಗಾಗಿ ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ.

*ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಉಪಾಸನೆ:* ಸಮಾಜದಲ್ಲಿನ ಶೇ.೧೦೦ರಷ್ಟು ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವು ಬಾರಿ ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ. ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ಅಡಚಣೆಗಳನ್ನೂ ನಿರ್ಮಿಸುತ್ತವೆ; ಆದರೆ ದುರ್ದೈವದಿಂದ ಬಹುತೇಕ ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಸಮಾಜದಲ್ಲಿನ ಕೆಲವು ಜನರು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಂತ್ರಿಕ ಅಥವಾ ಭಗತರ ಕಡೆಗೆ ಹೋಗುತ್ತಾರೆ.
ಆದರೆ ಅವರು ಮಾಡಿದ ಉಪಾಯವು ಹೆಚ್ಚಿನಾಂಶ ತಾತ್ಕಾಲಿಕವಾಗಿರುತ್ತದೆ. ಕೆಲವು ಸಮಯದ ನಂತರ ಕೆಟ್ಟ ಶಕ್ತಿಗಳು ಆ ವ್ಯಕ್ತಿಗೆ ಪುನಃ ತೊಂದರೆಗಳನ್ನು ಕೊಡಬಹುದು. ಹೆಚ್ಚಿನಾಂಶ ಮಾಂತ್ರಿಕ ಮತ್ತು ಭಗತರು ಮೋಸಗಾರರಾಗಿರುತ್ತಾರೆ. ಅವರು ಜನರನ್ನು ಮೋಸಗೊಳಿಸುತ್ತಾರೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಕಪಟ ಮಾಂತ್ರಿಕ ಮುಂತಾದವರ ಕೈಯಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮತ್ತು ಮುಗಿಯದ ಕರ್ಮಕಾಂಡಗಳನ್ನು ಮಾಡುವುದಕ್ಕಿಂತ ಸಾಧನೆ ಮಾಡುವುದೇ ಪ್ರಭಾವಿ ಉಪಾಯವಾಗಿದೆ.

ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯನ್ನು ಮಾಡುವ ದೇವತೆಗಳಲ್ಲಿ ಮಾರುತಿಯು ಒಬ್ಬನು. ಮಾರುತಿಯ ನಾಮಜಪದಿಂದ *ಕೆಟ್ಟ ಶಕ್ತಿಗಳ ತೊಂದರೆಯಿಂದ ಶಾಶ್ವತವಾಗಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಸನಾತನ ಸಂಸ್ಥೆಯ ಸತ್ಸಂಗಗಳಲ್ಲಿ ಹೇಳಲಾಗುತ್ತದೆ.*

*ರೋಗನಿವಾರಣೆ :* ರೋಗಿ ವ್ಯಕ್ತಿಗಳಿಗೆ ಒಳ್ಳೆಯದಾಗಲು ಅವರನ್ನು ಹನುಮಂತನ ದೇವಸ್ಥಾನಕ್ಕೆ ಕರೆದೊಯ್ಯುವ ಪದ್ಧತಿಯಿದೆ. *ರೋಗಗಳಿಂದ ಮುಕ್ತರಾಗಲು ವೀರಹನುಮಂತನ ಮಂತ್ರವನ್ನೂ ಪಠಿಸುತ್ತಾರೆ.*

*ಮಾರುತಿಯ ಪೂಜೆ ಅಥವಾ ಉಪಾಸನೆಯ ಮೊದಲು ಬಿಡಿಸಬೇಕಾದ ರಂಗೋಲಿ*

*ಮಧ್ಯದ ಬಿಂದುವಿನಿಂದ ಅಷ್ಟದಿಕ್ಕುಗಳಲ್ಲಿ ೪ ಚುಕ್ಕಿಗಳನ್ನು ಹಾಕಬೇಕು.*
*ಈ ರಂಗೋಲಿಯು ಮಾರುತಿ ತತ್ತ್ವವನ್ನು ಆಕರ್ಷಿಸುತ್ತದೆ ಮತ್ತು ಪ್ರಕ್ಷೇಪಿಸುತ್ತದೆ*
(Image attached)

*ಮಾರುತಿ ಗಾಯತ್ರಿ*

*ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|*
*ತನ್ನೋ ವೀರಃ ಪ್ರಚೋದಯಾತ್||*

ಅರ್ಥ: ನಾವು ಅಂಜನೀಪುತ್ರ ಮಾರುತಿಯನ್ನು ಅರಿತಿದ್ದೇವೆ. ವಾಯುಪುತ್ರ ಮಾರುತಿಯ ಧ್ಯಾನವನ್ನು ಮಾಡುತ್ತೇವೆ. ಆ ವೀರ ಮಾರುತಿಯು ನಮ್ಮ ಬುದ್ಧಿಗೆ ಸತ್ಪ್ರೇರಣೆ ಕೊಡಲಿ.

(ಹೆಚ್ಚಿನ ಮಾಹಿತಿಗಾಗಿ *ಸನಾತನ ಸಂಸ್ಥೆಯ* ಕಿರುಗ್ರಂಥ *‘ಮಾರುತಿ’* ಓದಿರಿ.)

*ಮಾರುತಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು*

*ಹೇ ಮಾರುತಿ, ನೀನು ಹೇಗೆ ಶ್ರೀರಾಮಚಂದ್ರನ ದಾಸ್ಯಭಕ್ತಿಯನ್ನು ಮಾಡಿದೆಯೋ, ಹಾಗೆಯೇ ನನಗೂ ಭಕ್ತಿಯನ್ನು ಮಾಡಲು ಕಲಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!*

*ಹೇ ಮಾರುತಿ, ಧರ್ಮರಕ್ಷಣೆಗಾಗಿ ನೀನು ನನಗೆ ಭಕ್ತಿ ಮತ್ತು ಶಕ್ತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!*

*ಹೇ ಮಾರುತಿ, ಹೇಗೆ ನೀನು ರಾಮನಾಮದ ಬಲದಿಂದ ಅಧರ್ಮಿ ಅಸುರರನ್ನು ನಾಶ ಮಾಡಿದೆ, ಹಾಗೆ ಈಗ ನಡೆಯುತ್ತಿರುವ ಧರ್ಮ-ಅಧರ್ಮದ ಹೋರಾಟದಲ್ಲಿ ನಮಗೆ ‘ಸಾಧನೆ’ಯೆಂದು ರಾಷ್ಟ್ರರಕ್ಷಣೆ, ಧರ್ಮರಕ್ಷಣೆ ಇವುಗಳ ಕಾರ್ಯವನ್ನು ಮಾಡಲು ಆಶೀರ್ವಾದ ಮತ್ತು ಬಲವನ್ನು ಕೊಡು!*

(ಪ್ರಾರ್ಥನೆಯ ಬಗೆಗಿನ ಸವಿಸ್ತಾರ ವಿವೇಚನೆ ಮತ್ತು ವಿವಿಧ ಪ್ರಸಂಗಗಳಲ್ಲಿ ಮಾಡಬೇಕಾದ ಪ್ರಾರ್ಥನೆಗಳನ್ನು *ಸನಾತನ ಸಂಸ್ಥೆ* ನಿರ್ಮಿಸಿದ *‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’* ಈ ಕಿರುಗ್ರಂಥದಲ್ಲಿ ಕೊಡಲಾಗಿದೆ.)
ಸಂಗ್ರಹ

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...